ಚಿಕ್ಕಮಗಳೂರಿನಲ್ಲಿ, ಹಣದಾಸೆಗೆ ತಂದೆ ಮತ್ತು ಅಜ್ಜಿಯೇ 16 ವರ್ಷದ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾರೆ. ಮಂಗಳೂರಿನಲ್ಲಿ ಹಲವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿ, ಅಲ್ಲಿಂದ ತಪ್ಪಿಸಿಕೊಂಡು ಬಂದು ದೂರು ನೀಡಿದ್ದು, ಪೊಲೀಸರು ತಂದೆ, ಅಜ್ಜಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರು (ಜ.07): ಹೆತ್ತ ತಂದೆಯೇ ರಕ್ಷಕನಾಗುವ ಬದಲು ಭಕ್ಷಕನಾದ ಘೋರ ಘಟನೆಯೊಂದು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹೋಬಳಿಯ ಗ್ರಾಮವೊಂದರಲ್ಲಿ ನಡೆದಿದೆ. ಹಣದ ಹಪಾಹಪಿಗೆ ಬಿದ್ದ ತಂದೆ ಮತ್ತು ಅಜ್ಜಿ ಸೇರಿ, ತಾಯಿ ಇಲ್ಲದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆ ಅಡ್ಡೆಗೆ ನೂಕಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಹಿನ್ನೆಲೆ

ಬಾಲಕಿಯ ತಾಯಿ ಮೃತಪಟ್ಟಿದ್ದರಿಂದ ಆಕೆ ತಂದೆ ಗಿರೀಶ್ ಹಾಗೂ ಅಜ್ಜಿ ನಾಗರತ್ನ ಅವರ ಆಶ್ರಯದಲ್ಲಿದ್ದಳು. ಆದರೆ, ಈ ಪಾಪಿಗಳು ಹಣಕ್ಕಾಗಿ ಬಾಲಕಿಯನ್ನು ಭರತ್ ಶೆಟ್ಟಿ ಎಂಬುವವನ ಜೊತೆ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಕಳೆದ 6 ದಿನಗಳಲ್ಲಿ 10ಕ್ಕೂ ಹೆಚ್ಚು ಕಾಮುಕರು ಬಾಲಕಿಯ ಮೇಲೆ ಸತತವಾಗಿ ಅತ್ಯಾ*ಚಾರ ಎಸಗಿದ್ದಾರೆ. ಇನ್ನು ಬಾಲಕಿಗೆ ಪಿರಿಯಡ್ಸ್ ಸಮಯವಿದ್ದರೂ ಆಕೆಯನ್ನು ಬಿಡದೇ ಹುರಿದು ಮುಕ್ಕಿದ್ದಾರೆ. ಈ ಬಗ್ಗೆ ನೊಂದ ಬಾಲಕಿ ನೀಡಿರುವ ಮಾಹಿತಿ ಪ್ರಕಾರ, ಆಕೆ ಋತುಸ್ರಾವದ (Periods) ಸಮಯದಲ್ಲಿದ್ದರೂ ಸಹ ಕಿಂಚಿತ್ತೂ ಕರುಣೆ ತೋರದ ಕಾಮುಕರು ಆಕೆಯ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ. ಸತತ ಆರು ದಿನಗಳ ಕಾಲ ನರಕಯಾತನೆ ಅನುಭವಿಸಿದ ಬಾಲಕಿ, ಹೇಗೋ ಅವರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದಿದ್ದಾಳೆ.

ಬೆಳಕಿಗೆ ಬಂದಿದ್ದು ಹೇಗೆ?

ಕಾಮುಕರ ಗುಂಪಿನಿಂದ ತಪ್ಪಿಸಿಕೊಂಡು ಊರಿಗೆ ಬಂದ ನಂತರ ಬಾಲಕಿ ತನ್ನ ಚಿಕ್ಕಪ್ಪ ಮತ್ತು ಅತ್ತೆಯ ಬಳಿ ತನಗೆ ತಂದೆ ಮತ್ತು ಅಜ್ಜಿಯಿಂದ ಆದ ಅನ್ಯಾಯ ಹಾಗೂ ಮಂಗಳೂರಿನಲ್ಲಿ ನಡೆದ ಭೀಕರ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಬಾಲಕಿಯ ಚಿಕ್ಕಪ್ಪ ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೀರೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಂದೆ ಗಿರೀಶ್, ಅಜ್ಜಿ ನಾಗರತ್ನ ಮತ್ತು ದಲ್ಲಾಳಿ ಭರತ್ ಶೆಟ್ಟಿ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 12 ಮಂದಿ ಆರೋಪಿಗಳ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಹಣದ ಆಸೆಗಾಗಿ ಸ್ವಂತ ರಕ್ತವನ್ನೇ ಮಾರಾಟಕ್ಕಿಟ್ಟ ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.