ಯಾದಗಿರಿ ಜಿಲ್ಲೆಯ ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿ ನಡೆದ ಘಟನೆ| ಐವರಿಗೆ ಗಾಯ| ಬಳಿಚಕ್ರ ಗ್ರಾಮದ ಭಕ್ತಿ ಲಿಂಗೇಶ್ವರ ಜಾತ್ರೆ| ಜಿಲ್ಲಾಡಳಿತ ಅಥವಾ ಪೊಲೀಸ್‌ ಗಮನಕ್ಕೆ ತಾರದೆ ನಡೆದ ಜಾತ್ರೆ| 

ಯಾದಗಿರಿ(ಏ.18): ರಥೋತ್ಸವದ ವೇಳೆ, ರಥದ ಮೇಲ್ಭಾಗದ ಗೋಪುರ ಕಳಚಿ ಬಿದ್ದಿದ್ದರಿಂದ ಐವರು ಗಾಯಗೊಂಡು, ಓರ್ವನ ಸ್ಥಿತಿ ಗಂಭೀರವಾಗಿರುವ ದುರ್ಘಟನೆ ಜಿಲ್ಲೆಯ ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

Add Asianetnews Kannada as a Preferred SourcegooglePreferred

ಬಳಿಚಕ್ರ ಗ್ರಾಮದ ಭಕ್ತಿ ಲಿಂಗೇಶ್ವರ ಜಾತ್ರೆ ಶನಿವಾರ ನಡೆದಿತ್ತು. ಕೋವಿಡ್‌ ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಾತ್ರೋತ್ಸವಗಳನ್ನು ನಿಷೇಧಿಸಿದ್ದರೂ ಸಹ, ಆಡಳಿತ ಅಥವಾ ಪೊಲೀಸ್‌ ಗಮನಕ್ಕೆ ತಾರದೆ ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ.

ಯಾದಗಿರಿ: ಬಸ್‌ಗೆ ಕಾಯುವ ವೇಳೆ ಲಾರಿ ಹಾಯ್ದು ತಾಯಿ, ಮಗು ಸಾವು

ರಥೋತ್ಸವಕ್ಕೆ ಚಾಲನೆ ಸಿಕ್ಕ ನಂತರ ಸುಮಾರು 300 ಮೀಟರ್‌ಗಳಷ್ಟು ದೂರ ಚಲಿಸಿದಾಗ, ರಥದ ಗೋಪುರದ ಕೆಳಗಿನ ಭಾಗದ ವೆಲ್ಡಿಂಗ್‌ ಮುರಿದು, ನೋಡನೋಡುತ್ತಲೇ ಭಕ್ತರ ಮೇಲೆ ಗೋಪುರ ಕಳಚಿಬಿದ್ದಿದೆ. ಈ ಸಂದರ್ಭದಲ್ಲಿ ಐವರಿಗೆ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರ ಎಂದು ಹೇಳಲಾಗಿದ್ದು, ರಾಯಚೂರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾದಗಿರಿ ತಾಲೂಕಿನ ಸೈದಾಪೂರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಜಾತ್ರೋತ್ಸವ ಮಾಡಲಾಗಿರುವ ಬಗ್ಗೆ ಹಾಗೂ ಘಟನೆಯ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.