ಹಾಸನದ ಪೊಲೀಸ್ ಅಧಿಕಾರಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದು ಅವರ ಆತ್ಮಹತ್ಯೆಗೆ ಕಾರಣ ರಾಜಕೀಯ ಹಿನ್ನೆಲೆ ಇರುವವರ ಒತ್ತಡ ಎನ್ನಲಾಗಿದೆ. 

ಹಾಸನ (ಡಿ.05): ರಾಜಕೀಯ ಹಿನ್ನೆಲೆ ಇರುವ ವ್ಯಕ್ತಿಗಳ ಒತ್ತಡ ಹಾಗೂ ಮಾನಸಿಕ ಖಿನ್ನತೆಯಿಂದ ಚನ್ನರಾಯಪಟ್ಟಣ ಠಾಣೆಯ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಕಿರಣ್‌ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಆರ್‌. ಶ್ರೀನಿವಾಸಗೌಡ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿರಣ್‌ ಕುಮಾರ್‌ ಅವರ ಆತ್ಮಹತ್ಯೆ ನಂತರ ಪ್ರಕರಣ ಸಂಬಂಧ ಅರಸೀಕೆರೆ ಡಿವೈಎಸ್ಪಿ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿತ್ತು. ತನಿಖೆ ಮುಗಿದಿದ್ದು, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಕಿರಣ್‌ ಕುಮಾರ್‌ ಅವರ ಆತ್ಮಹತ್ಯೆಗೂ ಮುನ್ನ ಅವರು ಮಾಡಿರುವ ಫೋನ್‌ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಿರಣ್‌ ಕುಮಾರ್‌ ಅವರಿಗೆ ಬಂದ ಪ್ರತಿಯೊಂದು ಕರೆ ಮಾಡಿದವರಿಗೆ ವಿಚಾರಣೆ ನಡೆಸಿರುವ ಡಿವೈಎಸ್‌ಪಿ ಅವರು ಅಂತಿಮವಾಗಿ ತನಿಖಾ ವರದಿ ಸಿದ್ಧಪಡಿಸಿದ್ದು. 

ಯುವ ಸ್ವಾಮೀಜಿ ಆತ್ಮಹತ್ಯೆ ಕೇಸ್ : 8 ದಿನದಲ್ಲೇ ಮತ್ತೋರ್ವ ಉತ್ತರಾಧಿಕಾರಿ ...

ಈ ಸಂಬಂಧ ಅಧಿಕೃತ ವಿಸ್ತೃತ ವರದಿಯನ್ನು ಡಿವೈಎಸ್‌ಪಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯನ್ನು ಕೂಲಂಕುಷವಾಗಿ ಪರಾಮರ್ಶಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ಶ್ರೀನಿವಾಸಗೌಡ ಸ್ಪಷ್ಟಪಡಿಸಿದ್ದಾರೆ.

ಕಿರಣ್‌ಕುಮಾರ್‌ ಅವರಿಗೆ ಕರೆ ಮಾಡಿರುವ ವ್ಯಕ್ತಿಗಳು ಯಾರು? ರಾಜಕಾರಣಿಗಳು ಯಾರು? ರಾಜಕಾರಣಿಗಳ ಬೆಂಬಲಿಗರು ಯಾರು? ಎಂಬುದು ಗೊತ್ತಾಗಬೇಕಿದೆ. ಇನ್ನು ಕಿರಣ್‌ ಕುಮಾರ್‌ ಅವರಿಗೆ ರಾಜಕೀಯ ವ್ಯಕ್ತಿಗಳು ಕರೆ ಮಾಡಿದ್ದಾರೆ ಹಾಗೂ ಇದೇ ಕಾರಣದಿಂದ ಸಾವಿಗೀಡಾಗಿದ್ದಾರೆ ಎಂದು ಅಂತಿಮವಾಗಿ ಹೇಳಲಾಗದು. ಕಾರಣ ಪೊಲೀಸ್‌ ಸಿಬ್ಬಂದಿ ಎಂದ ಮೇಲೆ ರಾಜಕಾರಣಿಗಳು ಕರೆ ಮಾಡುವುದು ಸಾಮಾನ್ಯ. ಕಾರಣ ಏನೇ ಇರಲಿ ಕಿರಣ್‌ ಕುಮಾರ್‌ ಅವರು ಆತ್ಮಹತ್ಯೆಗೆ ಶರಣಾಗಬಾರದಿತ್ತು ಎಂಬುದು ಪೊಲೀಸ್‌ ಇಲಾಖೆಯಲ್ಲಿನ ಕಿರಣ್‌ ಸ್ನೇಹಿತರು ಹಾಗೂ ಸಂಬಂ​ಧಿಕರ ಅಭಿಪ್ರಾಯವಾಗಿದೆ.