ಮೈಸೂರಿನಲ್ಲಿ ಕೊಂಚ ಮಟ್ಟಿಗೆ ಸುಧಾರಿಸಿದ ಜನಜೀವನ ಬಸ್‌ಗಳ ಸಂಚಾರ ಅಲ್ಲಲ್ಲಿ ಆರಂಭ ಅಗತ್ಯ ವಸ್ತುಗಳ ಮಾರಾಟ ವೇಳೆಯನ್ನು ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಣೆ

ಪಿರಿಯಾಪಟ್ಟಣ (ಜೂ.29): ಲಾಕ್‌ಡೌನ್‌ ಸಡಿಲಿಕೆಯ ಮೊದಲ ದಿನ ಸೋಮವಾರದಂದು ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಜನಜೀವನ ಕೊಂಚಮಟ್ಟಿಗೆ ಸುಧಾರಿಸಿದೆ.

ಅಗತ್ಯ ವಸ್ತುಗಳ ಮಾರಾಟ ವೇಳೆಯನ್ನು ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಿದ್ದರಿಂದ ವ್ಯಾಪಾರ ವಹಿವಾಟು ಸಹ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ, ಕಳೆದ 2 ತಿಂಗಳಿನಿಂದಲೂ ಲಾಕ್‌ಡೌನ್‌ ಹಿನ್ನೆಲೆ ಮನೆಯಿಂದ ಹೊರಬರದಿದ್ದ ಜನ ಸೋಮವಾರದಂದು ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು.

ಕರ್ನಾಟಕದಲ್ಲಿ ಕೊರೋನಾ ರಿಲೀಫ್: 3 ಸಾವಿರಕ್ಕಿಂತ ಕಡಿಮೆ ಕೇಸ್!

ಪಟ್ಟಣದ ಸಾರಿಗೆ ಘಟಕದಲ್ಲಿ ಬಸ್‌ ಗಳಿಗೆ ಪೂಜೆ ಸಲ್ಲಿಸಿ ಕೆಲ ಮಾರ್ಗಗಳ ಕಾರ್ಯಾಚರಣೆ ಮಾಡಲಾಯಿತು, ಕಳೆದ 2 ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಪಟ್ಟಣದ ಬಸ್‌ ನಿಲ್ದಾಣ ಸೋಮವಾರದಂದು ಬಸ್‌ ಸಂಚಾರ ಆರಂಭವಾದ ಹಿನ್ನೆಲೆ ಪ್ರಯಾಣಿಕರು ಓಡಾಟ ನಡೆಸಿದರು. ಮುಚ್ಚಿದ್ದ ಬಸ್‌ ನಿಲ್ದಾಣದಲ್ಲಿನ ಮಳಿಗೆಗಳು ಸ್ವಚ್ಛತಾ ಕಾರ್ಯ ಕೈಗೊಂಡು ತೆರೆದವು, ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್‌ ರಾಮಚಂದ್‌ ಬಸ್‌ ನಿಲ್ದಾಣದಲ್ಲಿಯೇ ಇದ್ದು ಪ್ರಯಾಣಿಕರ ಓಡಾಟಕ್ಕೆ ಅಗತ್ಯಾನುಸಾರವಾಗಿ ಮಾರ್ಗಗಳ ಕಾರ್ಯಾಚರಣೆ ನಡೆಸಿದರು.

ಸೋಮವಾರದಂದು ಮೈಸೂರಿಗೆ 9, ಬೆಂಗಳೂರಿಗೆ 3 ಹಾಗೂ ಬೆಟ್ಟದಪುರ ಮಾರ್ಗವಾಗಿ 3 ಬಸ್‌ ಗಳು ಸಂಚಾರ ನಡೆಸಿದವು. 

ಪ್ರಯಾಣಿಕರ ಓಡಾಟಕ್ಕೆ ಅನುಕೂಲಕ್ಕೆ ತಕ್ಕಂತೆ ಮೆಲಧಿಕಾರಿಗಳ ಸೂಚನೆಯಂತೆ ವಾಹನಗಳ ಕಾರ್ಯಾಚರಣೆ ನಡೆಸುವುದಾಗಿ ಘಟಕ ವ್ಯವಸ್ಥಾಪಕರು ತಿಳಿಸಿ ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೋರಿದರು. ಈ ಸಂದರ್ಭ ಸಾರಿಗೆ ಸಿಬ್ಬಂದಿ ಮೇಲ್ವಿಚಾರಕ ಸುಬ್ರಹ್ಮಣ್ಯ, ಸಂಚಾರ ನಿಯಂತ್ರಕ ರವಿಕುಮಾರ್‌, ಚಾಲಕ ನಿರ್ವಾಹಕರು ಇದ್ದರು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona