ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು : ಬಿಜೆಪಿ ಬಗ್ಗೆ ಜಾರಕಿಹೊಳಿ
- ಸಿಎಂ ಬದಲಾವಣೆಗೆ ಬಿಜೆಪಿಯಲ್ಲೇ ಕುಸ್ತಿ ಪ್ರಾರಂಭ
- ಪಕ್ಷದ ಶಾಸಕರು ಪರ, ವಿರೋಧವಾಗಿ ಸಹಿ ಸಂಗ್ರಹ
- ಸಿಎಂ ಮುಂದುವರಿಯುವುದು ಬಿಡುವುದು ಕುಸ್ತಿ ಮೇಲೆ ಅವಲಂಬಿತ
ಬೆಳಗಾವಿ (ಜೂ.16): ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಬಿಜೆಪಿಯಲ್ಲೇ ಕುಸ್ತಿ ಪ್ರಾರಂಭವಾಗಿದೆ. ಅವರ ಪಕ್ಷದ ಶಾಸಕರು ಪರ, ವಿರೋಧವಾಗಿ ಸಹಿ ಸಂಗ್ರಹ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಮುಂದುವರಿಯುವುದು ಬಿಡುವುದು ಕುಸ್ತಿಯ ಮೇಲೆ ಅವಲಂಬಿತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಅವರ ಪಕ್ಷದ ವರಿಷ್ಠರು ಏನು ವರದಿ ಕೊಡುತ್ತಾರೊ? ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೊ? ಎನ್ನುವುದು ಅವರಿಗೆ ಬಿಟ್ಟಿದ್ದು ಎಂದರು.
ಗುಸುಗುಸು ಬೆನ್ನಲ್ಲೇ ರೇವಣ್ಣ ಭೇಟಿ : ಕುತೂಹಲ ಮೂಡಿಸಿದ ರಾಜಕೀಯ ...
ಕಾಂಗ್ರೆಸ್ನಿಂದ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದೇವೆ. ಆಸ್ಪತ್ರೆಗಳಲ್ಲಿನ ಸಮಸ್ಯೆಗಳು ಹಾಗೂ ಅಗತ್ಯತೆಗಳ ಬಗ್ಗೆ ಪಕ್ಷದಿಂದ ಸರ್ಕಾರದ ಗಮನಕ್ಕೆ ತರಲಾಗುವುದು. ಮೂರನೇ ಅಲೆಗೆ ಸರ್ಕಾರ ಈಗಿನಿಂದಲೇ ಸಜ್ಜಾಗಬೇಕು. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಸೋಲಿನಿಂದ ಪಾಠ ಕಲಿತಿದ್ದೇವೆ. ಲೋಕಸಭಾ ಉಪಚುನಾವಣೆಯ ಸೋಲು ನಮಗೆ ಪಾಠವಾಗಿದೆ. ಸೋಲಿನಿಂದ ನಾವು ಪಾಠ ಕಲಿತಿದ್ದು, ಪಕ್ಷವನ್ನು ಇನ್ನೂ ಯಾವ ರೀತಿ ಸಂಘಟನೆ ಮಾಡಬೇಕು ಎಂಬ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಮುಖಂಡ ಅಶೋಕ ಪೂಜಾರಿ ಹಾಗೂ ಇನ್ನಿತರ ಮುಖಂಡರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಲಾಕ್ಡೌನ್ ಮುಗಿದ ನಂತರ ತೀರ್ಮಾನಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೋವಿಡ್ ಸಂಕಷ್ಟದಲ್ಲಿ ಕಾಂಗ್ರೆಸ್ನಿಂದ ಜನಪರ ಕೆಲಸ ಮಾಡುತ್ತಿದೆ. ಲಾಕ್ಡೌನ್ ವೇಳೆ ಬಡವರು, ಕಾರ್ಮಿಕರು, ರೈತರ ಪರವಾಗಿ ನಿಂತು ಕೆಲಸ ಮಾಡಿದೆ. ಅಲ್ಲದೆ, ಎರಡನೇ ಅಲೆಯಲ್ಲಿ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸಿ ವ್ಯಾಕ್ಸಿನ್, ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಿರುವ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ಇನ್ನೆರಡು ವರ್ಷ ಬಿಎಸ್ವೈ ಅವರೇ ಸಿಎಂ: ಸಚಿವ ಬಿಸಿಪಾ .
ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿತ್ತು. ಇದರ ಪರಿಣಾಮವಾಗಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ ಎಂದರು.
ಕೋವಿಡ್ನಿಂದ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂತರಾಮನಹಟ್ಟಿಕಿರು ಪ್ರಾಣಿ ಸಂಗ್ರಹಾಲಯದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿ ಇನ್ನಿತರರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮತ್ತಷ್ಟುಜನ ಪ್ರಾಣಿಗಳನ್ನು ದತ್ತು ಪಡೆದರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಿಸಾನ್ ಕಾಂಗ್ರೆಸ್ ರಾಜ್ಯ ಘಟಕದ ಸಂಚಾಲಕ ರಾಜೇಂದ್ರ ಪಾಟೀಲ, ಎಐಸಿಸಿ ಗೋವಾ ವೀಕ್ಷಕ, ಸುನೀಲ ಹನುಮನ್ನವರ, ಸೈಫ್ ಸೇಠ್ ಮತ್ತಿತರರು ಉಪಸ್ಥಿತರಿದ್ದರು.