Asianet Suvarna News Asianet Suvarna News

ಕೊಬ್ಬರಿ ಖರೀದಿ ಸ್ಥಗಿತ: ಅಡಕತ್ತರಿಯಲ್ಲಿ ರೈತ

ಕೊಬರಿಯ ಬೆಲೆ ಪಾತಾಳಕ್ಕಿಳಿದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ ಗರಿಷ್ಠ 8 ಸಾವಿರ ರು. ಕೊಬ್ಬರಿ ಬೆಲೆ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡ ಹಿನ್ನೆಲೆಯಲ್ಲಿ ರೈತರ ಒತ್ತಾಯದ ಮೇರೆಗೆ ನ್ಯಾಫೆಡ್‌ ಕೇಂದ್ರವನ್ನು ಕೇಂದ್ರ ಸರ್ಕಾರ ಆರಂಭ ಮಾಡಿತು. ಹಾಗಾಗಿ ನ್ಯಾಫೆಡ್‌ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 11750 ರು. ಗಳೆಂದು ನಿಗದಿ ಮಾಡಲಾಗಿದೆ.

Coconut  purchase halt: Farmer in  trouble snr
Author
First Published Jul 22, 2023, 6:05 AM IST

 ಎಸ್‌.ನಾಗಭೂಷಣ

 ತುರುವೇಕೆರೆ :  ಕೊಬರಿಯ ಬೆಲೆ ಪಾತಾಳಕ್ಕಿಳಿದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ ಗರಿಷ್ಠ 8 ಸಾವಿರ ರು. ಕೊಬ್ಬರಿ ಬೆಲೆ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡ ಹಿನ್ನೆಲೆಯಲ್ಲಿ ರೈತರ ಒತ್ತಾಯದ ಮೇರೆಗೆ ನ್ಯಾಫೆಡ್‌ ಕೇಂದ್ರವನ್ನು ಕೇಂದ್ರ ಸರ್ಕಾರ ಆರಂಭ ಮಾಡಿತು. ಹಾಗಾಗಿ ನ್ಯಾಫೆಡ್‌ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್‌ ಕೊಬ್ಬರಿಗೆ 11750 ರು. ಗಳೆಂದು ನಿಗದಿ ಮಾಡಲಾಗಿದೆ.

ಇದರ ಅನ್ವಯ ತಾಲೂಕಿನಲ್ಲಿ 5768 ರೈತರು ತಾವು ಬೆಳೆದ ಸುಮಾರು 82,400 ಕ್ವಿಂಟಾಲ್‌ ಕೊಬ್ಬರಿಯನ್ನು ನ್ಯಾಫೆಡ್‌ ಮೂಲಕ ಮಾರಾಟ ಮಾಡಲು ಮುಂದಾಗಿದ್ದಾರೆ. ಕಳೆದ ಜುಲೈ 10ರ ವರೆಗೆ ಸುಮಾರು 4300 ರೈತರು ಸುಮಾರು 62119 ಕ್ವಿಂಟಾಲ್‌ನಷ್ಟುಕೊಬರಿಯನ್ನು ನ್ಯಾಫೆಡ್‌ಗೆ ಬಿಟ್ಟಿದ್ದಾರೆ. ಇನ್ನೂ 1468 ರೈತರಿಂದ ಸುಮಾರು 20280 ಕ್ವಿಂಟಾಲ್‌ ಕೊಬರಿಯನ್ನು ನ್ಯಾಫೆಡ್‌ ಕೊಳ್ಳಬೇಕಿದೆ. ಆದರೆ ನ್ಯಾಫೆಡ್‌ ಮೂಲಕ ಕೊಳ್ಳಲಾಗಿರುವ ಕೊಬರಿ ಗುಣಮಟ್ಟವಿಲ್ಲ ಎಂಬ ಕಾರಣದಿಂದ ದಾಸ್ತಾನು ಕೊಠಡಿಗೆ ಕಳಿಸಲಾಗಿದ್ದ ಸುಮಾರು 8 ಲಾರಿ ಅಂದರೆ ಸುಮಾರು 1300 ಕ್ಕೂ ಹೆಚ್ಚು ಕ್ವಿಂಟಾಲ್‌ ಕೊಬ್ಬರಿಯನ್ನು ಕೇಂದ್ರಿಯ ನ್ಯಾಫೆಡ್‌ ಅಧಿಕಾರಿಗಳು ಹಿಂದಕ್ಕೆ ಕಳಿಸಿದ್ದಾರೆ.

ನಕಾರ: ನ್ಯಾಫೆಡ್‌ ಮೂಲಕ ಕೊಬ್ಬರಿ ಖರೀದಿ ಮಾಡುತ್ತಿರುವ ಇಲ್ಲಿಯ ಸಿಬ್ಬಂದಿ ಜು.14 ರಿಂದ ರೈತರಿಂದ ಖರೀದಿ ಮಾಡುವುದನ್ನು ಕೈಬಿಟ್ಟಿದ್ದಾರೆ. ಈಗಾಗಲೇ ಖರೀದಿ ಮಾಡಿ ರುವ ಕೊಬ್ಬರಿಯನ್ನು ನಾವು ಯಾರ ಮೇಲೆ ಜವಾಬ್ದಾರಿ ಹಾಕಬೇಕೆಂಬ ಗೊಂದಲದಲ್ಲಿದ್ದಾರೆ. ಈಗಾಗಲೇ ರೈತರಿಂದ ಕೊಬರಿ ಖರೀದಿಸಲಾಗಿದೆ. ಅವು ಯಾರ ಕೊಬ್ಬರಿ ಎಂಬುದು ತಿಳಿಯುವುದಿಲ್ಲ. ಹಾಗಾಗಿ ಈ ತಿರಸ್ಕೃತ ಕೊಬ್ಬರಿಯ ಜವಾಬ್ದಾರಿಯನ್ನು ತಮ್ಮ ಮೇಲೆ ಹಾಕಿರುವ ಹಿನ್ನೆಲೆಯಲ್ಲಿ ತಮಗೆ ಕೊಬ್ಬರಿ ಕೊಳ್ಳುವ ಜವಾಬ್ದಾರಿಯೇ ಬೇಡ ಎಂದು ಖರೀದಿ ಯಿಂದ ಹಿಂದೆ ಸರಿದಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗಿಲ್ಲ: ಈ ಮಧ್ಯೆ ರಾಜ್ಯ ಸರ್ಕಾರ ಇದೇ ಜು. 12 ರಿಂದ ನ್ಯಾಫೆಡ್‌ ಮೂಲಕ ಕೊಬ್ಬರಿ ಬಿಡುವ ರೈತರಿಗೆ ಪ್ರತಿ ಕ್ವಿಂಟಾಲ್‌ ಕೊಬರಿಗೆ ಪ್ರೋತ್ಸಾಹ ಧನ ವಾಗಿ 1250 ರು.ಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಇದರಿಂದ ಇದ್ದುದರಲ್ಲಿ ಸಂತಸಗೊಂಡಿದ್ದ ರೈತಾಪಿಗಳಿಗೆ ನ್ಯಾಫೆಡ್‌ನಲ್ಲಿ ಕೊಬರಿ ಖರೀದಿಸುವುದಿಲ್ಲ ಎಂಬ ಸಂಗತಿ ಬರಸಿಡಿಲಿನಂತೆ ಎರಗಿದೆ.

ಪರದಾಟ: ಪ್ರತಿದಿನ ಸುಮಾರು ಐವತ್ತು ಟ್ರ್ಯಾಕ್ಟರ್‌ನಲ್ಲಿ ಕೊಬ್ಬರಿ ಬರುತ್ತಿದೆ. ರೈತಾಪಿಗಳಿಗೆ ಟೋಕನ್‌ ನೀಡಿ ಆವರಣಕ್ಕೆ ಬಿಡಲಾಗುತ್ತಿದೆ. ಈ ಮಧ್ಯೆ ವಾಹನದಲ್ಲಿ ಇರುವ ಕೊಬ್ಬರಿ ಹವಾಮಾನ ವೈಪರೀತ್ಯಕ್ಕೆ ಜಿಡ್ಡುಗಟ್ಟುತ್ತಿದೆ. ಗಾತ್ರ ಕಿರುದಾಗುತ್ತಿದೆ. ಒಣಗುತ್ತಿದೆ. ಹಾಳಾಗುತ್ತಿದೆ. ಆದರೆ, ನ್ಯಾಫೆಡ್‌ನ ಅಧಿಕಾರಿಗಳು ಇವು ಗುಣಮಟ್ಟವಿಲ್ಲವೆಂದು ನಿರ್ಧ ರಿಸಿ ಅವುಗಳನ್ನು ಖರೀದಿಸಲು ಸಿದ್ಧರಾಗುತ್ತಿಲ್ಲ. ಹಾಗಾಗಿ ನ್ಯಾಫೆಡ್‌ ಕೇಂದ್ರಕ್ಕೆ ಕೊಬ್ಬರಿ ತಂದಿರುವ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಳೆದ ಹತ್ತಿಪ್ಪತ್ತು ದಿನಗಳಿಂದ ನಿಂತಿರುವ ವಾಹನಕ್ಕೆ ಬಾಡಿಗೆ ತೆರಬೇಕಿದೆ. ಇತ್ತ ಕೊಬ್ಬರಿ ಹಾಳಾಗುತ್ತಿದೆ. ಸೂಕ್ತ ಬೆಲೆ ಸಿಗುತ್ತಿಲ್ಲ. ತಿರಸ್ಕೃತವಾದ ಕೊಬ್ಬರಿ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಕೊಳ್ಳಲಾಗುತ್ತಿದೆ ಎಂಬ ಸಂಕಟ ಮತ್ತೊಂದೆಡೆ ಇದೆ.

ಆತಂಕ: ನ್ಯಾಪೆಡ್‌ ಮೂಲಕ ಇದೇ ತಿಂಗಳ 26 ರೊಳಗೆ ಮಾತ್ರ ಕೊಬ್ಬರಿ ಖರೀದಿ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಲೇ ಎಂಟತ್ತು ದಿನಗಳಿಂದ ಕೊಬ್ಬರಿ ಖರೀದಿಸಿಲ್ಲ. ಇನ್ನು ಕೇವಲ ಐದು ದಿನ ಮಾತ್ರ ಉಳಿದಿದೆ. ಇನ್ನು ತಾಲೂಕಿನ ಸುಮಾರು 1500 ರೈತರು ಕೊಬ್ಬರಿ ಬಿಡುವವರಿದ್ದಾರೆ. ಹಾಗಿದ್ದಲ್ಲಿ ಖರೀದಿ ಕೇಂದ್ರವನ್ನು ಮುಚ್ಚಿದರೆ ನಮ್ಮ ಗತಿ ಏನು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ವಿಸ್ತರಣೆ ಆಗ್ರಹ: ಜು.26 ರವರೆಗೆ ಮಾತ್ರ ಕೊಬ್ಬರಿ ಖರೀದಿ ಮಾಡುವುದನ್ನು ಮುಂದುವರೆಸಬೇಕೆಂದು ಸಂಸದ ಜಿ.ಎಸ್‌.ಬಸವರಾಜು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರ ಬಳಿ ಆಗ್ರಹಿಸಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಈಗಾಗಲೇ ನೊಂದಣಿ ಮಾಡಿಕೊಂಡಿರುವ ಎಲ್ಲಾ ರೈತರ ಕೊಬ್ಬರಿಗಳನ್ನು ಖರೀದಿ ಮಾಡಲೇಬೇಕೆಂದು ಆಗ್ರಹಿಸಲಾಗಿದೆ ಎಂದು ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜ್‌ ತಿಳಿಸಿದ್ದಾರೆ.

Follow Us:
Download App:
  • android
  • ios