ಮುತ್ತಪ್ಪ ರೈ ವಿರುದ್ಧ ಪ್ರಕರಣ ದಾಖಲು
ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಹಾಗೂ ಇತರರ ವಿರುದ್ಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್ಸಿಆರ್) ದಾಖಲಾಗಿದೆ.
ಬೆಂಗಳೂರು [ಮಾ.03]: ವಂಚನೆ ಹಾಗೂ ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಹಾಗೂ ಇತರರ ವಿರುದ್ಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್ಸಿಆರ್) ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎನ್ಸಿಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹತ್ತು ವರ್ಷಗಳ ಹಿಂದೆ ನಾನು ಹಾಗೂ ಮುತ್ತಪ್ಪ ರೈ ಅವರು ಒಟ್ಟಿಗೆ ಬಂಟ್ವಾಳದಲ್ಲಿ 17.5 ಎಕರೆ ಜಮೀನು ಖರೀದಿಸಿ ನಿವೇಶನಗಳಾಗಿ ಪರಿವರ್ತಿಸಿದ್ದೆವು.
30 ವರ್ಷ ಜೊತೆಯಲ್ಲಿದ್ದ ಆಪ್ತನನ್ನೇ ಕೊಲ್ಲೋಕೆ ನೋಡಿದ್ರಾ ಮುತ್ತಪ್ಪ ರೈ..?.
180 ನಿವೇಶನಗಳ ಪೈಕಿ ಸುಮಾರು 70 ನಿವೇಶನಗಳು ಮಾರಾಟವಾಗಿದೆ. ನಿವೇಶನ ಮಾರಾಟ ಮಾಡಿದ ಹಣ ಕೊಡದೆ ಮುತ್ತಪ್ಪ ರೈ ಅವರು ವಂಚಿಸಿದ್ದಾರೆ. ಹಣ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಿಸಿಬಿಗೆ ದೂರು ನೀಡಿದ್ದರು.
ಸಿಸಿಬಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಮಗೆ ಅಧಿಕಾರವಿಲ್ಲ ಎಂದು ಪ್ರಕರಣವನ್ನು ಸದಾಶಿವನಗರ ಠಾಣೆಗೆ ಕಳುಹಿಸಿದ್ದರು. ಅದರ ಅನ್ವಯ ಮುತ್ತಪ್ಪ ರೈ ಹಾಗೂ ಇತರರ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ ದಾಖಲಿಸಿಕೊಂಡಿದ್ದಾರೆ.