Asianet Suvarna News Asianet Suvarna News

ಪ್ಲಾಸ್ಟಿಕ್‌ ಮುಕ್ತ ಪ್ರವಾಸ ಮಾಡಿ: ಪ್ರವಾಸಿಗರು ಬೀಸಾಡಿದ ಕಸ ಸ್ವಚ್ಛಗೊಳಿಸಿದ ರೆಸಾರ್ಟ್‌ ಮಾಲೀಕರು

ಚಿಕ್ಕಮಗೂರಿನ ವಿವಿಧ ತಾಣಗಳಲ್ಲಿ ಪ್ರವಾಸಿಗರು ಬೀಸಾಡಿದ್ದ ಪ್ಲಾಸ್ಟಿಕ್ ಕವರ್, ಬಾಟಲಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಜಿಲ್ಲೆಯ ರೆಸಾರ್ಟ್ ಮಾಲೀಕರ ಸಂಘದಿಂದ ಸ್ವಚ್ಛಗೊಳಿಸಲಾಯಿತು.

Chikkamagaluru resort owners cleaned the garbage thrown by the tourists in hill ranges sat
Author
First Published Jun 27, 2023, 11:22 PM IST | Last Updated Jun 27, 2023, 11:22 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.27): ಸುಂದರ ಗಿರಿ ಶ್ರೇಣಿಯನ್ನು ಹೊಂದಿರುವ, ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗೂರಿನ ವಿವಿಧ ತಾಣಗಳಲ್ಲಿ ಪ್ರವಾಸಿಗರು ಬೀಸಾಡಿದ್ದ ಪ್ಲಾಸ್ಟಿಕ್ ಕವರ್, ಬಾಟಲಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಜಿಲ್ಲೆಯ ರೆಸಾರ್ಟ್ ಮಾಲೀಕರ ಸಂಘ ಹಾಗೂ ವಿವಿಧ ಸಂಘ, ಸಂಸ್ಥೆಗಳಿಂದ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.

ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರೋ ಚಿಕ್ಕಮಗಳೂರಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಯ ಸುಂದರ ತಾಣಗಳಿಗೆ ಅಗ್ರಸ್ಥಾನ. ಇಲ್ಲಿಗೆ ನಿತ್ಯವೂ ಆಗಮಿಸೋ ನೂರಾರು ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನ ಸವಿಯೋದ್ರ ಜೊತೆ ಅಷ್ಟೆ ಪ್ರಮಾಣದಲ್ಲಿ ನಾಶ ಕೂಡ ಮಾಡ್ತಿದ್ದಾರೆ.  ಮುಗಿಲೆತ್ತರದ ಬೆಟ್ಟಗುಡ್ಡಗಳು. ಇಲ್ಲಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಆದರೆ, ನಿತ್ಯ ಇಲ್ಲಿಗೆ ಬರುವ ಪ್ರವಾಸಿಗರು ಇಡೀ ಗಿರಿ ಭಾಗವನ್ನ ಕ್ರಮೇಣ ನಾಶ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿಗಳನ್ನ ಹಾಕಿ ಗಿರಿಯ ಸೌಂದರ್ಯಕ್ಕೆ ಪ್ರವಾಸಿಗರೇ ಮಾರಕವಾಗ್ತಿದ್ದಾರೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ರೆಸಾರ್ಟ್ ಮಾಲಿಕರ ಸಂಘದ ವತಿಯಿಂದ ಸೀತಾಳಗಿರಿ ಹಾಗೂ ಮುಳ್ಳಯ್ಯನಗಿರಿ ಪ್ರದೇಶಗಳಲ್ಲಿ ಸಂಪೂರ್ಣ ಕ್ಲೀನ್ ಮಾಡಲಾಯಿತು. 

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ತಗ್ಗು-ದಿಣ್ಣೆ : ವಾಹನ ಸವಾರರೇ ಎಚ್ಚರ

ಬೆಟ್ಟವನ್ನು ಸ್ವಚ್ಚವಾಗಿಡಲು ಮನವಿ :  ಸಿಲ್ವರ್ಸ್ಕೈ ರೆಸಾರ್ಟ್ ಮಾಲಿಕರಾದ ಚೇತನ್ ಮಾತನಾಡಿ ಚಿಕ್ಕಮಗಳೂರು ರೆಸಾರ್ಟ್ ಮಾಲೀಕರ ಸಂಘದಿಂದ ಇಂದು ಸೀತಾಳಗಿರಿ ಹಾಗೂ ಮುಳ್ಳಯ್ಯನಗಿರಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾಫಿಕುಯ್ಲು ಬರುವ ಮೊದಲು ಮತ್ತು ಮುಗಿದ ನಂತರ ಸ್ವಚ್ಚತೆಯನ್ನು ಮಾಡಲಾಗುವುದು. ಕಾಫಿನಾಡು ಎಂದೇ  ಹೆಸರುವಾಸಿಯಾದ ಚಿಕ್ಕಮಗಳೂರು ಜಿಲ್ಲೆಯು ಪ್ರವಾಸಿ ತಾಣವಾಗಿದ್ದು, ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿಯನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ ಎಂದರು.

ಪ್ರವಾಸಿಗರಿಗೆ ಜಾಗೃತಿ ಮೂಡಿಸಲು ಕ್ರಮ: ಪ್ರತಿ ವಾರ ಬಹಳಷ್ಟು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ, ಬಂದ ಸಮಯದಲ್ಲಿ ಪ್ಲಾಸ್ಟಿಕ್, ಪೇಪರ್ನಂತಹ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ, ಪ್ರವಾಸಿಗರು ತಾವು ತಂದ ತಿನಿಸುಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಬುಟ್ಟಿಯಲ್ಲಿಯೇ ಹಾಕಬೇಕು, ಸುತ್ತಲಿನ ಪರಿಸರವನ್ನು ಸ್ವಚ್ಚ ಮತ್ತು ಸುಂದರವಾಗಿಸಲು ಸಹಕರಿಸಬೇಕು ಎಂದು ತಿಳಿಸಿದರು. ಚಿಕ್ಕಮಗಳೂರು ಜಿಲ್ಲೆಯು ಪ್ರವಾಸಿ ತಾಣವಾಗಿದ್ದು, ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಸಿಕ್ಕಸಿಕ್ಕ ಜಾಗದಲ್ಲಿ ಎಸೆಯದೆ, ಕಸದ ಬುಟ್ಟಿ ಅಥವಾ ಕಸ ಸಂಗ್ರಹಣೆಗೆಂದು ನಿಗಧಿಪಡಿಸಿರುವ ಜಾಗದಲ್ಲಿ ಕಸವನ್ನು ಹಾಕಬೇಕೆಂದು ಈ ಮೂಲಕ ಪ್ರವಾಸಿಗರಿಗೆ ತಿಳಿಸಿದರು.

ಸ್ವಚ್ಚವಾಗಿಡುವುದು ನಮ್ಮ ಕರ್ತವ್ಯ : ಮುಳ್ಳಯ್ಯನಗಿರಿ ಹಾಗೂ ಸೀತಾಳಗಿರಿ ಪ್ರದೇಶವನ್ನು ಸ್ವಚ್ಚವಾಗಿಡುವುದು ನಮ್ಮ ಕರ್ತವ್ಯವಾಗಿದೆ,  ರೆಸಾರ್ಟ್ ಮಾಲೀಕರ ಸಂಘದಿಂದ ಇಂದು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮುಂದೆಯೂ ಇದೇರೀತಿಯಲ್ಲಿ ಮುಂದುವರೆಸಿಕೊಂಡು ಹೋಗಲಾಗುವುದು, ಸ್ಥಳಿಯ ಶಾಸಕರು ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಹೆಚ್ಚಿನ ಗಮನಹರಿಸಿ, ಮುಳ್ಳಯ್ಯನಗಿರಿ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಚ ಮತ್ತು ಸುಂದರವಾಗಿಡಲು ಸಹಕರಿಸಬೇಕು ಹಾಗೂ ಸಾರ್ವಜನಿಕ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವಂತೆ ತಿಳಿಸಿದರು.

Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ

ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಶೌಚಾಲಯ ಹೋಟೆಲ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿದ ರೆಸಾರ್ಟ್ ಮಾಲೀಕರು ಇದೇ  ತಿಂಗಳ 30 ರಂದು ಸಂಘದ ವತಿಯಿಂದ ಶಾಸಕ ಹೆಚ್.ಡಿ ತಮ್ಮಯ್ಯನವರಿಗೆ ಸನ್ಮಾನ ಸಮಾರಂಭ ಆಯೋಜಿಸಿದ್ದು ಈ ಸಂದರ್ಭದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ಹನಿಡ್ಯೂ ರೆಸಾರ್ಟ್ ಸುರೇಶ್, ತ್ರಿವಿಕ್ ರೆಸಾರ್ಟ್ ಜಿ.ಎಂ.ಭಾನುಕುಮಾರ್, ಆನಂದ್, ಸಿರಿ ರೆಸಾರ್ಟ್ ನವೀನ್ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios