ಇಡೀ ಇಂದಿರಾ ಗಾಜಿನ ಮನೆಯ ತುಂಬೆಲ್ಲ ಶೇಕ್‌ ಇಟ್‌ ಪುಷ್ಪವತಿ.... ಶೇಕ್‌ ಇಟ್‌ ಪುಷ್ಪವತಿ ಹಾಡು ಮಾರ್ದನಿಸುತ್ತಿದ್ದರೆ, ಖ್ಯಾತ ಚಿತ್ರನಟಿ, ಧಾರವಾಹಿಯ ಕಲಾವಿದೆ, ನಿರೂಪಕಿ ಅಂಕಿತಾ ಅಮರ್ ಅದ್ಭುತವಾಗಿ ಡ್ಯಾನ್ಸ್‌ ಮಾಡಿ ರಂಜಿಸುತ್ತಿದ್ದರು. 

ಶಿವಕುಮಾರ ಕುಷ್ಟಗಿ

Add Asianetnews Kannada as a Preferred SourcegooglePreferred

ಹುಬ್ಬಳ್ಳಿ (ನ.29): ಇಡೀ ಇಂದಿರಾ ಗಾಜಿನ ಮನೆಯ ತುಂಬೆಲ್ಲ ಶೇಕ್‌ ಇಟ್‌ ಪುಷ್ಪವತಿ.... ಶೇಕ್‌ ಇಟ್‌ ಪುಷ್ಪವತಿ ಹಾಡು ಮಾರ್ದನಿಸುತ್ತಿದ್ದರೆ, ಖ್ಯಾತ ಚಿತ್ರನಟಿ, ಧಾರವಾಹಿಯ ಕಲಾವಿದೆ, ನಿರೂಪಕಿ ಅಂಕಿತಾ ಅಮರ್ ಅದ್ಭುತವಾಗಿ ಡ್ಯಾನ್ಸ್‌ ಮಾಡಿ ರಂಜಿಸುತ್ತಿದ್ದರು. ಗಾಜಿನ ಮನೆಯಲ್ಲಿ ಸೇರಿದ್ದ ಸಾವಿರಾರು ಮಕ್ಕಳು ಒಂದು ಕ್ಷಣ ಮೈಮರೆತು ಹಾಡಿಗೆ ತಮಗೆ ಅರಿವಿಲ್ಲದಂತೆಯೇ ಹೆಜ್ಜೆಯಾದರು. ಕುಣಿದು ಕುಪ್ಪಳಿಸಿದರು, ಸಿಳ್ಳೆ ಹೊಡೆದು- ಕೇಕೇ ಹಾಕಿ ಕೂಗಿ ಹುರಿದುಂಬಿಸಿದರು. ಈ ರೀತಿಯ ಸಂತೋಷದ ಕ್ಷಣಕ್ಕೆ ಬುಧವಾರ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಇಂದಿರಾ ಗಾಜಿನಮನೆ..

ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ಚಿತ್ರಕಲಾ ಸರ್ಧೆಯಲ್ಲಿ ಅಂಕಿತಾ ಅಮರ ಮೋಡಿ ಮಾಡಿದರು. ಸ್ಪರ್ಧೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅಂಕಿತಾ ಅಮರ ಕೇಂದ್ರ ಬಿಂದುವಾಗಿದ್ದರು. ಒಂಚೂರು ಬಿಂಕ, ಬಿಗುಮಾನ ಇಲ್ಲದೇ ಮಕ್ಕಳ ಜೊತೆ ಬೆರೆತರು. ಹೆಜ್ಜೆ ಹಾಕಿದರು, ಹಾಡಿದರು. ಕುಣಿದರು, ಮೋಡಿ ಮಾಡಿದರು. ಅಟೋಗ್ರಾಫ್‌ ನೀಡಿದರು, ಸೆಲ್ಫಿ ತೆಗೆಸಿಕೊಂಡರು, ಆತ್ಮೀಯತೆ ತೋರಿದರು. ಅವರ ಬೇಡಿಕೆಗೆ ಕಿವಿಯಾದರು. ಹಿಂದಿ ಹಾಡಿಗೂ ಮಕ್ಕಳು ಬೇಡಿಕೆ ಇಟ್ಟಾಗ ಅದಕ್ಕೂ ಸ್ಪಂದಿಸಿದರು.

ಬರ ನಿರ್ವಹಣೆಯಲ್ಲಿ ಲೋಪವಾದ್ರೆ ಅಧಿಕಾರಿಗಳೇ ಹೊಣೆ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗ್ಗೆಯಿಂದ ಆಸಕ್ತಿಯಿಂದಲೇ ಚಿತ್ರಕಲಾ ಸರ್ಧೆಯಲ್ಲಿ ಪಾಲ್ಗೊಂಡಿದ್ದ 3 ಸಾವಿರಕ್ಕೂ ಅಧಿಕ ಮಕ್ಕಳು ಒಮ್ಮೆಲೇ ಕೂಗು ಹಾಕಿ, ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಚಿತ್ರಕಲಾ ಸ್ಪರ್ಧೆಯ ವಾತಾವರಣವೇ ಬದಲಾಗಿ ಹಾಡಿನ ಗುಂಗು, ಹೆಜ್ಜೆಯ ಸದ್ದಾಗಿ ಪರಿವರ್ತನೆಗೊಂಡು ಮಕ್ಕಳಲ್ಲಿ ನವೋಲ್ಲಾಸಕ್ಕೆ ಕಾರಣವಾಯಿತು. ಪುಷ್ಪವತಿ ಹಾಡಿನೊಂದಿಗೆ ಪ್ರಾರಂಭವಾದ ಡಾನ್ಸ್... ರಾ ರಾ.. ರಕ್ಕಮ್ಮ..ಎಂಬ ಹಿಟ್‌ ಹಾಡಿನೊಂದಿಗೆ ಕೊನೆಗೊಂಡಿತು. ಎರಡೂ ಹಾಡಿಗೆ ಅದ್ಬುತ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದು ಅಂಕಿತಾ ಅಮರ. ಎರಡು ಹಾಡುಗಳ ನಡುವೆ ಅರ್ಜಿತ್ ಸಿಂಗ್ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಮಕ್ಕಳು ಕೂಡಾ ಕುಳಿತಲ್ಲಿಯೇ ಗುನುಗುವಂತೆ ಮಾಡಿದರು.

ಕನ್ನಡಪ್ರಭ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಘಟಿತ ಈ ವಿಶೇಷ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಹೊಸ ಹೊಳಪನ್ನು ಪಡೆದುಕೊಂಡಿದ್ದು, ಬುಧವಾರ ನಡೆದ ಬೃಹತ್ ಚಿತ್ರಕಲಾ ಸ್ಪರ್ಧೆ ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಪತ್ರಿಕಾ ರಂಗದಲ್ಲೇ ಮೊದಲ ಬಾರಿಗೆ ಮಕ್ಕಳನ್ನೊಳಗೊಂಡು ಕಾರ್ಯಕ್ರಮ ರೂಪಿಸಿ ಯಶಸ್ವಿಗೊಳಿಸಿತು.

ನಿರೀಕ್ಷೆಗೂ ಮೀರಿದ ಉತ್ಸಾಹ: ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಸ್ಪರ್ಧೆಗೆ ಈ ವರ್ಷ ಐದರ ಸಂಭ್ರಮ. ಸ್ಪರ್ಧೆಯಲ್ಲಿ ಮಕ್ಕಳು ನಿರೀಕ್ಷೆಗೂ ಮೀರಿ ಪಾಲ್ಗೊಂಡಿದ್ದರು. ಗಾಜಿನಮನೆಯ ಆವರಣ ಸಂಪೂರ್ಣ ಭರ್ತಿಯಾಗಿ ಮರದ ಕೆಳಗೆಲ್ಲಾ ಕುಳಿತು ಮಕ್ಕಳು ಮನಸ್ಸಿನ ಭಾವನೆಯನ್ನು ಚಿತ್ರ ರೂಪಕ್ಕೆ ಇಳಿಸಿ, ಪ್ರತಿಯೊಬ್ಬರೂ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

ಇಂದು ಎಲೆಕ್ಷನ್‌ ನಡೆದರೂ ಬಿಜೆಪಿಗೆ 135 ಸ್ಥಾನ ಬರುತ್ತೆ: ಬಿ.ಎಸ್‌.ಯಡಿಯೂರಪ್ಪ

ಸೇವಾ ಭಾವನೆಗೂ ವೇದಿಕೆ: ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ 3 ಸಾವಿರಕ್ಕೂ ಅಧಿಕ ಮಕ್ಕಳಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಅಚ್ಚುಕಟ್ಟಾದ ವ್ಯವಸ್ಥೆಗೆ ಕೈ ಜೋಡಿಸಿದ್ದು ಕೂಡಾ ಮಕ್ಕಳೇ ಎನ್ನುವುದು ಮತ್ತೊಂದು ವಿಶೇಷ, ಜೆಜೆ ಕಾಮರ್ಸ್‌ ಕಾಲೇಜಿನ ಎನ್‌ಸಿಸಿ ಸ್ಕ್ವಾಡ್‌ ವಿಭಾಗದ 19ಕ್ಕೂ ಹೆಚ್ಚಿನ ಕೆಡೆಟ್ ಗಳು ಪಾಲ್ಗೊಂಡಿದ್ದ ಪ್ರತಿಯೊಂದು ಮಗುವಿಗೂ ಊಟ, ಐಸ್ ಕ್ರೀಂ ತಲುಪಿಸುವಲ್ಲಿ ಶ್ರಮಿಸಿದರು. ಈ ಕಾರ್ಯಕ್ರಮ ಮಕ್ಕಳಲ್ಲಿ ನಾಯಕತ್ವ ಮತ್ತು ಸೇವಾ ಮನೋಭಾವ ಬೆಳೆಸಲು ವೇದಿಕೆಯಾಗಿತ್ತು.