ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಬಟ್ಟೆ ತೊಳೆಯಲು ಬಾವಿಗೆ ಹೋಗಿದ್ದ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಭಾನುವಾರ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿಯ ವಿಜಯಲಕ್ಷ್ಮೀ(30), ಅಜಯ್ (10), ಐಶ್ವರ್ಯ (8) ಮೃತಪಟ್ಟವರು. ತಿಪ್ಪೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಸುಮಾರು 10 ಅಡಿ ಆಳದ ಪಾಳುಬಾವಿ ಇದ್ದು, ಇದು ಕಳೆದ ಅನೇಕ ವರ್ಷಗಳ ಹಿಂದೆಯೇ ಬತ್ತಿಹೋಗಿದೆ. 

Add Asianetnews Kannada as a Preferred SourcegooglePreferred

ಆದರೆ, ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬಾವಿ ತುಂಬಿದೆ. ಹಾಗಾಗಿ ಮಕ್ಕಳೊಂದಿಗೆ ಬಟ್ಟೆ ತೊಳೆಯಲು ವಿಜಯಲಕ್ಷ್ಮೀ ತೆರಳಿದ್ದಾರೆ. ಬಟ್ಟೆ ತೊಳೆಯುತ್ತಿದ್ದ ವೇಳೆ ಆಟವಾಡುತ್ತಿದ್ದ ಮಗಳು ಐಶ್ವರ್ಯ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಕಂಡ ತಾಯಿ ವಿಜಯಲಕ್ಷ್ಮೀ ಮಗಳನ್ನು ಕಾಪಾಡುವ ಆತುರದಲ್ಲಿ ಬಾವಿಗೆ ಇಳಿದಿದ್ದಾರೆ. 

ಆದರೆ, ಈಜು ಬಾರದ ಕಾರಣ ಮಗುವಿನೊಂದಿಗೆ ತಾಯಿಯೂ ನೀರಿನಲ್ಲಿ ಮುಳುಗಿದ್ದಾಳೆ. ತಾಯಿ ಮತ್ತು ತಂಗಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮಗ ಅಜಯ್ ಬಾವಿಗೆ ಹಾರಿದ್ದು, ಮೂವರೂ ಜಲಸಮಾಧಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಮಹಿಳೆ ಪೋಷಕರು ಆಕೆಯ ಪತಿಯೇ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.