'ಪೊಗರು ಚಿತ್ರದಲ್ಲಿ ಬ್ರಾಹ್ಮಣ ವಿರೋಧಿ ದೃಶ್ಯ ತೆಗೆಯದಿದ್ದರೆ ಹೋರಾಟ'
ಹಿಂದೂ ಧರ್ಮ, ಆಚರಣೆಗೆ ಧಕ್ಕೆ ಬರುವಂತಹ ದೃಶ್ಯ ಚಿತ್ರೀಕರಣ| ಪ್ರತಿಬಾರಿಯೂ ಹಿಂದೂ ಧರ್ಮದ ಮೇಲೆ ಈ ರೀತಿ ಅವಹೇಳನ| ಕ್ರೈಸ್ತ, ಮುಸ್ಲಿಂ ಧರ್ಮದ ವಿರುದ್ಧ ಈ ರೀತಿ ಬೆಳವಣಿಗೆ ನಡೆದಿದ್ದರೆ ಇಷ್ಟೊತ್ತಿಗೆ ಅಲ್ಲೋಲ-ಕಲ್ಲೋಲ| ಧರ್ಮಕ್ಕೆ ಅಪಮಾನ ಮಾಡುವಂತಹ ಎಲ್ಲ ದೃಶ್ಯ ಕತ್ತರಿಸಬೇಕಲ್ಲದೆ, ನಿರ್ದೇಶಕರು, ನಾಯಕ ಸಾರ್ವಜನಿಕವಾಗಿ ಕ್ಷಮೆ ಕೋರಲು ಆಗ್ರಹ|
ಧಾರವಾಡ(ಫೆ.24): ಪೊಗರು ಚಿತ್ರದಲ್ಲಿ ಸನಾತನ ಹಿಂದೂ ಧರ್ಮ ಅದರಲ್ಲೂ ಬ್ರಾಹ್ಮಣ ಸಮಾಜ, ಸಂಸ್ಕೃತಿಯನ್ನು ಅವಮಾನಿಸುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಈ ದೃಶ್ಯಗಳನ್ನು ಬುಧವಾರ ಸಂಜೆಯೊಳಗೆ ತೆಗೆದು ಹಾಕಬೇಕು. ಇಲ್ಲವಾದಲ್ಲಿ ಚಿತ್ರದ ವಿರುದ್ಧ ಗುರುವಾರ ಬೃಹತ್ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಎಚ್ಚರಿಸಿದ್ದಾರೆ.
"
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮ, ಆಚರಣೆಗೆ ಧಕ್ಕೆ ಬರುವಂತಹ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಪ್ರತಿಬಾರಿಯೂ ಹಿಂದೂ ಧರ್ಮದ ಮೇಲೆ ಈ ರೀತಿ ಅವಹೇಳನ ನಡೆಯುತ್ತಿದೆ. ಕ್ರೈಸ್ತ, ಮುಸ್ಲಿಂ ಧರ್ಮದ ವಿರುದ್ಧ ಈ ರೀತಿ ಬೆಳವಣಿಗೆ ನಡೆದಿದ್ದರೆ ಇಷ್ಟೊತ್ತಿಗೆ ಅಲ್ಲೋಲ-ಕಲ್ಲೋಲವೇ ನಡೆಯುತ್ತಿತ್ತು. ಒಂದು ಧರ್ಮಕ್ಕೆ ಅಪಮಾನವಾಗುವಂತೆ ಚಿತ್ರೀಕರಣ ಮಾಡಿದ್ದು ಖಂಡನೀಯ. ನಿರ್ದೇಶಕರು ವೀಡಿಯೋ ಮೂಲಕ ಕ್ಷಮೆ ಕೋರಿದರೆ ಸಾಲದು. ಧರ್ಮಕ್ಕೆ ಅಪಮಾನ ಮಾಡುವಂತಹ ಎಲ್ಲ ದೃಶ್ಯಗಳನ್ನು ಕತ್ತರಿಸಬೇಕಲ್ಲದೆ, ನಿರ್ದೇಶಕರು, ನಾಯಕ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಪೊಗರು ವಿರುದ್ಧ ಸಚಿವ ಶಿವರಾಮ ಹೆಬ್ಬಾರ್ ಕಿಡಿ
ಏನು ಮಾಡುತ್ತಿದೆ ಸೆನ್ಸಾರ್?
ಅವಹೇಳನಕಾರಿ ದೃಶ್ಯಗಳಿದ್ದರೂ ಸೆನ್ಸಾರ್ ಮಂಡಳಿ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಖೇದಕರ ಸಂಗತಿ. ಕೂಡಲೇ ಈ ದೃಶ್ಯಾವಳಿಗಳನ್ನು ಕತ್ತರಿಸಬೇಕು. ಇಲ್ಲವಾದಲ್ಲಿ ಹೋರಾಟದ ಜತೆಗೆ, ಈ ಚಿತ್ರವನ್ನು ಸಂಪೂರ್ಣ ಬಂದ್ ಮಾಡಿಸುವಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ಜಯತೀರ್ಥ ಮಳಗಿ ಮಾತನಾಡಿ, ಬ್ರಾಹ್ಮಣ ಸೇರಿದಂತೆ ಪುರೋಹಿತ ಶಾಹಿ ಸಮುದಾಯಗಳು ಸುಮ್ಮನಿರುತ್ತವೆ ಎಂಬ ಕಾರಣಕ್ಕೆ ಪ್ರತಿ ಸಿನಿಮಾದಲ್ಲಿ ಧರ್ಮಗಳ ಆಚರಣೆ ಅವಮಾನಿಸಲಾಗುತ್ತಿದೆ. ಇದು ದುರ್ದೈವದ ಸಂಗತಿ. ನಮಗೆ ಶಾಸ್ತ್ರ ಹೇಳುವುದೂ ಗೊತ್ತು. ಶಸ್ತ್ರ ಹಿಡಿಯುವುದೂ ಗೊತ್ತು. ಇನ್ನು ಮುಂದಿನ ದಿನಗಳಲ್ಲಿ ನಿರ್ದೇಶಕರು ಇಂತಹ ದೃಶ್ಯಗಳನ್ನು ಚಿತ್ರೀಕರಿಸುವ ಪೂರ್ವದಲ್ಲಿ ಯೋಚನೆ ಮಾಡಬೇಕು. ಪೊಗರು ಚಿತ್ರದಲ್ಲಿನ ದೃಶ್ಯಗಳನ್ನು ಕೂಡಲೇ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು. ಸಮಾಜದ ವಿನಾಯಕ ಜೋಶಿ, ರಂಗಣ್ಣ ಕುಲಕರ್ಣಿ, ಆನಂದ ಕುಲಕರ್ಣಿ, ವಿದ್ಯಾ ಕದರಮಂಡಲಗಿ, ಬಾಸೂರಾನಂದ ಕುಲಕರ್ಣಿ ಇದ್ದರು.