ಬೆಳಗಾವಿ ಲೋಕಸಭಾ ಉಪಚುನಾವಣೆ| ಬಿಜೆಪಿ ಟಿಕೆಟ್‌ಗಾಗಿ ವೈದ್ಯರಿಂದಲೂ ದೆಹಲಿ ದಂಡಯಾತ್ರೆ| ಬಿ.ಎಲ್.ಸಂತೋಷ್ ಭೇಟಿಯಾದ ಬೆಳಗಾವಿಯ ವೈದ್ಯ ಡಾ.ಗಿರೀಶ್ ಸೋನವಾಲ್ಕರ್| ದೆಹಲಿಯಲ್ಲಿ ಬಿಜೆಪಿ ನಾಯಕರ ಭೇಟಿಯಾದ ಎಲುಬು ಕೀಲು ತಜ್ಞ ಡಾ.ರವಿ ಪಾಟೀಲ್‌| 

ಬೆಳಗಾವಿ(ಜ.30): ಸುರೇಶ್ ಅಂಗಡಿ ಅವರ ಅಕಾಲಿಕ ಮರಣದಿಂದಾಗಿ ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ದೆಹಲಿಯಲ್ಲಿ ಪರೇಡ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ರಾಜಕೀಯ ನಾಯಕರ ಸಂಬಂಧಿಗಳ ನಂತರ ವೈದ್ಯರಿಂದಲೂ ಟಿಕೆಟ್‌ಗಾಗಿ ಲಾಭಿ ಶುರುವಾಗಿದೆ. 

Add Asianetnews Kannada as a Preferred SourcegooglePreferred

ಬಿಜೆಪಿ ಟಿಕೆಟ್‌ಗಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರಾಗಿರುವ ಡಾ.ಗಿರೀಶ್ ಸೋನವಾಲ್ಕರ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ಡಾ.ಗಿರೀಶ್ ಸೋನವಾಲ್ಕರ್ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಬಿ.ಎಲ್‌.ಸಂತೋಷ್ ಸೇರಿ ಕೆಲ ನಾಯಕರ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಬೈಎಲೆಕ್ಷನ್‌: ಬಿಜೆಪಿ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ..!

ಮತ್ತೊಂದೆಡೆ ಬೆಳಗಾವಿ ನಗರದ ಎಲುಬು ಕೀಲು ತಜ್ಞ ಡಾ.ರವಿ ಪಾಟೀಲ್‌ ಅವರೂ ಕೂಡ ಟಿಕೆಟ್‌ಗಾಗಿ ಲಾಭಿ ಆರಂಭಿಸಿದ್ದಾರೆ. ಈಗಾಗಲೇ ಡಾ.ರವಿ ಪಾಟೀಲ್ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರ ಭೇಟಿಯಾಗಿ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣೆ ದಿನಾಂಕ ಘೋಷಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಏತನ್ಮಧ್ಯೆ ದಿ. ಸುರೇಶ್ ಅಂಗಡಿ ಅವರ ಸೊಸೆ ಹಾಗೂ ಸಚಿವ ಜಗದೀಶ್‌ ಶೆಟ್ಟರ್‌ ಅವರ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್‌ ಕೂಡ ಕ್ಷೇತ್ರದಲ್ಲಿ ಪ್ರದಕ್ಷಿಣೆ ಹಾಕುವ ಪರೋಕ್ಷವಾಗಿ ತಾವೂ ಕೂಡ ಟಿಕೆಟ್‌ ಆಕಾಂಕ್ಷಿ ಎಂದು ಹೇಳೀಕೊಂಡಿದ್ದಾರೆ. ಬೆಳಗುಂದಿ ಗ್ರಾಮದಲ್ಲಿ ಮಹಿಳಾ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್‌ ಭಾಗಿಯಾಗಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ನಾನಾ ಸರ್ಕಸ್ ನಡೆಯುತ್ತಿದೆ.