* ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಬೇಕು* ಕಾಂಗ್ರೆಸ್‌ ಮನೆಗೆ ಬೆಂಕಿ ಬಿದ್ದಿದೆ* ಚುನಾವಣೆಗೆ ಇನ್ನೂ 2 ವರ್ಷಗಳು ಇರುವಾಗಲೇ ಅಧಿಕಾರಕ್ಕಾಗಿ ಕಿತ್ತಾಟ ಶುರು

ಕೋಲಾರ(ಜು.17): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ ಸಿ.ಟಿ. ರವಿ ಆಯ್ತು, ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರು ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾದ ಕಾಯ್ದೆ ಅಲ್ಲ. ರಾಜ್ಯದ ಎಲ್ಲರಿಗೂ ನ್ಯಾಯ ಕೊಡುವ ಕಾಯ್ದೆ. ಇದನ್ನು ವಿರೋಧಿಸುವ ಶಾಸಕ ಜಮೀರ್‌ ಅಹಮದ್‌ ಒಬ್ಬ ಮತೀಯವಾದಿ. ಜಮೀರ್‌ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ ಅವರಿಗೆ ಚಿಕಿತ್ಸೆ ಅಗತ್ಯವಿದೆ ಎಂದು ಕಿಡಿಕಾರಿದರು.

ಜಮೀರ್‌ ಅಹ್ಮದ್‌ಗೆ ತಲೆ ಇಲ್ಲ ಹೀಗಾಗಿ ಏನೆನೋ ಮಾತನಾಡ್ತಾರೆ: ಮುತಾಲಿಕ್‌

ಕಾಂಗ್ರೆಸ್‌ಗೆ ನೆಲೆಯೇ ಇಲ್ಲ- ಈ ಮಧ್ಯೆ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಟೀಲ್‌ ರಾಜ್ಯದ ಕಾಂಗ್ರೆಸ್‌ ಮನೆಗೆ ಬೆಂಕಿ ಬಿದ್ದಿದೆ, ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳು ಇರುವಾಗಲೇ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದೆ. ಆದರೂ ಬೇರೆಯವರ ಬಗ್ಗೆ ಆ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಮೊದಲು ಅವರ ಮನೆಯನ್ನು ನೋಡಿಕೊಳ್ಳಲಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ. ಎಐಸಿಸಿಯಲ್ಲಿ ಅಧ್ಯಕ್ಷರಿಲ್ಲ. ರಾಜ್ಯದಲ್ಲಿ ಯುವ ಕಾಂಗ್ರೆಸ್‌ಗೆ ಇಬ್ಬರು ಅಧ್ಯಕ್ಷರಿದ್ದಾರೆ. ಪಕ್ಷದ ಪದಾಧಿಕಾರಿಗಳ ಆಯ್ಕೆಯಲ್ಲೂ ಲಾಭಿ ನಡೆಯುತ್ತದೆ ಎಂದು ಕಟೀಲ್‌ ವ್ಯಂಗ್ಯವಾಡಿದರು.