Asianet Suvarna News Asianet Suvarna News

ಮಕ್ಕಳ ಮೇಲಿನ ದೌರ್ಜನ್ಯ ಸಮಾಜಕ್ಕೆ ಕಂಟಕ: ಡಾ.ತಿಪ್ಪೇಸ್ವಾಮಿ

ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪೋಕ್ಸೋ ಕಾಯಿದೆ ಅರಿವು ಕಾರ್ಯಕ್ರಮವನ್ನು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ. ಕೆ.ಟಿ. ಉದ್ಘಾಟಿಸಿದರು

Child abuse is a thorn in society: Dr. Thippeswamy snr
Author
First Published Sep 28, 2023, 8:36 AM IST

ಕೊರಟಗೆರೆ: ದುಡ್ಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪೋಕ್ಸೋ ಕಾಯಿದೆ ಅರಿವು ಕಾರ್ಯಕ್ರಮವನ್ನು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ. ಕೆ.ಟಿ. ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಜಾಲತಾಣ ದಿಕ್ಕು ತಪ್ಪಿಸುತ್ತಿವೆ. ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂಗಳಲ್ಲೇ ಪ್ರೋಗ್ರಾಂಗಳು ಫಿಕ್ಸ್ ಆಗುತ್ತಿವೆ. ಪರಿಣಾಮ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಹೀನ ಕೃತ್ಯಗಳು ನಡೆಯಲು ಕಾರಣವಾಗುತ್ತವೆ. ತುಮಕೂರು ಜಿಲ್ಲೆಯೊಂದರಲ್ಲೇ 270 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು ಆತಂಕ ಉಂಟು ಮಾಡಿದೆ. ಈ ಪ್ರಕರಣಗಳಲ್ಲಿ ನಾವು ಗಮನಿಸಿದ ಅಂಶವೆಂದರೆ ಸಂಬಂಧಿಕರು, ಅಪ್ರಾಪ್ತರು, ತೀರ ಪರಿಚಯಸ್ಥರಿಂದಲೇ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿರುವುದು. ದಾರಿ ತಪ್ಪುವ ಮುನ್ನ ಎಚ್ಚರ ವಹಿಸುವುದೊಂದೇ ಮಾರ್ಗ. ತಂದೆ-ತಾಯಿ ಮಾತನ್ನು ಧಿಕ್ಕರಿಸಿ ಪ್ರೀತಿ-ಪ್ರೇಮದ ಹಾದಿ ಹಿಡಿದರೆ ಹೀಗಾಗುವುದುಂಟು. ಆದ್ದರಿಂದ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳುವುದರಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯೋಪಾಧ್ಯಾಯ ಹೊಸಕೆರೆ ರಿಜ್ವಾನ್ ಬಾಷ ಮಾತನಾಡಿ, ಲೈಂಗಿಕ ದೌರ್ಜನ್ಯಗಳು ಹೆಣ್ಣು ಮಕ್ಕಳ ಮೇಲೆಯೇ ನಡೆಯುತ್ತಿರುವುದು ನಾಗರಿಕ ಸಮಾಜಕ್ಕೊಂದು ಕಪ್ಪು ಚುಕ್ಕೆಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್, 18 ವರ್ಷದೊಳಗಿನ ಎಲ್ಲರನ್ನೂ ಮಕ್ಕಳು ಎಂದು ಕಾಯಿದೆ ಪರಿಗಣಿಸಿರುವುದರಿಂದ ಈ ವಯಸ್ಸಿನ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಅದು ಗಂಭೀರ ಅಪರಾಧವೇ ಆಗಿರುತ್ತದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನುಷಾ ಮಾತನಾಡಿ, ದೈಹಿಕವಾಗಿ, ಮಾನಸಿಕವಾಗಿ ಬೆಳವಣಿಗೆಯಾಗುವ ಕಾಲಘಟ್ಟದಲ್ಲಿ ವಿದ್ಯಾರ್ಥಿ ಸಮೂಹ ತುಂಬಾ ಎಚ್ಚರದಿಂದಿರಬೇಕು. ಗುರಿಯೊಂದನ್ನು ನಿಗದಿಪಡಿಸಿಕೊಂಡು ಸಾಧನೆಯತ್ತ ಗಮನ ಕೇಂದ್ರೀಕರಿಸಬೇಕು. ಎಲ್ಲರೊಂದಿಗೆ ಆತ್ಮೀಯತೆ ಇರಲಿ, ಅದರೆ ಅತಿಯಾದ ಸಲುಗೆ ಇರಬಾರದೆಂದು ಎಚ್ಚರಿಸಿದರು.

ಮಕ್ಕಳ ಸಹಾಯವಾಣಿ ಕೋ ಆರ್ಡಿನೇಟರ್ ಗೌರಮ್ಮ ಮಾತನಾಡಿ, ಬಾಲ್ಯ ವಿವಾಹ ಮತ್ತು ಮಾದಕ ದ್ರವ್ಯಗಳ ಪ್ರಕರಣಗಳಲ್ಲಿ ಸಿಲುಕುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಮಕ್ಕಳ ಸಹಾಯವಾಣಿ:1098 ಹಾಗೂ 112 ಸ್ಥಾಪಿಸಿದೆ. ಈ ಸಂಖ್ಯೆಗೆ ಕರೆಮಾಡಿ ದೌರ್ಜನ್ಯಗಳ ವಿರುದ್ಧ ರಕ್ಷಣೆ ಪಡೆಯಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದುಡ್ಡನಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ, ಸುಜಾತ ಎಸ್. ಮಹಲಿಂಗಪುರ, ಶಿಕ್ಷಕ ಅಶ್ವತ್ಥನಾರಾಯಣ, ಎಲ್.ಕೃಷ್ಣಪ್ಪ ಚಿಕ್ಕಪ್ಪಯ್ಯ, ಅಶೋಕ್ ಪೂಜಾರ್, ರಾಜಶೇಖರಯ್ಯ, ಮಂಜುಳ.ಯು, ಪ್ರಾ.ಶಾ. ಮು.ಶಿ.ಶ್ರೀರಂಗಯ್ಯ. ಶಿಕ್ಷಕರಾದ ಹನುಮೇಶ್. ಮಲ್ಲೇಶ್, ಚಿಕ್ಕರಂಗಯ್ಯ, ಸತೀಶ್, ವಿನೋದಮ್ಮ, ಗೌರಮ್ಮ, ಅಶ್ವತ್ಥಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios