ನಾನಾ ಮುಖಂಡರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಮ| ಗುಣಮಟ್ಟದ ಮೊಳಕೆ ಕಾಳುಗಳ ಸಾಂಬಾರು, ಮುದ್ದೆ, ಚಪಾತಿ, ಚಿಕನ್‌ ಊಟದ ವ್ಯವಸ್ಥೆ| ದಿನದ ಮೂರು ಹೊತ್ತು ಊಟ, ಬೆಳಗ್ಗೆ ಕಾಫಿ, ಸಂಜೆ ಟೀ ವ್ಯವಸ್ಥೆ|

ಚನ್ನರಾಯಪಟ್ಟಣ(ಮೇ.18): ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಲ್ಲಿರುವ 490 ಮಂದಿಗೆ ಬಿಸಿಎಂ ಇಲಾಖೆಯಡಿ ತಾಲೂಕು ಆಡಳಿತವು ಪ್ರತಿ ದಿನ ಮೂರು ಹೊತ್ತು ಗುಣಮಟ್ಟದ ಆಹಾರ ವ್ಯವಸ್ಥೆ ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊರ ರಾಜ್ಯಗಳಿಂದ ಆಗಮಿಸಿರುವ 490 ಮಂದಿಯನ್ನು ಸದ್ಯ ತಾಲೂಕಿನಲ್ಲಿ ತೆರೆಯಲಾಗಿರುವ 6 ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ. ಅವರಿಗೆ ಅಗತ್ಯ ಇರುವ ವಸತಿ, ಊಟ, ಕುಡಿವ ನೀರು ಸೇರಿ ಇನ್ನಿತರ ಸೌಲಭ್ಯಗಳನ್ನು ಸರ್ಕಾರದ ಸೂಚನೆಯಂತೆ ತಾಲೂಕು ಆಡಳಿತ ಒದಗಿಸುತ್ತಿದೆ.

ಕ್ವಾರಂಟೈನ್‌ಗೆ ಒಳಪಡುವ ಪ್ರತಿ ಸದಸ್ಯನಿಗೆ ಸರ್ಕಾರ 80 ರು. ನಷ್ಟು ಹಣ ಭರಿಸುತ್ತದೆ. ಅಷ್ಟು ಹಣದಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದಿಲ್ಲ ಎಂಬುದನ್ನು ಮನಗಂಡು ರಾಜಕೀಯ ನಾಯಕರು, ಕೆಲ ಮುಖಂಡರು ಹಾಗೂ ಸಮಾಜ ಸೇವಕರ ನೆರವಿನಿಂದ ಕ್ವಾರಂಟೈನ್‌ ಮಂದಿಗೆ ಸೂಕ್ತ ಸೌಲಭ್ಯ ಕಲ್ಪಿಸಲಾಗುತ್ತಿದೆ.

4.0 ಲಾಕ್‌ಡೌನ್‌ಗೆ ದಿನಗಣನೆ: ಇತ್ತ ರಸ್ತೆ ಬಂದ್‌ಗೆ ಚಾಲನೆ..!

ಎಲ್ಲ 490 ಮಂದಿಗೆ ದಿನದ ಮೂರು ಹೊತ್ತು ಊಟ, ಬೆಳಗ್ಗೆ ಕಾಫಿ, ಸಂಜೆ ಟೀ ಒದಗಿಸುವ ವ್ಯವಸ್ಥೆಯನ್ನು ಬಿಸಿಎಂ ವಿಸ್ತರಣಾ​ಧಿಕಾರಿ ಮಂಜುನಾಥ್‌ರವರಿಗೆ ವಹಿಸಲಾಗಿದ್ದು, ಅವರು ದಾನಿಗಳು, ರಾಜಕೀಯ ಮುಖಂಡರು ಮತ್ತು ತಾಲೂಕು ಆಡಳಿತದ ಸೂಚನೆ ಮೇರೆಗೆ ಅಚ್ಚುಕಟ್ಟಾಗಿ ಗುಣಮಟ್ಟದಿಂದ ಕೂಡಿದ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ.

ಭಾನುವಾರಂದು ಎಲ್ಲ ಕ್ವಾರಂಟೈನ್‌ದಾರರಿಗೆ ವಿಶೇಷವಾಗಿ ಚಿಕನ್‌ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದಲ್ಲಿನ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯದಲ್ಲಿ 30 ಜನರ ತಂಡ ಸಿದ್ಧಪಡಿಸಿದ ಅಡುಗೆಯನ್ನು ಪ್ರತಿ ಕ್ವಾರಂಟೈನ್‌ ಕೇಂದ್ರಕ್ಕೆ ಪ್ರತ್ಯೇಕ ಆಟೋಗಳ ಮೂಲಕ ಕಳುಹಿಸಿಕೊಡಲಾಯಿತು.

ಕ್ವಾರಂಟೈನ್‌ ಕೇಂದ್ರದಲ್ಲಿರುವವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಗುಣಮಟ್ಟದ ಮೊಳಕೆ ಕಾಳುಗಳ ಸಾಂಬಾರು, ಮುದ್ದೆ, ಚಪಾತಿ, ಚಿಕನ್‌ ಊಟದ ವ್ಯವಸ್ಥೆಯನ್ನು ಮಾಡುತ್ತಿರುವ ತಾಲೂಕು ಆಡಳಿತ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.