ಕಾಡಾನೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯಿಸಿ ಕಾಫಿ ಬೆಳೆಗಾರರೊಬ್ಬರು ಅರಣ್ಯ ಇಲಾಖೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಆ.23) : ಕಾಡಾನೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯಿಸಿ ಕಾಫಿ ಬೆಳೆಗಾರರೊಬ್ಬರು ಅರಣ್ಯ ಇಲಾಖೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮೂಡಿಗೆರೆ ತಾಲ್ಲೂಕಿನ ಗೌಡಹಳ್ಳಿ, ಕುಂಬರಡಿ, ಬೈದುವಳ್ಳಿ, ಹೆಮ್ಮದಿ, ಸತ್ತಿಗನಹಳ್ಳಿ, ಊರುಬಗೆ, ಮೂಲರಹಳ್ಳಿ ಭಾಗದಲ್ಲಿ 3ರಿಂದ 5 ಕಾಡಾನೆಗಳು ಕಳೆದ ನಾಲ್ಕೈದು ದಿನದಿಂದ ಬೀಡು ಬಿಟ್ಟಿದ್ದು, ಕಾಡಾನೆಗಳನ್ನು ಸ್ಥಳಾಂತರಿಸಿ, ಇವುಗಳಿಂದ ಇಶಾಶ್ವತ ಮುಕ್ತಿಗೊಸಿಕೊಡಬೇಕೆಂದು ಒತ್ತಾಯಿಸಿ ಮೂಲರಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಎಂ.ಕೆ.ಸದಾಶಿವ ಮೂಡಿಗೆರೆ ಪಟ್ಟಣದ ಅರಣ್ಯ ಇಲಾಖೆ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಮಲೆನಾಡಿನಲ್ಲಿ ಕಾಡಾನೆ ದಾಳಿ ವಿಪರೀತವಾಗಿದ್ದು ಇದರಿಂದ ಬೆಳೆಗಾರರು ತತ್ತರಿಸಿಹೋಗಿದ್ದಾರೆ. ಮಲೆನಾಡಿನ ಭಾಗದಲ್ಲಿ ಸುಮಾರು 5 ಕಾಡಾನೆಗಳಿವೆ. ಕಳೆದ ಒಂದು ವಾರದಿಂದ ಕಾಡಾನೆಗಳ ಗುಂಪು ತೋಟಕ್ಕೆ ಲಗ್ಗೆಯಿಟ್ಟು, ಕಾಫಿ, ಬಾಳೆ, ಬಗುನೆ, ಮೆಣಸು ಗಿಡಗಳನ್ನು ನಾಶಪಡಿಸುತ್ತಿವೆ. ಇದೇ ತಿಂಗಳು 20ರಂದು ಸಂಜೆ ಮೂಲರಹಳ್ಳಿಯಲ್ಲಿ ಶಿವಣ್ಣ ಎಂಬುವರ ಮೇಲೆ ದಾಳಿ ಮಾಡಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇತ್ತೀಚೆಗೆ ಸತ್ತಿಗನಹಳ್ಳಿ ಗ್ರಾಮದ ಪ್ರಭಾಕರ್ ಎಂಬುವರ ಮೇಲೆ ದಾಳಿ ನಡೆಸಿದೆ. ಗ್ರಾಮದಲ್ಲಿ ಜನರು ಜೀವಭಯದಿಂದಲೇ ಬದುಕುವ ಪರಿಸ್ಥಿತಿ ಎದುರಾಗಿದೆ. ತೋಟದ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಕಾಡಾನೆಗಳಿಂದ ತೋಟಗಳಲ್ಲಿ ಬೆಳೆ ಹಾನಿ ಹಾಗೂ ಜನರು ಜೀವ ಕಳೆದುಕೊಂಡರೆ ಅರಣ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಬಂದು ನೋಡುವುದಿಲ್ಲ ಎಂದು ಬೆಳೆಗಾರರ ಸದಾಶಿವ ಆರೋಪಿಸಿದ್ದಾರೆ. 

ಹಸು ಹುಡುಕಿಕೊಂಡು ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ: ಕಾಫಿನಾಡಲ್ಲಿ ದುರಂತ

ಕಾಡಾನೆ ಸ್ಥಳಾಂತರಕ್ಕೆ ಒತ್ತಾಯ 
ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಕಾಡಾನೆ ಸ್ಥಳಾಂತರಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳ ಹತ್ತಿರ ಮಾತನಾಡಿಸುವುದೇ ಕಷ್ಟವಾಗಿದೆ. ಆರ್ಎಫ್ಒ ಸ್ಥಳಕ್ಕೆ ಬಂದು ಕಾಡಾನೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಬೇಕು. ಸ್ಥಳಕ್ಕೆ ಡಿಎಫ್ಒ ಆಗಮಿಸುವವರೆಗೂ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಸದಾಶಿ ಕುಳಿತರು. ಬಳಿಕ ಎಸಿಎಫ್ ರಾಜೇಶ್ ನಾಯಕ್ ಸ್ಥಳಕ್ಕೆ ಆಗಮಿಸಿ, ಎಂ.ಕೆ.ಸದಾಶಿವ ಅವರ ಮನವೊಲಿಸಲು ಪ್ರಯತ್ನಿಸಿದರು. 8 ದಿನದೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಸಾವಿರಾರು ಮಂದಿ ಸೇರಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನೆಕಾರ ಎಂ.ಕೆ.ಸದಾಶಿವ ಎಚ್ಚರಿಕೆ ನೀಡಿದರು. 

Chikkamagaluru: ಸೆರೆ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಪುಂಡಾನೆಯಿಂದ ಮಲೆನಾಡಿಗರು ಹೈರಾಣು

ಇದಕ್ಕೆ ಪ್ರತಿಕ್ರಿಯೆಸಿರುವ ಎಸಿಎಫ್ ರಾಜೇಶ್ ನಾಯಕ್ ಮೂಲರಹಳ್ಳಿ ಗ್ರಾಮಸ್ಥರೊಬ್ಬರು ನಮ್ಮ ಕಛೇರಿ ಬಾಗಿಲಲ್ಲೇ ಧರಣಿ ಕುಳಿತಿದ್ದರೂ ಸ್ಪಂದಿಸದ ಸ್ಥಳೀಯ ಆರ್ಎಫ್ಒ ವಿರುದ್ಧ ನೋಟೀಸು ನೀಡಲಾಗುವುದು. ಕಾಡಾನೆ ಸ್ಥಳಾಂತರಿಸಲು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಸರ್ಕಾರ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲು ಆದೇಶ ನೀಡಿದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.