ಬಸ್ಸನ್ನು ಜಾಲಹಳ್ಳಿ ಕ್ರಾಸ್‌ನಲ್ಲಿ ಏರಿದ್ದ ಕೆಲವು ಮಹಿಳೆಯರು ಗುರುತಿನ ಚೀಟಿಯಾಗಿ ಆಧಾರ್‌ ಜೆರಾಕ್ಸ್‌ ತೋರಿಸಿದ್ದಾರೆ. ಇದನ್ನು ಒಪ್ಪದ ಕಂಡಕ್ಟರ್‌, ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದ್ದಾನೆ. ಅವರನ್ನು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿಸಿದ್ದಾನೆ. 

ದಾಸರಹಳ್ಳಿ(ಜೂ.14): ಶಕ್ತಿ ಯೋಜನೆಯಡಿ ರಾಜ್ಯದ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದ್ದರೂ, ಗುರುತಿನ ಚೀಟಿಯಾಗಿ ಜೆರಾಕ್ಸ್‌ ಪ್ರತಿ ತೋರಿಸಿದ್ದಕ್ಕೆ ಆ ಮಹಿಳೆಯರನ್ನು ಬಸ್‌ನಿಂದ ಕೆಳಗೆ ಇಳಿಸಿದ ಘಟನೆ ಬೆಂಗಳೂರಿನಲ್ಲೇ ನಡೆದಿದೆ. ಅಲ್ಲದೆ ಮತ್ತೊಬ್ಬ ಮಹಿಳೆಗೆ ಕಂಡಕ್ಟರ್‌ 5 ಟಿಕೆಟ್‌ ನೀಡಿದ್ದಾನೆ.

ನೇತ್ರಾವತಿ ಎಂಬುವವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯಿಂದ ಬಾಗಲಗುಂಟೆಗೆ ಪ್ರಯಾಣಿಸಬೇಕಿತ್ತು. ಅವರು ಮೆಜೆಸ್ಟಿಕ್‌ನಿಂದ ಹೆಸರುಘಟ್ಟಕ್ಕೆ ತೆರಳುತ್ತಿದ್ದ ಬಿಎಂಟಿಸಿ ಡಿಪೋ-22 (ಪೀಣ್ಯ)ರ (ಕೆಎ01 ಎಫ್‌ಎ 2079) ಬಸ್ಸನ್ನು ಮಧ್ಯಾಹ್ನ ಏರಿದ್ದಾರೆ. ಅವರು ಆಧಾರ್‌ ಕಾರ್ಡ್‌ ನಕಲನ್ನು ಕಂಡಕ್ಟರ್‌ಗೆ ತೋರಿಸಿದ್ದಕ್ಕೆ ‘ಈ ಪ್ರತಿ ನಡೆಯುವುದಿಲ್ಲ, ಒರಿಜಿನಲ್‌ ತೋರಿಸಿ’ ಎಂದು ಕಂಡಕ್ಟರ್‌ ಹೇಳಿದ್ದಾನೆ. ಬಳಿಕ ಆತ ನೇತ್ರಾವತಿ ಅವರಿಂದ .5 ಪಡೆದು ಟಿಕೆಟ್‌ ಹರಿದಿದ್ದಾನೆ.

Shakti scheme: 2ನೇ ದಿನ 41 ಲಕ್ಷ ಸ್ತ್ರೀಯರ ಉಚಿತ ಬಸ್‌ ಯಾನ

ಮಹಿಳೆಯರನ್ನು ಕೆಳಗಿಳಿಸಿದ:

ಅದೇ ಬಸ್ಸನ್ನು ಜಾಲಹಳ್ಳಿ ಕ್ರಾಸ್‌ನಲ್ಲಿ ಏರಿದ್ದ ಕೆಲವು ಮಹಿಳೆಯರು ಗುರುತಿನ ಚೀಟಿಯಾಗಿ ಆಧಾರ್‌ ಜೆರಾಕ್ಸ್‌ ತೋರಿಸಿದ್ದಾರೆ. ಇದನ್ನು ಒಪ್ಪದ ಕಂಡಕ್ಟರ್‌, ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದ್ದಾನೆ. ಅವರನ್ನು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿಸಿದ್ದಾನೆ. ಈ ವೇಳೆ ಕೆಲವು ಮಹಿಳೆಯರು ನಿರ್ವಾಹಕನ ವಿರುದ್ಧ ಹರಿಹಾಯ್ದರು. ನಿರ್ವಾಹಕನ ವರ್ತನೆಗೆ ಸಹ ಪ್ರಯಾಣಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದರು.