ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಧನ್ಯವಾದಗಳನ್ನು ತಿಳಿಸಿದ ಕೇಂದ್ರ ಸಚಿವ ಭಗವಂತ ಖೂಬಾ 

ಬೀದರ್‌(ಡಿ.24): ಬೀದರ್‌ ಲೋಕಸಭಾ ಕ್ಷೇತ್ರದ 4 ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 1576.30 ಕೋಟಿ ರು. ಮೊತ್ತದ ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಹಾಗೂ ಈ 4 ನೀರಾವರಿ ಯೋಜನೆಗಳಿಗೆ ಟೆಂಡರ್‌ ಕರೆಯಲು ಸಹ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತು ಪ್ರಕಟಣೆ ನೀಡಿ, ಜಿಲ್ಲೆಯ ಔರಾದ ತಾಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಔರಾದ ತಾಲೂಕಿನ ಬಳತ (ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್‌ ಮೇಲ್ಬಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿ.ಎಂ.ಸಿ ನೀರನ್ನೆತ್ತಿ ಒಟ್ಟು 36 ಕೆರೆಗಳನ್ನು ತುಂಬಿಸಲು 560.70 ಕೋಟಿ ರು.ಮೊತ್ತ ಮತ್ತು ಮೇಹಕರ್‌ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಭಾಲ್ಕಿ ತಾಲೂಕಿನ ಜೀರಗ್ಯಾಳ ಬ್ಯಾರೇಜ್‌ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿ.ಎಂ.ಸಿ ನೀರನ್ನೆತ್ತಿ 12 ಗ್ರಾಮಗಳ ಸುಮಾರು 10,000 ಹೆ. ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 762 ಕೋಟಿ ಮೊತ್ತದ ಮೆಹಕರ್‌ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿಗಳಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. 

ಬಿಜೆಪಿಗರಿಗೆ ರಾಜ್ಯ ಸರ್ಕಾರದಿಂದಲೇ ಛೀಮಾರಿ: ಈಶ್ವರ ಖಂಡ್ರೆ

ಆಳಂದ ತಾಲೂಕಿನ ವ್ಯಾಪ್ತಿಯ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಭೋರಿ ನದಿಯಿಂದ ಆಳಂದ ತಾಲೂಕಿನ 08 ಕೆರಗಳಿಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸಲು 49.50 ಕೋಟಿ ರು. ಮೊತ್ತ ಮತ್ತು ಐನಾಪುರ ಏತ ನೀರಾವರಿ ಯೋಜನೆಯಡಿ ಐನಾಪುರ ಮತ್ತು ಇತರೆ 17 ಗ್ರಾಮಗಳ ಸುಮಾರು 3,710 ಹೆ. ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಐನಾಪೂರ ಏತ ನೀರಾವರಿ ಯೋಜನೆಯ 204.10 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಬೀದರ್‌ ನಗರದ ಚಿಕಪೇಟ್‌ ರಿಂಗ್‌ ರೋಡ್‌ನಿಂದ ನೌಬಾದವರೆಗಿನ ಔಟರ್‌ ರಿಂಗ್‌ರೋಡವರೆಗೆ 2.65 ಕಿ.ಮೀವರೆಗಿನ ಕಾಮಗಾರಿಯನ್ನು ಪೂರ್ಣಗೊಳಿಸಲು 15 ಕೋಟಿ 49 ಲಕ್ಷದ ರು. ಕಾಮಗಾರಿಗೂ ಸಹ ಇಂದಿನ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ, ಈ ಕಾಮಗಾರಿಗೂ ಸಹ ಟೆಂಡರ ಕರೆಯಲು ಸರ್ಕಾರ ಸೂಚಿಸಿರುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತು ನೀಡಿ, ನಮ್ಮ ಭಾಗದ ಎಲ್ಲಾ ಯೋಜನೆಗಳಿಗೆ ಸ್ಪಂದಿಸಿ, ಅನುದಾನ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಸಚಿವ ಖೂಬಾ ಧನ್ಯವಾದಗಳನ್ನು ತಿಳಿಸಿದ್ದಾರೆ.