2 ಲಕ್ಷ ಮತಗಳ ದಾಖಲೆ ಅಂತರದ ಮತಗಳಿಂದ ಗೆಲುವು ಬಿಜೆಪಿಗೆ ಒಲಿಯಲಿದೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಸುರೇಶ್ ಅಂಗಡಿ ಪತ್ನಿ ಮಂಗಲ ಅಂಗಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 

 ಬೆಳಗಾವಿ (ಮಾ.31): ದಿ.ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ತೆರವಾದ ಸ್ಥಾನಕ್ಕೆ ಅವರ ಪತ್ನಿಯನ್ನು ಕಣಕ್ಕಿಳಿಸಲಾಗಿದೆ. ಬೆಳಗಾವಿ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಪಕ್ಷ​​-ಜಾತಿ, ಬೇಧ-​ಭಾವ ಮರೆತು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ. 2 ಲಕ್ಷ ಮತಗಳ ದಾಖಲೆ ಅಂತರದ ಮತಗಳಿಂದ ಗೆಲುವು ನಮ್ಮದಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಗಾಂಧಿ ಭವನದಲ್ಲಿ ಮಂಗಳವಾರ ಚುನಾವಣಾ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದ ಅಭ್ಯರ್ಥಿಗಳೇ ಮಂಗಲ ಅಂಗಡಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ, ಗೆಲುವು ನಮ್ಮದೇ ಆಗಲಿದೆ ಎಂದರು.

ಯುವತಿ ಹೇಳಿಕೆ ನಂತರ ಸಿಎಂ ಯಡಿಯೂರಪ್ಪ ಕಾರ್ಯಕ್ರಮದಲ್ಲೂ ಬದಲಾವಣೆ

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಇಷ್ಟುಬೇಗ ನಮ್ಮನ್ನು ಅಗಲುತ್ತಾರೆ ಎಂದುಕೊಂಡಿರಲಿಲ್ಲ. ಅವರು ರೈಲ್ವೆ ಸಚಿವರಾಗಿ ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಹೊಸ ರೈಲ್ವೆ ಯೋಜನೆಗಳನ್ನು ರಾಜ್ಯಕ್ಕೆ ತಂದುಕೊಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಸುರೇಶ ಅಂಗಡಿ ಅವರ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಮತ ಕೇಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪಟ್ಟಿಕೊಟ್ರೆ 24 ತಾಸಲ್ಲಿ ನೆರೆ ಪರಿಹಾರ:

ನೆರೆ ಹಾವಳಿಯಿಂದ ಇಡೀ ರಾಜ್ಯ ತತ್ತರಿಸಿದ್ದ ವೇಳೆ ಸಾಕಷ್ಟುಅನುದಾನ ನೀಡಲಾಗಿದೆ. ಉಳಿದ ಪರಿಹಾರದ ಪಟ್ಟಿಮಾಡಿಕೊಡಿ, 24 ಗಂಟೆಗಳಲ್ಲಿ ಹಣ ನೀಡುತ್ತೇನೆ. ರಾಜ್ಯದ ಬೊಕ್ಕಸಕ್ಕೆ ಎಷ್ಟೇ ತೊಂದರೆಯಾದರೂ ಮನೆ ನಿರ್ಮಾಣ ಕಾರ್ಯ ಯಾವುದೇ ಕಾರಣದಿಂದ ಸ್ಥಗಿತವಾಗಬಾರದು ಎಂದರು.

ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌, ಕೇಂದ್ರ ಸಂಸದೀಯ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್‌, ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮೊದಲಾದವರು ಉಪಸ್ಥಿತರಿದ್ದರು.