Asianet Suvarna News Asianet Suvarna News

Govt Anganawadi : ಅಂಗನವಾಡಿಗೆ ಮಗನನ್ನು ಸೇರಿಸಿದ ನ್ಯಾಯಾ​ಧೀಶ

  •  ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಮೋಹಕ್ಕೆ ಸಿಲುಕಿರುವ ಪೋಷಕರು
  • ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಅಂಗನವಾಡಿಗೆ ಕಳುಹಿಸುವ ಮೂಲಕ ಇತರರಿಗೂ ಮಾದರಿ
channapattana Judge admission son To Govt Anganawadi snr
Author
Bengaluru, First Published Jan 5, 2022, 1:42 PM IST

 ಚನ್ನಪಟ್ಟಣ (ಜ.05):   ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ (Private School ) ಮೋಹಕ್ಕೆ ಸಿಲುಕಿರುವ ಪೋಷಕರು ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು (Children) ಕಿಂಡರ್‌ ಗಾರ್ಡನ್‌, ಕಿಡ್ಸ್‌  ಪ್ಲೇ ಹೋಂಗಳಿಗೆ (Home Play ) ಸೇರಿಸುತ್ತಾರೆ. ಆದರೆ ನಗರದ ಜೆಎಂಎಫ್‌ಸಿ (JMFC) ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಂ.ಮಹೇಂದ್ರ ಅವರು ತಮ್ಮ ಮೂರುವರೆ ವರ್ಷದ ಮಗ ಎಚ್‌.ಎಂ.ನಿದರ್ಶನ್ ನ್ನು ಅಂಗನವಾಡಿಗೆ ಕಳುಹಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. 

ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ (Temple) ಸಮೀಪ ಇರುವ ಅಂಗನವಾಡಿ ಕೇಂದ್ರಕ್ಕೆ ಪತ್ನಿಯೊಂದಿಗೆ ಆಗಮಿಸಿದ ನ್ಯಾ.ಮಹೇಂದ್ರ ಮಗುವನ್ನು ದಾಖಲು ಮಾಡಿದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಿ ಶಾಲೆಯಲ್ಲಿ (Govt School) ಓದಿ ಈ ಹಂತಕ್ಕೆ ಬೆಳೆದಿದ್ದೇನೆ. ನನ್ನ ಮಗನೂ ಸರ್ಕಾರಿ ಶಾಲೆಯಲ್ಲೇ ಓದಬೇಕು ಎಂದು ತಿಳಿಸಿದರು.

200ರಷ್ಟು ದಾಖಲಾತಿ :   ಕೊರೋನಾದಿಂದ ಅನಿಶ್ಚಿತತೆಯಲ್ಲಿರುವ ಶಿಕ್ಷಣ ಕ್ಷೇತ್ರದಲ್ಲಿ ಇನ್ನೇನು ಸರ್ಕಾರಿ ಶಾಲೆಗಳು ಮುಚ್ಚೇ ಹೋದವು ಎಂಬ ಸ್ಥಿತಿಯಲ್ಲಿದ್ದ ಸನ್ನಿವೇಶವಿತ್ತು. ಆದರೆ ಖಾಸಗಿ ಶಾಲೆಗಳು ಶಾಲೆಯನ್ನು ಮುಚ್ಚಿದ್ದು ಮತ್ತು ಕೋವಿಡ್‌ನಿಂದಾಗಿ ಇದೀಗ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಪಟ್ಟಣದ ಜಿ.ಎಂ.ಪಿ. (ಗವರ್ನಮೆಂಟ್‌ ಮಾಡೆಲ್‌ ಪ್ರೈಮರಿ ಸ್ಕೂಲ್‌) ಶಾಲೆಯಲ್ಲಿ ಶೇ.200 ದಾಖಲಾತಿ ಹೆಚ್ಚಳವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.

134 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 40 ವರ್ಷಗಳ ಹಿಂದೆ 900ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ನಂತರದ ವರ್ಷಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆರಂಭವಾಗಿದ್ದರಿಂದ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದು 2010-20ನೇ ಸಾಲಿಗೆ 84 ವಿದ್ಯಾರ್ಥಿಗಳಷ್ಟೇ ಉಳಿದಿದ್ದರು.

ಎರಡು ವರ್ಷಗಳ ಹಿಂದೆ 2019-20ನಲ್ಲಿ 84, 2020-21 ಸಾಲಿನಲ್ಲಿ 113 ವಿದ್ಯಾರ್ಥಿಗಳು ಇದ್ದರು. ಆದರೆ ಈ ಸಾಲಿನಲ್ಲಿ 215 ವಿದ್ಯಾರ್ಥಿಗಳು ದಾಖಲಾಗಿದ್ದು, ಇನ್ನೂ ವಿವಿಧ ಖಾಸಗಿ ಶಾಲೆಗಳಿಂದ ಸುಮಾರು 25-30 ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದ್ದು, ಒಟ್ಟು 240-250 ಸಂಖ್ಯೆ ತಲುಪಲಿದೆ ಎಂದು ಮುಖ್ಯೋಪಧ್ಯಾಯಿನಿ ಅಣ್ಣಮ್ಮ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕಳೆದ ಎರಡು ದಶಕಗಳಲ್ಲಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸುತ್ತಾ ಬಂದಿದ್ದರಿಂದ, ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಗ್ರಾಮೀಣ ಭಾಗಗಳಲ್ಲಿ ಒಂದೋಂದಾಗಿ ಬಾಗಿಲು ಮುಚ್ಚುತ್ತಾ ಸಾಗುತ್ತಿದ್ದವು. ಆದರೆ ಎರಡು ವರ್ಷಗಳ ಹಿಂದೆ ಪಟ್ಟಣದ ಜಿಎಂಪಿ ಶಾಲೆಯಲ್ಲಿ ಎಲ್‌ಕೆಜಿಯಿಂದ ಎಂಟನೇ ತರಗತಿಯವರೆಗೆ ಕೇವಲ 84 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.

ದಾಖಲಾತಿಗೆ ಹರ ಸಾಹಸ: ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಪೋಷಕರ ಮನೆ-ಮನೆಗಳಿಗೆ ತೆರಳಿ ಅವರನ್ನು ಒಪ್ಪಿಸಿ ಕನಿಷ್ಠ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಾತಿ ಮಾಡಿಸಲು ಹರಸಾಹಸ ಮಾಡುವ ಮೂಲಕ ಶಾಲೆಯನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ದರು. ಆದರೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಯತ್ತ ಹೆಜ್ಜೆ ಇರಿಸಿದ್ದಾರೆ. ಕೋವಿಡ್‌ ಬಂದ ನಂತರ ಖಾಸಗಿ ಶಾಲೆಗಳು ಕೂಡ ಪಾಠ ಮಾಡಲು ಸಾಧ್ಯವಾಗದೆ, ಶುಲ್ಕ ವಸೂಲಿ ಮಾಡಲು ಮುಂದಾಗಿದ್ದು ಮತ್ತು ತದ ನಂತರ ಆನ್‌ಲೈನ್‌ ಶಿಕ್ಷಣ ನೀಡಲು ಆರಂಭಿಸಿದ್ದು, ಒಂದು ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ವರದಾನವಾಗಿ ಪರಿಣಮಿಸಿದೆ.

ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ 9 ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು 2012-13ರಲ್ಲಿ 6,7 ಮತ್ತು 8ನೇ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿತ್ತು. 2019-20ನೇ ಸಾಲಿಗೆ ಈ ಶಾಲೆಯಲ್ಲಿಯೂ ಎಲ್‌ಕೆಜಿ ಮತ್ತು ಯುಕೆಜಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪ್ರಾರಂಭಿಸಲಾಗಿತ್ತು. ಶಿಕ್ಷಣಕ್ಕಾಗಿ ಎಸ್‌ಡಿಎಂಸಿ ಸಹಕಾರದೊಂದಿಗೆ ಪೋಷಕರಿಂದ ಕೇವಲ ರೂ.200 ಮಾತ್ರ ಪಡೆದು ಪುಸ್ತಕ ನೀಡಲಾಯಿತು. ಈ ಬಾರಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯೊಂದಿಗೆ ಒಂದನೇ ತರಗತಿ ಮತ್ತು ಎರಡನೇ ತರಗತಿ, ಆರು, ಏಳು ಮತ್ತು ಎಂಟನೇ ತರಗತಿಗಳನ್ನು ಆಂಗ್ಲ ಶಿಕ್ಷಣದಲ್ಲಿ ನೀಡಲಾಗುತ್ತಿದೆ.

ಶತಮಾನದ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು!

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 1887ರಲ್ಲಿ ಆರಂಭವಾಗಿದ್ದು, ಈಗಾಗಲೇ 134 ವರ್ಷಗಳನ್ನು ಪೂರೈಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದೆ. ಇದರಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯದ ಮಂತ್ರಿಗಳು, ಶಾಸಕರು, ಸರ್ಕಾರದ ಉನ್ನತ ಹುದ್ದೆ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ವಿದೇಶಗಳಲ್ಲಿಯೂ ಕೂಡ ಕರ್ತವ್ಯದಲ್ಲಿರುವವರೂ ಸೇರಿದಂತೆ ಹಲವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ.

ಈ ಹಿಂದಿಗಿಂತ ದುಪ್ಪಟ್ಟು ದಾಖಲಾತಿ!

ಒಂದನೇ ತರಗತಿಗೆ ಸುಮಾರು 47ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ 117ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಎರಡು ವರ್ಷಗಳಲ್ಲಿ 84 ರಿಂದ 225ಕ್ಕೂ ಹೆಚ್ಚಿನ ಸಂಖ್ಯೆಗೆ ಏರಿಕೆಯಾಗಿದೆ. ಎಲ್‌ಕೆಜಿ ಮತ್ತು ಯುಕೆಜಿಗೆ ಮಾತ್ರ ನಾವು ಓರ್ವ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ಉಳಿದಂತೆ ನಮ್ಮ ಶಿಕ್ಷಕರು ಪಾಠ ಪ್ರವಚನ ಮಾಡುತ್ತಿದ್ದಾರೆ.

ಒಂದನೆ ತರಗತಿಗೆ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇದ್ದು, ಇನ್ನೂ ಸೇರ್ಪಡೆಗೊಳ್ಳುತ್ತಿರುವುದರಿಂದ ಎರಡು ತರಗತಿಗಳನ್ನು ಮಾಡಲಾಗುವುದು ಎಂದು ಪದವಿಧರ ಮುಖ್ಯ ಶಿಕ್ಷಕಿ ಎಂ.ಜೆ.ಅಣ್ಣಮ್ಮ ತಿಳಿಸಿದ್ದಾರೆ.  

ಜಿಎಂಪಿ ಶಾಲೆಯಲ್ಲಿ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಉತ್ತಮ ಶಿಕ್ಷಕ ವೃಂದವೇ ಇದೆ. ಹೀಗಾಗಿ ಮತ್ತು ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ನ.ಲ.ವಿಜಯ, ಕವಿ ಮತ್ತು ಹಿರಿಯ ವಿದ್ಯಾರ್ಥಿ ಹೇಳಿದ್ದಾರೆ. 

9 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು 6-8ನೇ ತರಗತಿ ಮಕ್ಕಳಿಗೆ ಆರಂಭಿಸಿದಾಗಿನಿಂದ ಈವರೆಗೆ ಬಹಳಷ್ಟು ಶ್ರಮಪಟ್ಟು, ಎಸ್‌ಡಿಎಂಸಿ ಸದಸ್ಯರು ಮತ್ತು ದಾನಿಗಳ ನೆರವಿನೊಂದಿಗೆ ಶಾಲೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ. ಎಲ್‌ಕೆಜಿಯಿಂದ 2ನೇ ತರಗತಿ ಶಿಕ್ಷಣಕ್ಕಾಗಿ ಹೊರಗುತ್ತಿಗೆ ಆಧಾರದಲ್ಲಿ ಓರ್ವ ಶಿಕ್ಷಕರನ್ನು ನೇಮಿಸಿ ಅವರಿಗೆ ವೇತನ ನೀಡುತ್ತಿದ್ದೇವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಕುಶಲ ಹೇಳಿದ್ದಾರೆ. 

Follow Us:
Download App:
  • android
  • ios