ರಾಜಧಾನಿಯಲ್ಲಿ ನಾಗರಿಕರಿಗೆ ಸಂಕಷ್ಟದಲ್ಲಿ ತುರ್ತು ಸ್ಪಂದನೆ (ನಮ್ಮ 112) ಹಾಗೂ ಗಸ್ತು ವ್ಯವಸ್ಥೆಯ ಕಾರ್ಯವೈಖರಿಯನ್ನು ಖುದ್ದು ತಿಳಿಯಲು ಹೊಯ್ಸಳ ವಾಹನದಲ್ಲಿ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಶನಿವಾರ ಸಂಚಾರ ನಡೆಸಿದರು.

ಬೆಂಗಳೂರು (ಜೂ.11): ರಾಜಧಾನಿಯಲ್ಲಿ ನಾಗರಿಕರಿಗೆ ಸಂಕಷ್ಟದಲ್ಲಿ ತುರ್ತು ಸ್ಪಂದನೆ (ನಮ್ಮ 112) ಹಾಗೂ ಗಸ್ತು ವ್ಯವಸ್ಥೆಯ ಕಾರ್ಯವೈಖರಿಯನ್ನು ಖುದ್ದು ತಿಳಿಯಲು ಹೊಯ್ಸಳ ವಾಹನದಲ್ಲಿ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಶನಿವಾರ ಸಂಚಾರ ನಡೆಸಿದರು. ನಗರದಲ್ಲಿ ತುರ್ತು ಸ್ಪಂದನೆ ವ್ಯವಸ್ಥೆ (ನಮ್ಮ 112) ಕಾರ್ಯನಿವರ್ಹಣೆ ಬಗ್ಗೆ ತಿಳಿಯಲು ಪೀಕ್‌ ಆವರ್‌ನಲ್ಲಿ ಹೊಯ್ಸಳ ವಾಹನದಲ್ಲಿ ಎಸಿಪಿ, ಡಿಸಿಪಿ ಹಾಗೂ ಹೆಚ್ಚುವರಿ ಆಯುಕ್ತರು ಸೇರಿದಂತೆ ಎಲ್ಲರೂ ಗಸ್ತು ನಡೆಸಿದ್ದಾರೆ. ಈ ವ್ಯವಸ್ಥೆ ಬಗ್ಗೆ ಉತ್ತಮ ಪ್ರಕ್ರಿಯೆ ಸಹ ಸಿಕ್ಕಿದೆ ಎಂದು ಆಯುಕ್ತ ದಯಾನಂದ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ತಾವು ಹಲಸೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ಹೊಯ್ಸಳ ವಾಹನದಲ್ಲಿ ತಿರುಗಾಟ ನಡೆಸಿದ ವೇಳೆ ಯಾವುದೇ ತುರ್ತು ಕರೆಗಳು ಬರಲಿಲ್ಲ. ಆದರೆ ನಿಯಂತ್ರಣ ಕೊಠಡಿಯಿಂದ (ನಮ್ಮ 112) ನಾಗರಿಕರಿಂದ ನೆರವು ಕೋರಿ ಬಂದಿದ್ದ ತುರ್ತು ಕರೆಗಳನ್ನು ಕೆಲ ಅಧಿಕಾರಿಗಳು ಅಟೆಂಡ್‌ ಮಾಡಿದ್ದಾರೆ. ಹೀಗಾಗಿ ಇಂದಿನ ತಿರುಗಾಟದ ವೇಳೆ ಲಭ್ಯವಾದ ಸಂಗ್ರಹಿಸಿದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ನಮ್ಮ 112 ವ್ಯವಸ್ಥೆಯನ್ನು ಮತ್ತಷ್ಟು ಉತ್ತಮ ಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಗೋಹತ್ಯೆ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಇಲ್ಲ: ಸಚಿವ ಎಚ್‌.ಕೆ.ಪಾಟೀಲ್‌

ಸುಳ್ಳು ಕೇಸ್‌ ಹಾಕಿದರೆ ಎಸಿಪಿಗಳೂ ಹೊಣೆ: ಚಲನಚಿತ್ರಗಳಲ್ಲಿ ಅಮಾಯಕರ ಮೇಲೆ ಪೊಲೀಸರು ಸುಳ್ಳು ಕೇಸ್‌ ಹಾಕುವುದನ್ನು ನೋಡಿದ್ದೇವು. ಈಗ ರಿಯಲ್‌ನಲ್ಲೇ ನೋಡುವಂತಾಗಿದೆ. ಇನ್ನು ಮುಂದೆ ಸುಳ್ಳು ಕೇಸ್‌ ದಾಖಲಾದರೆ ಇನ್‌ಸ್ಪೆಕ್ಟರ್‌ಗಳು ಮಾತ್ರವಲ್ಲ ಎಸಿಪಿ ಹಾಗೂ ಉನ್ನತ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ನಗರದ ಪಶ್ಚಿಮ ವಿಭಾಗದ ಉನ್ನತಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಆ ವಿಭಾಗದ ಇನ್‌ಸ್ಪೆಕ್ಟರ್‌ಗಳ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ದಾಖಲಾಗಿದ್ದ ಸುಳ್ಳು ದರೋಡೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಠಾಣೆಗಳಿಗೆ ನ್ಯಾಯ ಅರಸಿ ಬರುವ ನಾಗರಿಕರ ನೋವಿಗೆ ಸ್ಪಂದಿಸಬೇಕು. ಶ್ರೀಮಂತ ಹಾಗೂ ಬಡವ ಎಂಬ ಬೇಧವಿಲ್ಲದೆ ಸರ್ವರನ್ನು ಪೊಲೀಸರು ಸಮನವಾಗಿ ಕಾಣಬೇಕು. ಚಲನಚಿತ್ರಗಳಲ್ಲಿ ಅಮಾಯಕರ ಮೇಲೆ ಪೊಲೀಸರು ಸುಳ್ಳು ಕೇಸ್‌ ಹಾಕುವುದನ್ನು ನೋಡಿದ್ದೇವು. ಆದರೀಗ ರಿಯಲ್‌ನಲ್ಲಿ ಸಹ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದನ್ನು ಕಾಣುವಂತಾಗಿದೆ. ಈ ರೀತಿಯ ಅನ್ಯಾಯವೆಸಗಿದರೆ ಸಹಿಸುವುದಿಲ್ಲ. ಅಪರಾಧ ಪ್ರಕರಣ ದಾಖಲಾತಿ ಪ್ರಕ್ರಿಯೆಯಲ್ಲಿ ಲೋಪವಾದರೆ ಇನ್‌ಸ್ಪೆಕ್ಟರ್‌ಗಳು ಮಾತ್ರವಲ್ಲ ಎಸಿಪಿ ಹಾಗೂ ಉನ್ನತಾಧಿಕಾರಿಗಳೂ ಹೊಣೆಗಾರರಾಗಬೇಕಾಗುತ್ತದೆ ಎಂದು ಆಯುಕ್ತರು ಕಟು ಪದಗಳಲ್ಲಿ ತಾಕೀತು ಮಾಡಿರುವುದಾಗಿ ಮೂಲಗಳು ಹೇಳಿವೆ.

ಕೊಪ್ಪಳದಲ್ಲಿ ವಾಂತಿ ಭೇದಿಗೆ 3 ಜನ ಬಲಿ: ವರದಿ ಕೇಳಿದ ಸಿಎಂ ಸಿದ್ದರಾಮಯ್ಯ

ತಮ್ಮ ಠಾಣಾ ವ್ಯಾಪ್ತಿಯಲ್ಲಿ ರೌಡಿಸಂ, ಜೂಜಾಟ ಹಾಗೂ ಡ್ರಗ್‌್ಸ ಸೇರಿದಂತೆ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಇನ್‌ಸ್ಪೆಕ್ಟರ್‌ಗಳಿಗೆ ಆಯುಕ್ತರು ಸೂಚಿಸಿದ್ದಾರೆ. ಎರಡು ಗಂಟೆಗಳಿಗೆ ಅಧಿಕ ಹೊತ್ತು ನಡೆದ ಸಭೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ಹಾಗೂ ಸಮಸ್ಯೆಗಳ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಇನ್‌ಸ್ಪೆಕ್ಟರ್‌ಗಳಿಂದ ಆಯುಕ್ತರು ಮಾಹಿತಿ ಪಡೆದಿದ್ದಾರೆ. ಈ ಸಭೆಯಲ್ಲಿ ಹೆಚ್ಚುವರಿ ಆಯುಕ್ತ (ಪಶ್ಚಿಮ) ಸಂದೀಪ್‌ ಪಾಟೀಲ್‌ ಹಾಗೂ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಹಾಜರಾಗಿದ್ದರು.