Asianet Suvarna News Asianet Suvarna News

ಚಿರತೆ ಕಾರ್ಯಾಚರಣೆ ಠುಸ್‌; ಬೃಂದಾವನ ಓಪನ್‌

ಕಳೆದೊಂದು ತಿಂಗಳ ಹಿಂದೆ ಕೆಆರ್‌ಎಸ್‌ ಬೃಂದಾವನದಲ್ಲಿ ಕಾಣಿಸಿಕೊಂಡಿದ್ದ ಚಿರತೆ ವಿರುದ್ಧದ ಅರಣ್ಯ ಇಲಾಖೆ ಕಾರ್ಯಾಚರಣೆ ಠುಸ್‌ ಆಗಿದೆ. ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧದಿಂದ 25 ದಿನಗಳಿಂದ 70 ಲಕ್ಷ ರು.ವರೆಗೆ ನಷ್ಟಉಂಟಾಗಿದ್ದು, ಈ ನಷ್ಟದಿಂದ ತಪ್ಪಿಸಿಕೊಳ್ಳಲು ಇದೀಗ ಬೃಂದಾವನ ಪ್ರವೇಶವನ್ನು ಸಾರ್ವಜನಿಕರಿಗೆ ಬುಧವಾರದಿಂದ ಮುಕ್ತಗೊಳಿಸಲಾಗಿದೆ.

Cheetah operation failure Brindavan Open for tourist snr
Author
First Published Dec 1, 2022, 9:22 AM IST

ಮಂಡ್ಯ(ಡಿ.01): ಕಳೆದೊಂದು ತಿಂಗಳ ಹಿಂದೆ ಕೆಆರ್‌ಎಸ್‌ ಬೃಂದಾವನದಲ್ಲಿ ಕಾಣಿಸಿಕೊಂಡಿದ್ದ ಚಿರತೆ ವಿರುದ್ಧದ ಅರಣ್ಯ ಇಲಾಖೆ ಕಾರ್ಯಾಚರಣೆ ಠುಸ್‌ ಆಗಿದೆ. ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧದಿಂದ 25 ದಿನಗಳಿಂದ 70 ಲಕ್ಷ ರು.ವರೆಗೆ ನಷ್ಟಉಂಟಾಗಿದ್ದು, ಈ ನಷ್ಟದಿಂದ ತಪ್ಪಿಸಿಕೊಳ್ಳಲು ಇದೀಗ ಬೃಂದಾವನ ಪ್ರವೇಶವನ್ನು ಸಾರ್ವಜನಿಕರಿಗೆ ಬುಧವಾರದಿಂದ ಮುಕ್ತಗೊಳಿಸಲಾಗಿದೆ.

ಬೃಂದಾವನದೊಳಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ (forest)  ನಡೆಸಿದ ಕಾರ್ಯಾಚರಣೆಗಳೆಲ್ಲವೂ ವಿಫಲವಾಗಿದೆ. ಅ.22 ಹಾಗೂ ಅ.28ರಂದು ಎರಡು ಬಾರಿ ಚಿರತೆ ಕಾಣಿಸಿಕೊಂಡಿದ್ದರಿಂದ ಬೃಂದಾವನದ ಎಂಟು ಕಡೆ ಬೋನ್‌ ಇಟ್ಟು ಹಲವೆಡೆ ನಾಯಿಯನ್ನು ಕಟ್ಟಿಹಾಕಿದರೂ ಆಹಾರವನ್ನರಸಿಕೊಂಡು ಚಿರತೆ ಬರಲೂ ಇಲ್ಲ, ಬೋನಿಗೆ ಬೀಳಲೂ ಇಲ್ಲ. ಬೃಂದಾವನದಾಚೆ ಬೆಳೆದಿದ್ದ ಪೊದೆಗಳನ್ನು ತೆರವುಗೊಳಿಸಿದರೂ ಚಿರತೆ ಕಾಣಸಿಗಲಿಲ್ಲ. ಅರಣ್ಯ ಇಲಾಖೆಯ 50 ಸಿಬ್ಬಂದಿ ಜೊತೆಗೂಡಿ ನಡೆಸಿದ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದರೂ ಫಲ ಕೊಡಲಿಲ್ಲ. ಚಿರತೆ ಸೆರೆಯಾಗದೆ ಅರಣ್ಯ ಇಲಾಖೆ, ಕಾವೇರಿ (cauvery) ನೀರಾವರಿ ನಿಗಮದ ಅಧಿಕಾರಿಗಳನ್ನು ದಿಕ್ಕೆಡಿಸಿತು.

ಕೊನೆಗೆ ವನ್ಯಜೀವಿ ವಲಯದ ಅಧಿಕಾರಿಗಳಿಂದ ಡ್ರೋನ್‌ ಕಾರ್ಯಾಚರಣೆ ನಡೆಸಿ ಚಿರತೆ ಇರುವ ಜಾಗವನ್ನು ಪತ್ತೆಹಚ್ಚುವ ಮತ್ತು ಸೆರೆಹಿಡಿಯುವ ನಿರ್ಧಾರ ಮಾಡಿದರೇ ವಿನಃ ಆ ನಿಟ್ಟಿನಲ್ಲಿ ಯಾರೊಬ್ಬರೂ ಮುಂದುವರೆಯಲೇ ಇಲ್ಲ. ಇತ್ತ ಚಿರತೆಯೂ ತಿಂಗಳಿಂದ ಕೆಆರ್‌ಎಸ್‌ ಸುತ್ತಮುತ್ತ ಎಲ್ಲೂ ಕಾಣಿಸಿಕೊಳ್ಳಲೂ ಇಲ್ಲ.

ಕಳೆದ 25 ದಿನಗಳಿಂದ ಚಿರತೆ ಎಲ್ಲೂ ಕಾಣಿಸಿಕೊಳ್ಳದಿದ್ದರಿಂದ ಧೈರ್ಯಗೊಂಡ ಅರಣ್ಯ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಬೃಂದಾವನ ಪ್ರವೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ. ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಬೃಂದಾವನದಲ್ಲಿ ಬುಧವಾರದಿಂದ ಮತ್ತೆ ಕಲರವ ಶುರುವಾಗಿದೆ. ಸಾರ್ವಜನಿಕರು ಕೂಡ ಚಿರತೆಯ ಆತಂಕ, ಭಯವಿಲ್ಲದೆ ಬೃಂದಾವನ ಪ್ರವೇಶಿಸಿ ಸಂತಸದಿಂದ ಕಾಲ ಕಳೆಯುತ್ತಿದ್ದ ದೃಶ್ಯಗಳು ಕಂಡುಬಂದವು.

ನಿಷೇಧದಿಂದ 70 ಲಕ್ಷ ರು. ನಷ್ಟ:

25 ದಿನಗಳಿಂದ ಸಾರ್ವನಿಕರಿಗೆ ಬೃಂದಾವನ ಪ್ರವೇಶ ನಿಷೇಧಿಸಿದ್ದರಿಂದ ಸುಮಾರು 70 ಲಕ್ಷ ರು.ವರೆಗೆ ನಷ್ಟಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೃಂದಾವನ ಪ್ರವೇಶ ಶುಲ್ಕ ಹಾಗೂ ವಾಹನ ಪಾರ್ಕಿಂಗ್‌ನಿಂದ ಬರುತ್ತಿದ್ದ ನಿತ್ಯ ಲಕ್ಷಾಂತರ ರು. ಕಾವೇರಿ ನೀರಾವರಿ ನಿಗಮದ ಖಜಾನೆಯನ್ನು ತುಂಬುತ್ತಿತ್ತು. ಚಿರತೆ ಕಾಣಿಸಿಕೊಂಡು ಸೃಷ್ಟಿಸಿದ ಆತಂಕದಿಂದ 25 ದಿನ ಮುನ್ನೆಚ್ಚರಿಕೆಯಾಗಿ ಬಂದ್‌ ಮಾಡಲಾಗಿತ್ತು.

ಕಳೆದ ತಿಂಗಳು ವಾರದೊಳಗೆ ಎರಡು ಬಾರಿ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಚಿರತೆ 20 ದಿನಗಳಿಂದ ಬೃಂದಾವನದ ಸುತ್ತ ಮುತ್ತ ಸುಳಿದಾಡಲೂ ಇಲ್ಲ. ಅಕ್ಕ-ಪಕ್ಕದ ಗ್ರಾಮಗಳಲ್ಲಿ ಕಾಣಿಸಿಕೊಂಡ ಕುರುಹೂ ಸಿಗಲಿಲ್ಲ. ಇದರಿಂದ ಚಿರತೆ ಮೂಲ ಸ್ಥಾನಕ್ಕೆ ತೆರಳಿರಬಹುದೆಂಬ ದೃಢ ವಿಶ್ವಾಸದೊಂದಿಗೆ ಬೃಂದಾವನಕ್ಕೆ ಪ್ರವೇಶ ಕಲ್ಪಿಸಲಾಗಿದೆ.

ಟಿ. ನರಸೀಪುರ (ನ.30): ನರಭಕ್ಷಕ ಕ್ರೂರ ಪ್ರಾಣಿ ಚಿರತೆ ದಾಳಿ ನಡೆದು ತಿಂಗಳು ಕಳೆದರೂ ಚಿರತೆ ಹಿಡಿಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂ.ಎಲ…. ಹುಂಡಿ ಮಠಾಧ್ಯಕ್ಷ ಶ್ರೀ ಗೌರಿಶಂಕರ ಸ್ವಾಮೀಜಿ ಆಗ್ರಹಿಸಿದರು.

ಕ್ರೂರ ನರಭಕ್ಷಕ ಚಿರತೆ ಹಿಡಿಯುವಲ್ಲಿ ವಿಫಲವಾಗಿರುವ ವಲಯ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತದ ಬೇಜವಾಬ್ದಾರಿ ಖಂಡಿಸಿ ಪಟ್ಟಣದ ತಾಲೂಕು ವಲಯ ಅರಣ್ಯ ಇಲಾಖೆ ಕಚೇರಿ ಮುಂದೆ ಪ್ರತಿಭಟನೆಯನ್ನು (Protest)  ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನ ಉಕ್ಕಲಗೆರೆ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಸುತ್ತಮುತ್ತಲು ಚಿರತೆ (Leopard)  ಹಾವಳಿ ಹೆಚ್ಚಿದ್ದು ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವಾಗಲಿ ಅಥವಾ ತಾಲೂಕು ಆಡಳಿತವಾಗಲಿ ಯಾವುದೇ ಕ್ರಮ ವಹಿಸದೆ ಕಣ್ಣೊರೆಸುವ ತಂತ್ರ ಮಾಡುತ್ತದೆ ಎಂದು ಅವರು ಆರೋಪಿಸಿದರು.

ಮುಂದುವರೆದು ಮಾತನಾಡಿದ ಅವರು ಚಿರತೆ ದಾಳಿಯಿಂದ ಮೃತಪಟ್ಟವಿದ್ಯಾರ್ಥಿ ಕುಟುಂಬಕ್ಕೆ ಶಾಸಕರು ಹೊರತುಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಜಿಲ್ಲಾಮಟ್ಟದ ಅಧಿಕಾರಿಗಳಾಗಲಿ ಭೇಟಿಯಾಗಿ ಸಾಂತ್ವನ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರಂತರನ್ನು ಉದ್ದೇಶಿ ಶಾಸಕ ಎಂ. ಅಶ್ವಿನ್‌ಕುಮಾರ್‌ ಮಾತನಾಡಿ, ಅರಣ್ಯಾಧಿಕಾರಿ ಎಸಿಎಫ್‌ ಶಿವರಾಮು ಅವರನ್ನು ತರಾಟೆಗೆ ತೆಗೆದುಕೊಂಡರು, ಎಷ್ಟುದಿನದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಹಿಡಿಯುತ್ತೀರಿ ಎಂದು ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಚಿರತೆ ದಾಳಿ ವಿಚಾರವನ್ನು ಮುಂದೆ ನಡೆಯುವ ವಿಧಾನಸಭಾ ಅಧಿವೇಶದಲ್ಲಿ ಚರ್ಚಿಸಿ ಕೂಡಲೇ ಕ್ರಮ ವಹಿಸಲು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಚಿರತೆ ದಾಳಿಯಿಂದ ಮೃತಪಟ್ಟಮಂಜುನಾಥನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದರು. ಕ್ರೂರ ಮೃಗಗಳಿಂದ ಮೃತಪಟ್ಟಸಾಕು ಪ್ರಾಣಿಗಳಿಗೆ (ಹಸು, ಕುರಿ, ಮೇಕೆ) ಹೆಚ್ಚಿನ ಅನುದಾನ ನೀಡಲು ಸರ್ಕಾರದ ಜೊತೆ ಚರ್ಚಿಸಿ ಮಾತನಾಡುತ್ತೇನೆ ಎಂದರು.

Follow Us:
Download App:
  • android
  • ios