ಕೈ-ಜೆಡಿಎಸ್ ದೋಸ್ತಿಗೆ ಬಂಪರ್ : ಬಿಜೆಪಿಗೆ ಮುಖಭಂಗ-'ಕಣ್ಮರೆ ಖಚಿತ'
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ಒಲಿದಿದೆ. ಈ ಗೆಲುವಿನಿಂದಾಗಿ ಬಿಜೆಪಿ ಮುಖಂಡರು ಮುಖಭಂಗ ಅನುಭವಿಸಿದ್ದಾರೆ.
ಕೆ.ಆರ್.ಪೇಟೆ (ಏ.20): ಸೊಂದಘಟ್ಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟ ಗೆಲುವು ಸಾಧಿಸಿದೆ. ಬಿಜೆಪಿ ಮುಖಭಂಗ ಅನುಭವಿಸಿದೆ.
ಸಂಘದ ಒಟ್ಟು 12 ನಿರ್ದೇಶಕರ ಸ್ಥಾನಗಳಲ್ಲಿ ಒಬ್ಬರು ಜೆಡಿಎಸ್ ಬೆಂಬಲಿಗ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಚುನಾವಣೆ ನಡೆದ 11 ಸ್ಥಾನಗಳಲ್ಲಿ ಜೆಡಿಎಸ್ 8 ಮತ್ತು ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಗೆಲುವು ಸಾಧಿಸಿ ಬಿಜೆಪಿ ಓರ್ವ ಅಭ್ಯರ್ಥಿಯೂ ಗೆಲುವು ಸಾಧಿಸದಂತೆ ನೋಡಿಕೊಂಡಿದ್ದಾರೆ.
ಜೆಡಿಎಸ್ ಭದ್ರಕೋಟೆ ಸಾಬೀತು : ಸೂರಜ್ ರೇವಣ್ಣ ಎಂಟ್ರಿ ..
ಸಾಮಾನ್ಯ ಕ್ಷೇತ್ರದಿಂದ ಸತೀಶ್ ಕೇವಲ 1 ಮತದಿಂದ ಜಯಗಳಿಸಿದರೆ ಉಳಿದಂತೆ ಎಸ್. ಆನಂದ್, ಈರಯ್ಯ, ನಾಗೇಶ್, ನಂಜಮ್ಮ, ಎಸ್.ಎಂ.ಮಂಜೇಗೌಡ. ಮಂಜಮ್ಮ, ಮಂಜೇಗೌಡ, ಎಸ್.ಮಂಜೇಗೌಡ, ವಸಂತಕುಮಾರ್, ಶಿವಕುಮಾರ್ ಗೆಲುವು ಸಾಧಿಸಿದ್ದಾರೆ.
ಚುನಾವಣೆಯ ಗೆಲುವಿನ ಅನಂತರ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಜಿಂ ಪಂ ಸದಸ್ಯ ಎಚ್.ಟಿ. ಮಂಜು ತಾಲೂಕಿನಲ್ಲಿ ಜೆಡಿಎಸ್ ಸುಭದ್ರ ನೆಲೆಗಟ್ಟನ್ನು ಹೊಂದಿದ್ದು ಮತದಾರರು ಜೆಡಿಎಸ್ ಪಕ್ಷವನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಮುಂಬರುವ ತಾ.ಪಂ. ಹಾಗೂ ಜಿಪಂ ಚುನಾವಣೆಗಳಲ್ಲಿಯೂ ಮತದಾರರು ಜೆಡಿಎಸ್ ಪಕ್ಷವನ್ನು ಕೈ ಹಿಡಿಯಲಿದ್ದಾತರ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತು ಬಿಜೆಪಿ ಪಕ್ಷವನ್ನು ಮತದಾರರು ತಿರಸ್ಕರಿಸುತ್ತಿದ್ದು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಕಣ್ಮರೆಯಾಗಲಿದೆ ಎಂದರು.