'ಚಿಕನ್ ಸೂಪ್ ಕುಡಿದ ರಾಹುಲ್: ಸರ್ಕಾರ ಉರುಳೋದು ಬಿಲ್ಕುಲ್'!
ಶೀಘ್ರದಲ್ಲೇ ರಾಜ್ಯ ಸಮ್ಮಿಶ್ರ ಸರ್ಕಾರ ಪತನ! ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ! ಶ್ರದ್ಧಾ ಕೇಂದ್ರದಲ್ಲಿ ಚಿಕನ್ ಸೂಪ್ ಕುಡಿದ ರಾಹುಲ್! ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಖಚಿತ! ಗೌರಿ ಡೇ ಆಚರಿಸಿದ್ದಕ್ಕೆ ಯತ್ನಾಳ ಆಕ್ರೋಶ
ವಿಜಯಪುರ(ಸೆ.5): ಸದ್ಯದಲ್ಲೇ ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಲಿದ್ದು, ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆಗೆ ಹೋಗಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಯತ್ನಾಳ ಲೇವಡಿ ಮಾಡಿದ್ದಾರೆ.
ಪವಿತ್ರ ಸ್ಥಳಗಳು, ಶ್ರದ್ಧಾ ಕೇಂದ್ರಗಳ ಬಗ್ಗೆ ರಾಹುಲ್ ಗಾಂಧಿಗೆ ಗೌರವ ಇಲ್ಲ, ಹೀಗಾಗಿ ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ ಚಿಕಿನ್ ಸೂಪ್ ಕುಡಿದಿದ್ದಾರೆ ಎಂದು ಯತ್ನಾಳ ಹರಿಹಾಯ್ದರು.
ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕದನ ರಾಜ್ಯ ಕಾಂಗ್ರೆಸ್ ನಲ್ಲಿ ಬೆಂಕಿ ಹಚ್ಚಲಿದ್ದು, ಇದು ಸರ್ಕಾರದ ಪತನದವರೆಗೆ ಹೋಗಲಿದೆ ಎಂದು ಭವಿಷ್ಯ ನುಡಿದ ಬಿಜೆಪಿ ನಾಯಕ, ತಮ್ಮ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎಂದು ಸಮರ್ಥನೆ ನೀಡಿದರು.
ಇನ್ನು ಚಿಂತಕರು ಗೌರಿ ಡೇ ಆಚರಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ದೇಶದಲ್ಲಿ ಅನೇಕ ಹಿಂದೂಗಳ ಹತ್ಯೆ ನಡೆದಿದ್ದು, ಆಗೆಲ್ಲಾ ನಾವು ಡೇ ಆಚರಿಸಿದ್ದೇವಾ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದವರನ್ನು ಚಿಂತಕರು ಎಂದು ಕರೆಯುವ ಜನ, ರಾಜೀವ್ ಗಾಂಧಿ ಹಂತಕರನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಪ್ರಧಾನಿ ಸ್ಥಾನದಲ್ಲಿ ಏಕೆ ಇಂತಹ ತಾರತಮ್ಯ ಎಂದು ಯತ್ನಾಳ ಪ್ರಶ್ನಿಸಿದರು.