Asianet Suvarna News Asianet Suvarna News

ಚುನಾವಣೆ ಹೊಸ್ತಿಲಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊಡಗು ಡಿಸಿ ಕಚೇರಿಯ ತಡೆಗೋಡೆ

ತಡೆಗೋಡೆ ಕುಸಿದು ಹೋಗುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಇಲ್ಲಿ ಮಾಡಬಾರದು ಎಂಬುದಾಗಿ ವಿವಿಧ ಇಲಾಖೆ ಎಂಜಿನಿಯರ್ ಗಳು ವರದಿ ನೀಡಿದ್ದಾರೆ. ಜೊತೆಗೆ ಈಗ ಮಾಡುತ್ತಿರುವ ತಡೆಗೋಡೆ ಕಾಮಗಾರಿಯ ಮಾದರಿಯನ್ನು ಬದಲಾಯಿಸಲು ವರದಿ ನೀಡಿದ್ದಾರೆ. ಹೀಗಾಗಿ ಹೊಸ ರೀತಿಯಲ್ಲಿ ಅಂದರೆ ಸ್ಟೆಪ್ ಬೈ ಸ್ಟೆಪ್ ಕಾಂಕ್ರಿಕ್ ಕಾಮಗಾರಿ ಮಾಡುವುದಕ್ಕೆ ಚಿಂತಿಸಲಾಗಿದೆ ಎಂದ ಎಸ್. ಸುರೇಶ್ ಕುಮಾರ್ 

Committee Recommendation for Construction of New Model Barrier in Kodagu grg
Author
First Published Mar 14, 2024, 9:13 PM IST

ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಮಾ.14):  ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯ ತಡೆಗೋಡೆ ಕಾಮಗಾರಿ ಇದೀಗ ಸದನ ಸಮಿತಿಯ ವಿಚಾರಣೆಗೆ ಒಣಪಟ್ಟಿದ್ದು ಚುನಾವಣೆ ಸಂದರ್ಭದಲ್ಲಿ ಸಮಿತಿ ಬಂದು ಪರಿಶೀಲಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಹೌದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಹೊಂದಿಕೊಂಡಂತೆ ಇರುವ ಈ ತಡೆಗೋಡೆ ಕಾಮಗಾರಿಯನ್ನು ಈ ಹಿಂದೆ ಮಡಿಕೇರಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು 7 ಕೋಟಿ ವೆಚ್ಚದಲ್ಲಿ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಮುಗಿಯುವಷ್ಟರಲ್ಲಿ ಅಂದರೆ ಕಾಮಗಾರಿ ಆರಂಭವಾದ 5 ತಿಂಗಳಲ್ಲಿ ತಡೆಗೋಡೆ ಕುಸಿದಿತ್ತು. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಇಂದಿನ ಸಿಎಂ ಸಿದ್ದರಾಮಯ್ಯ ಅವರು ತಡೆಗೋಡೆಯನ್ನು ಪರಿಶೀಲಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆಯಲಾಗಿತ್ತು. ಇದು ಸಾಕಷ್ಟು ಸದ್ದು ಮಾಡಿತ್ತು. ಇದೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕ ಅಪ್ಪಚ್ಚು ರಂಜನ್ ಮತ್ತು ಬಿಜೆಪಿ ವಿರುದ್ಧ ಅಸ್ತ್ರವನ್ನಾಗಿಸಿಕೊಂಡು ಅವರನ್ನು ಸೋಲಿಸಿ ಶಾಸಕ ಮಂತರ್ ಗೌಡ ಅವರು ಶಾಸಕರಾದರು. 

ಕರ್ನಾಟಕಕ್ಕೆ 2024ರ ಮೊದಲ ಮಳೆ ಸಿಂಚನ; ನಿನ್ನೆ ಕೊಡಗು, ಇಂದು ಚಿಕ್ಕಮಗಳೂರಲ್ಲಿ ತಂಪೆರೆದ ಮಳೆರಾಯ!

ಇದೀಗ ಎರಡು ಅವಧಿಯಲ್ಲಿ ಈ ಭಾಗದಲ್ಲಿ ಲೋಕಸಭಾ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರನ್ನು ಬದಲಾಯಿಸಿ ಮೈಸೂರಿನ ಯದುವೀರ್ ಅವರಿಗೆ ಟಿಕೆಟ್ ನೀಡಿದೆ. ಈ ನಡುವೆ ಮಡಿಕೇರಿ ಶಾಸಕ ಮಂತರ್ ಗೌಡ ಅವರು ವಿಧಾನಸಭೆಯ ಅರ್ಜಿಗಳ ಸಮಿತಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಮಿತಿ ಸಭೆಯ ಸದಸ್ಯರಿಂದ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ವೀಕ್ಷಣೆ ಮಾಡಲಾಗಿದೆ. 

ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಸದಸ್ಯರಾದ ಹಾಗೂ ವಿಧಾನಸಭೆಯ ಸದಸ್ಯರಾದ ಎಸ್.ಸುರೇಶ್ ಕುಮಾರ್, ಎ.ಮಂಜು, ಸುರೇಶ್ ಬಾಬು ಸಿ.ವಿ., ಡಾ.ಮಂತರ್ ಗೌಡ ಹಾಗೂ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ ಅವರು ನಗರದ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಗುರುವಾರ ವೀಕ್ಷಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಡಬ್ಲ್ಯೂಡಿ, ಐಐಎಸ್ಸಿ ಇಂಜಿನಿಯರ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 
ಬಳಿಕ ಮಾತನಾಡಿದ ಸಮಿತಿ ಸದಸ್ಯರಾದ ಎಸ್. ಸುರೇಶ್ ಕುಮಾರ್ ತಡೆಗೋಡೆ ಕುಸಿದು ಹೋಗುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಇಲ್ಲಿ ಮಾಡಬಾರದು ಎಂಬುದಾಗಿ ವಿವಿಧ ಇಲಾಖೆ ಎಂಜಿನಿಯರ್ ಗಳು ವರದಿ ನೀಡಿದ್ದಾರೆ. ಜೊತೆಗೆ ಈಗ ಮಾಡುತ್ತಿರುವ ತಡೆಗೋಡೆ ಕಾಮಗಾರಿಯ ಮಾದರಿಯನ್ನು ಬದಲಾಯಿಸಲು ವರದಿ ನೀಡಿದ್ದಾರೆ. ಹೀಗಾಗಿ ಹೊಸ ರೀತಿಯಲ್ಲಿ ಅಂದರೆ ಸ್ಟೆಪ್ ಬೈ ಸ್ಟೆಪ್ ಕಾಂಕ್ರಿಕ್ ಕಾಮಗಾರಿ ಮಾಡುವುದಕ್ಕೆ ಚಿಂತಿಸಲಾಗಿದೆ ಎಂದಿದ್ದಾರೆ. ಅಂದರೆ ತಡೆಗೋಡೆ ಕಾಮಗಾರಿ ಕಳಪೆ ಆಗಿದೆ ಎನ್ನುವುದನ್ನು ಸಮಿತಿ ಒಪ್ಪಿಕೊಂಡಂತೆ ಆಗಿದೆ. ಈಗ ಚುನಾವಣೆ ಸಂದರ್ಭದಲ್ಲಿ ಇದೇ ವಿಷಯವನ್ನು ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡುವ ಸಾಧ್ಯತೆ ಇದೆ. 

ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ, ಅಂದಾಜು ಸಮಿತಿಯ ಜಯಪ್ರಸಾದ್, ಸದಸ್ಯರಾದ ಭುರ್ಜಿ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಶಿವಕುಮಾರ್ ಇತರರು ತಡೆಗೋಡೆಯನ್ನು ವೀಕ್ಷಿಸಿ ಸಮಿತಿ ಸದಸ್ಯರಿಗೆ ಹಲವು ಮಾಹಿತಿ ನೀಡಿದರು.

Follow Us:
Download App:
  • android
  • ios