ರಾತ್ರಿ ಬಿದ್ದ ಭಾರೀ ಮಳೆಗೆ ವಿಶ್ವೇಶ್ವರಯ್ಯ ನಾಲೆಯಿಂದ ಅಧಿಕ ಪ್ರಮಾಣದ ನೀರು ಹರಿದು ಸೇತುವೆಯೊಂದು ಕೊಚ್ಚಿಹೋಗಿದೆ. ಇದರಿಂದ ಗಂಟಗೌಡನಹಳ್ಳಿ ಹಾಗೂ ಗುಡಿಗೇನಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಂಡ್ಯ (ಆ.28): ರಾತ್ರಿ ಬಿದ್ದ ಭಾರೀ ಮಳೆಗೆ ವಿಶ್ವೇಶ್ವರಯ್ಯ ನಾಲೆಯಿಂದ ಅಧಿಕ ಪ್ರಮಾಣದ ನೀರು ಹರಿದು ಸೇತುವೆಯೊಂದು ಕೊಚ್ಚಿಹೋಗಿದೆ. ಇದರಿಂದ ಗಂಟಗೌಡನಹಳ್ಳಿ ಹಾಗೂ ಗುಡಿಗೇನಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿಂದ ಹರಿದ ನೀರು ಸುಮಾರು 200 ಎಕರೆ ಪ್ರದೇಶದ ಜಮೀನಿಗೆ ನುಗ್ಗಿ ಜಲಾವೃತಗೊಂಡಿದೆ. ನೀರಿನೊಂದಿಗೆ ಮರಳು, ಕಲ್ಲಿನ ರಾಶಿ ಜಮೀನುಗಳಲ್ಲಿ ತುಂಬಿಕೊಂಡಿದೆ. ಉತ್ತಮ ಮಳೆಯಿಂದ ಈ ಭಾಗದ ಸುಮಾರು ಶೇ.70ರಷ್ಟು ರೈತರು ಜಮೀನುಗಳಲ್ಲಿ ನಾಟಿ ಕಾರ್ಯ ಮುಗಿಸಿದ್ದು, ಶೇ.30ರಷ್ಟು ಪ್ರದೇಶದಲ್ಲಿ ಬಾಕಿ ಇತ್ತು. ಇದೀಗ ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ.

Add Asianetnews Kannada as a Preferred SourcegooglePreferred

ಜಮೀನುಗಳಲ್ಲಿ ನೆಟ್ಟಿದ್ದ ತೆಂಗಿನ ಸಸಿಗಳು, ಬದುಗಳಲ್ಲಿ ಹಾಕಿದ್ದ ಹೊಂಗೆ ಮರಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಏಳು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಹೆಚ್ಚುವರಿ ನೀರು ಮಾಯಪ್ಪನಹಳ್ಳಿ ಕೆರೆಗೆ ಹರಿದುಬಂದಿದ್ದರಿಂದ ಏರಿ ಹೊಡೆದು ಕೆರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಕೆರೆ ಒಡೆದು ನೀರು ಹರಿದಿದ್ದರಿಂದ ಮಾಯಪ್ಪನ ಹಳ್ಳಿಯಿಂದ ಮಂಡ್ಯ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಅಸ್ತವ್ಯಸ್ತಗೊಂಡಿದೆ. ಇದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ದ್ಯಾಪಸಂದ್ರ-ಮಂಡ್ಯ ಸಂಪರ್ಕಿಸುವ ರಸ್ತೆ ಕಡಿತಗೊಂಡಿದೆ. ಮಳೆಯಿಂದಾಗಿ ಎರಡು ಮನೆಗಳು ಕುಸಿತಗೊಂಡಿದ್ದು, ತೀವ್ರ ಹಾನಿ ಸಂಭವಿಸಿದೆ.

ಮಳವಳ್ಳಿ ಡಯಾಗ್ನೋಸ್ಟಿಕ್‌ ಸೆಂಟರ್‌ಗೆ ಬೀಗ, ಗರ್ಭಿಣಿಯಿಂದ 50 ಸಾವಿರ ಹಣ ಪಡೆದು ಲಿಂಗ ಪತ್ತೆ!

ಶಾಸಕರ ಭೇಟಿ, ಪರಿಶೀಲನೆ: ಜ್ಯೋತಿಗೌಡನಪುರದ ಕಥಾನಾಯಕನಕೆರೆ ಕೋಡಿಬಿದ್ದ ಹಿನ್ನೆಲೆ ಶಾಸಕ ಸಿ.ಪುಟ್ಟರಂಗಶೆಟ್ಟಿಅಧಿಕಾರಿಗಳ ಜತೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಮಾತನಾಡಿ, ಸತತ ಮಳೆಯ ಪರಿಣಾಮ ಈ ಭಾಗದ ಕಥಾನಾಯಕನ ಕೋಡಿಬಿದ್ದಿದೆ. ಒಂದೆಡೆ ಸಂತಸದ ವಿಚಾರ, ಮತ್ತೊಂದೆಡೆ ಕೆರೆಯ ನೀರು ಜಮೀನಿಗೆ ನುಗ್ಗಿ. ರೈತರು ಬೆಳೆದ ಅರಿಶಿಣ, ಬಾಳೆ, ಮುಸುಕಿನಜೋಳ ಬೆಳೆಗಳು ಹಾಳಾಗಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟಸಂಭವಿಸಿದೆ. ಮಳೆಯಿಂದ ಅಕ್ಕಪಕ್ಕದ ಸೇತುವೆ ಮುಳುಗಡೆಯಾಗಿವೆ. 

ಸರ್ಕಾರ ಬೆಳೆಹಾನಿಗೆ ಕೇವಲ 10ಸಾವಿರ ಪರಿಹಾರ ವಿತರಣೆ ಮಾಡಿದೆ, ಈ ಪರಿಹಾರ ಸಾಲದು. ಸರ್ಕಾರ ಪರಿಹಾರದ ಮೊತ್ತ ಹೆಚ್ಚಿಸಬೇಕು, ನಷ್ಟದ ಅಂದಾಜು ಪರಿಶೀಲಿಸಿ ಸೂಕ್ತ ಪರಿಹಾರ ಕೊಡಿಸಲು ಅ​ಧಿಕಾರಿಗಳು ಮುಂದಾಗಬೇಕೆಂದು ಸೂಚಿಸಿದರು.ಇದೇ ವೇಳೆ ಶಾಸಕರು ಕೆರೆಕೋಡಿಬಿದ್ದ ಸ್ಥಳ ಜತೆಗೆ ಕುಂಟಗುಡಿ, ಹೊಂಡರಬಾಳು ಬಳಿಯ ಶಿಥಿಲಾವಸ್ಥೆ ಸೇತುವೆ, ಜ್ಯೋತಿಗೌಡನಪುರ ಸಮೀಪದ ಸಿಲ್ವಾರ್‌ಕಟ್ಟೆ ಪರಿಶೀಲಿಸಿದರು. ತಹಸೀಲ್ದಾರ್‌ ಬಸವರಾಜು, ರಾಜಸ್ವನಿರೀಕ್ಷಕರು, ಗ್ರಾಮಲೆಕ್ಕಿಗರು, ನಾಗವಳ್ಳಿನಾಗಯ್ಯ, ಮಹದೇವಸ್ವಾಮಿ, ಮಹದೇವಯ್ಯ, ರಮೇಶ್‌ ಸ್ವಾಮಿ ಮಹೇಶ್‌ ಇದ್ದರು.

ಅಕ್ರಮಗಳ ಸರದಾರ ಕೆಂಪಣ್ಣ: ಮಂಡ್ಯ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

ಬಿರುಸಿನ ಮಳೆಯಿಂದಾಗಿ ವಿಶ್ವೇಶ್ವರಯ್ಯ ನಾಲೆಯಿಂದ ನುಗ್ಗಿದ ಹೆಚ್ಚುವರಿ ನೀರು ಭಾರೀ ಅವಾಂತರ ಸೃಷ್ಟಿಸಿದೆ. ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಜಮೀನುಗಳಲ್ಲಿ ನಾಟಿ ಮಾಡಿದ್ದ ಭತ್ತದ ಪೈರುಗಳು ಕೊಚ್ಚಿಹೋಗಿ, ಕಲ್ಲು-ಮಣ್ಣು ತುಂಬಿಕೊಂಡಿದೆ. 200ಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತಗೊಂಡಿದೆ.
- ಸ್ವಾಮಿಗೌಡ, ಗುಡಿಗೇನಹಳ್ಳಿ