ಗ್ರಾಪಂ ಮಟ್ಟದಲ್ಲಿಯೆ ಮಕ್ಕಳ ಆಯವ್ಯಯ ಮಂಡನೆಗೆ ರಾಜ್ಯ ಸರ್ಕಾರ ಆದೇಶ ಮಕ್ಕಳ ಆಯವ್ಯಯ ಗ್ರಾಮ ಸಭೆಗಳಲ್ಲಿ ಮಂಡಿಸಿ ನಿಗದಿತ ಕಾಲಾವಧಿಯಲ್ಲಿ ಅನುಷ್ಟಾನ

 ಚಿಕ್ಕಬಳ್ಳಾಪುರ (ಆ.02): ರಾಜ್ಯದ ಗ್ರಾಪಂಗಳಲ್ಲಿ ಇನ್ಮೇಲೆ ಮಕ್ಕಳ ಸಮಗ್ರ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಗ್ರಾಪಂ ಮಟ್ಟದಲ್ಲಿಯೆ ಮಕ್ಕಳ ಆಯವ್ಯಯ ಮಂಡನೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು ಮಕ್ಕಳ ಆಯವ್ಯಯ ಗ್ರಾಮ ಸಭೆಗಳಲ್ಲಿ ಮಂಡಿಸಿ ನಿಗದಿತ ಕಾಲಾವಧಿಯಲ್ಲಿ ಅನುಷ್ಟಾನಗೊಳಿಸುವ ಜವಾಬ್ದಾರಿ ಗ್ರಾಪಂಗಳ ಮೇಲಿದೆ.

Add Asianetnews Kannada as a Preferred SourcegooglePreferred

ಹೌದು, ರಾಜ್ಯದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ತಡೆಯುವಿಕೆ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಸೇರಿದಂತೆ ಆದ್ಯತಾ ಕ್ಷೇತ್ರಗಳಾದ ಗುಣಾತ್ಮಕ ಶಿಕ್ಷಣ, ಶಾಲಾ ಭೌತಿಕ ಸೌಲಭ್ಯಗಳು, ಮಕ್ಕಳ ಸಂರಕ್ಷಣೆ, ಕ್ರೀಡಾ ಹಾಗೂ ದೈಹಿಕ ಚಟುವಟಿಕೆಗಳ ಉತ್ತೇಜನ ಹಾಗೂ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಉದ್ದೇಶವನ್ನು ಮಕ್ಕಳ ಆಯವ್ಯಯವು ಹೊಂದಿದೆ.

ಮಕ್ಕಳಲ್ಲಿ ತೂಕ ಹೀನತೆ ಸಮಸ್ಯೆ

ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ನೀಡಿರುವ ಅಂಕಿ, ಅಂಶಗಳ ಪ್ರಕಾರ ಕರ್ನಾಟದಲ್ಲಿ 5 ವರ್ಷದೊಳಗಿನ ಪ್ರತಿಶತ 35.2 ಮಕ್ಕಳು ತೂಕ ಹೀನತೆಯಿಂದ ಬಳಲುತ್ತಿದ್ದಾರೆಂಬ ಅಘಾತಕಾರಿ ಅಂಶ ನೀಡಿದೆ. ಅಲ್ಲದೇ ಆರೋಗ್ಯ ಇಲಾಖೆ ಸಮೀಕ್ಷೆ ಪ್ರಕಾರ 5 ವರ್ಷದೊಳಗಿನ ಮಕ್ಕಳ ಕುಂಠಿತ ಬೆಳವಣಿಗೆ ಪ್ರಮಾಣ ಪ್ರತಿಶತ 36 ರಷ್ಟಿದೆ.

ಲಸಿಕೆ ಹಾಕಿಸಿದ್ರೆ ಮಕ್ಕಳನ್ನು ಶಾಲೆಗೆ ಕಳಿಸಲು ಶೇ.48ರಷ್ಟು ಪೋಷಕರು ರೆಡಿ

ಈ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಪಂಚಾಯತ್‌ ರಾಜ್‌ ಇಲಾಖೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸ್ಥಳೀಯ ಸಂಪನ್ನೂಲಗಳನ್ನು ಬಳಸಿಕೊಂಡು ವಿಶೇಷವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಅಂಗನವಾಡಿ, ನರೇಗಾ, 15ನೇ ಹಣಕಾಸು ಯೋಜನೆ ನಿಧಿಯನ್ನು ಮಕ್ಕಳ ಅಯವ್ಯಯ ತಯಾರಿಸಲು ಗ್ರಾಪಂಗಳಿಗೆ ಸೂಚಿಸಲಾಗಿದೆ.

ಶಾಲೆಗಳಿಗೆ ಸೌಲಭ್ಯ:

ಮಕ್ಕಳ ಅಭಿವೃದ್ಧಿಗೆ ಪೂರಕವಾಗಿ ಅದರಲ್ಲೂ ಶಿಕ್ಷಣ, ಕ್ರೀಡೆ, ಆರೋಗ್ಯ, ಗ್ರಂಥಾಲಯ, ಪ್ರಯೋಗಾಲುಯ, ಶಾಲೆಗಳಿಗೆ ಮೂಲ ಸೌಕರ್ಯಗಳಾದ ಶೌಚಾಲಯ, ಆಟದ ಮೈದಾನ, ಉದ್ಯಾನವನಗಳ ನಿರ್ಮಾಣ, ಅಡುಗೆ ಕೊಣೆ, ಅಗತ್ಯ ಅನುದಾನ ಬೇಕಾದಲ್ಲಿ ಸರ್ಕಾರಕ್ಕೆ ಅಥವ ಜಿಪಂ ತಾಪಂಗಳ ಮೂಲಕ ಪ್ರಸ್ತಾವನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆದೇಶದಲ್ಲಿ ಏನಿದೆ?:

ಈಗಾಗಲೇ ಮಕ್ಕಳ ಸ್ನೇಹಿ ಗ್ರಾಪಂಗಳನಡಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಹೆಚ್ಚಿಸಲು ಗ್ರಾಮ ಪಂಚಾಯತ್‌ ಶಿಕ್ಷಣ ಕಾರ್ಯಪಡೆ ಮೂಲಕ ಪಂಚಾಯಿತಿ ವ್ಯಾಪಿಯಲ್ಲಿ ಬರುವ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನೊಳಗೊಂಡಂತೆ ಮಕ್ಕಳ ಆಯವ್ಯಯ ತಯಾರಿಸಬೇಕು. ಬಳಿಕ ಅದನ್ನು ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಿದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಮಹಾದೇವನ್‌ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.