ಯಾದಗಿರಿ ಜಿಲ್ಲೆಯ ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿ ನಡೆದ ಘಟನೆ| ಐವರಿಗೆ ಗಾಯ| ಬಳಿಚಕ್ರ ಗ್ರಾಮದ ಭಕ್ತಿ ಲಿಂಗೇಶ್ವರ ಜಾತ್ರೆ| ಜಿಲ್ಲಾಡಳಿತ ಅಥವಾ ಪೊಲೀಸ್‌ ಗಮನಕ್ಕೆ ತಾರದೆ ನಡೆದ ಜಾತ್ರೆ| 

ಯಾದಗಿರಿ(ಏ.18): ರಥೋತ್ಸವದ ವೇಳೆ, ರಥದ ಮೇಲ್ಭಾಗದ ಗೋಪುರ ಕಳಚಿ ಬಿದ್ದಿದ್ದರಿಂದ ಐವರು ಗಾಯಗೊಂಡು, ಓರ್ವನ ಸ್ಥಿತಿ ಗಂಭೀರವಾಗಿರುವ ದುರ್ಘಟನೆ ಜಿಲ್ಲೆಯ ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಳಿಚಕ್ರ ಗ್ರಾಮದ ಭಕ್ತಿ ಲಿಂಗೇಶ್ವರ ಜಾತ್ರೆ ಶನಿವಾರ ನಡೆದಿತ್ತು. ಕೋವಿಡ್‌ ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಾತ್ರೋತ್ಸವಗಳನ್ನು ನಿಷೇಧಿಸಿದ್ದರೂ ಸಹ, ಆಡಳಿತ ಅಥವಾ ಪೊಲೀಸ್‌ ಗಮನಕ್ಕೆ ತಾರದೆ ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ.

ಯಾದಗಿರಿ: ಬಸ್‌ಗೆ ಕಾಯುವ ವೇಳೆ ಲಾರಿ ಹಾಯ್ದು ತಾಯಿ, ಮಗು ಸಾವು

ರಥೋತ್ಸವಕ್ಕೆ ಚಾಲನೆ ಸಿಕ್ಕ ನಂತರ ಸುಮಾರು 300 ಮೀಟರ್‌ಗಳಷ್ಟು ದೂರ ಚಲಿಸಿದಾಗ, ರಥದ ಗೋಪುರದ ಕೆಳಗಿನ ಭಾಗದ ವೆಲ್ಡಿಂಗ್‌ ಮುರಿದು, ನೋಡನೋಡುತ್ತಲೇ ಭಕ್ತರ ಮೇಲೆ ಗೋಪುರ ಕಳಚಿಬಿದ್ದಿದೆ. ಈ ಸಂದರ್ಭದಲ್ಲಿ ಐವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರ ಎಂದು ಹೇಳಲಾಗಿದ್ದು, ರಾಯಚೂರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾದಗಿರಿ ತಾಲೂಕಿನ ಸೈದಾಪೂರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಜಾತ್ರೋತ್ಸವ ಮಾಡಲಾಗಿರುವ ಬಗ್ಗೆ ಹಾಗೂ ಘಟನೆಯ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.