*   ರದ್ದುಪಡಿಸಲಾದ ವಿಮಾನ ಸಂಚಾರವನ್ನು ಅ.7ಕ್ಕೆ ನಿಗದಿ*   ಮಸ್ಕತ್‌ನಲ್ಲಿ ಸೈಕ್ಲೋನ್‌ ಹಿನ್ನೆಲೆಯಲ್ಲಿ ವಿಮಾನ ಹಾರಾಟ ವಿಳಂಬ*   ಏರ್‌ ಇಂಡಿಯಾಕ್ಕೆ ಹಿಡಿಶಾಪ ಹಾಕುತ್ತಲೇ ಮನೆಗೆ ವಾಪಸಾದ ಪ್ರಯಾಣಿಕರು 

ಮಂಗಳೂರು(ಅ.04): ಮಸ್ಕತ್‌ನಲ್ಲಿ ಚಂಡಮಾರುತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು(Mangaluru) ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಮಸ್ಕತ್‌ಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನವನ್ನು ರದ್ದುಪಡಿಸಲಾಗಿದೆ.

ರದ್ದುಪಡಿಸಲಾದ ವಿಮಾನ ಸಂಚಾರವನ್ನು ಅ.7ಕ್ಕೆ ನಿಗದಿಗೊಳಿಸಲಾಗಿದೆ. ವಿಮಾನ(Flight) ಹತ್ತಲು ಏರ್‌ಪೋರ್ಟ್‌ಗೆ ತೆರಳಿದ್ದ 100ಕ್ಕೂ ಅಧಿಕ ಪ್ರಯಾಣಿಕರನ್ನು ಸಂಜೆಯವರೆಗೂ ಯಾವುದೇ ಸೌಲಭ್ಯ ಕಲ್ಪಿಸದೆ ಅಲ್ಲೇ ಕಾಯಿಸಿದ್ದರಿಂದ ಏರ್‌ ಇಂಡಿಯಾ ವಿರುದ್ಧ ಪ್ರಯಾಣಿಕರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.

ಖಾಲಿ ಫ್ಲೈಟ್‌ನಲ್ಲಿ ಟಚ್ ಇಟ್ ಸಾಂಗ್‌ಗೆ ಗಗನ ಸಖಿ ಡ್ಯಾನ್ಸ್

ಭಾನುವಾರ ಬೆಳಗ್ಗೆ ಮಸ್ಕತ್‌ಗೆ(Muscat) ತೆರಳಲು ಟಿಕೆಟ್‌ ಕಾಯ್ದಿರಿಸಿದ್ದ 100ಕ್ಕೂ ಅಧಿಕ ಪ್ರಯಾಣಿಕರು ಏರ್‌ಪೋರ್ಟ್‌ಗೆ(Airport) ಆಗಮಿಸಿದ್ದರು. ಆದರೆ ಮಸ್ಕತ್‌ನಲ್ಲಿ ಸೈಕ್ಲೋನ್‌(Cyclone) ಹಿನ್ನೆಲೆಯಲ್ಲಿ ವಿಮಾನ ಹಾರಾಟವನ್ನು ವಿಳಂಬಗೊಳಿಸಲಾಯಿತು. ಬೆಳಗ್ಗಿನಿಂದ ಸಂಜೆಯವರೆಗೂ ವಿಮಾನ ವಿಳಂಬಗೊಳಿಸುತ್ತಲೇ ಇದ್ದುದರಿಂದ ಕಾದು ಸುಸ್ತಾದ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಯಾಣಿಕರಿಗೆ ಬೇಕಾದ ಕನಿಷ್ಠ ವ್ಯವಸ್ಥೆಯನ್ನೂ ಮಾಡದಿರುವುದೂ ಆಕ್ರೋಶಕ್ಕೆ ಮತ್ತೊಂದು ಕಾರಣವಾಗಿತ್ತು.

ಸಂಜೆ ವೇಳೆಗೆ, ಸೈಕ್ಲೋನ್‌ ಹಿನ್ನೆಲೆಯಲ್ಲಿ ವಿಮಾನ ರದ್ದುಗೊಳಿಸಿದ್ದನ್ನು ಏರ್‌ ಇಂಡಿಯಾ ಪ್ರಕಟಿಸಿತು. ಮಾತ್ರವಲ್ಲದೆ, ಮುಂದಿನ ವಿಮಾನ ಸಂಚಾರವನ್ನು ಅ.7ಕ್ಕೆ ನಿಗದಿಗೊಳಿಸಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು. ಬೆಳಗ್ಗಿನಿಂದ ಸಂಜೆವರೆಗೆ ಕಾದು ಸುಸ್ತಾದ ಪ್ರಯಾಣಿಕರು ಏರ್‌ ಇಂಡಿಯಾಕ್ಕೆ ಹಿಡಿಶಾಪ ಹಾಕುತ್ತಲೇ ಮನೆಗೆ ವಾಪಸಾದರು.