Asianet Suvarna News Asianet Suvarna News

ಹೊಸ ಸಾರಥಿಗೆ ಜೆಡಿ​ಎಸ್‌, ಬಿಜೆಪಿ ಹುಡು​ಕಾಟ!

ಜೆಡಿಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತ​ನ​ಗೊಂಡು ಬಿಜೆಪಿ ಅಧಿ​ಕಾ​ರಕ್ಕೆ ಬಂದ ನಂತರ ಪಕ್ಷ ಸಂಘ​ಟನೆಗೆ ಮುಂದಾ​ಗಿ​ರುವ ಜೆಡಿ​ಎಸ್‌ ಹಾಗೂ ಬಿಜೆಪಿ ರಾಮನಗರದಲ್ಲಿ ತಮ್ಮ ಪಕ್ಷ ಬಲಪಡಿಸಲು ಸತತ ಯತ್ನ ನಡೆಸುತ್ತಿವೆ. ಇದೀಗ ಹೊಸ ಸಾರಥಿಗಾಗಿ ಹುಡುಕಾಟ ನಡೆಸುತ್ತಿವೆ. 

BJP JDS Searching For President in Ramanagara
Author
Bengaluru, First Published Aug 24, 2019, 11:40 AM IST

ಎಂ. ಅ​ಫ್ರೋಜ್ ಖಾನ್‌

ರಾಮ​ನ​ಗರ [ಆ.24]:  ಜೆಡಿಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತ​ನ​ಗೊಂಡು ಬಿಜೆಪಿ ಅಧಿ​ಕಾ​ರಕ್ಕೆ ಬಂದ ನಂತರ ಪಕ್ಷ ಸಂಘ​ಟನೆಗೆ ಮುಂದಾ​ಗಿ​ರುವ ಜೆಡಿ​ಎಸ್‌ ಹಾಗೂ ಬಿಜೆಪಿ ವರಿ​ಷ್ಠರು ರಾಮ​ನ​ಗರ ಜಿಲ್ಲೆ​ಯಲ್ಲು ಹೊಸ ಸಾರ​ಥಿ​ಗ​ಳನ್ನು ನೇಮಕ ಮಾಡುವ ನಿಟ್ಟಿ​ನಲ್ಲಿ ಕಾರ್ಯ ​ಪ್ರ​ವೃತ್ತ​ರಾ​ಗಿ​ದ್ದಾರೆ.

ಜೆಡಿ​ಎಸ್‌ ಮತ್ತು ಕಾಂಗ್ರೆಸ್‌ ನ ಭದ್ರ​ಕೋ​ಟೆ​ಯಾ​ಗಿ​ರುವ ರಾಮ​ನ​ಗರ ಜಿಲ್ಲೆ​ಯಲ್ಲಿ ಎರಡು ಪಕ್ಷ​ಗ​ಳಿಗೂ ಪ್ರಬ​ಲ​ವಾಗಿ ಪೈಪೋಟಿ ನೀಡು​ವಂತೆ ಕಮಲ ಪಕ್ಷ​ವನ್ನು ಸುಭ​ದ್ರ​ವಾಗಿ ಕಟ್ಟುವ ತವಕ ಬಿಜೆಪಿ ವರಿ​ಷ್ಠ​ರ​ದ್ದಾ​ಗಿದೆ. ಹೀಗಾಗಿ ಪಕ್ಷ ಸಂಘ​ಟನೆ ಉದ್ದೇ​ಶ​ದಿಂದ ದಳ ಮತ್ತು ಕಮಲ ಪಕ್ಷ​ಗಳ ವರಿ​ಷ್ಠ​ರು ಹೊಸ ಜಿಲ್ಲಾ​ಧ್ಯ​ಕ್ಷ​ರನ್ನು ನೇಮಕ ಮಾಡಲು ನಿರ್ಧ​ರಿಸಿದ್ದಾರೆ.

ಚರ್ಚೆಗೆ ಗ್ರಾಸ:

ಜೆಡಿ​ಎಸ್‌ ಜಿಲ್ಲಾ​ಧ್ಯ​ಕ್ಷ​ ಸ್ಥಾನಕ್ಕೆ ಅಶೋಕ್‌ ಅವರು ರಾಜಿ​ನಾಮೆ ನೀಡಿ ಒಂದೂವರೆ ತಿಂಗಳು ಕಳೆ​ದಿದೆ. ರಾಜ್ಯದಲ್ಲಿ ತಮ್ಮ ಪಕ್ಷದವರೇ ಸಿಎಂ ಆಗಿರುವಾಗ ಅಶೋಕ್‌ ರಾಜೀನಾಮೆ ನೀಡಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಎಚ್‌.ಡಿ. ​ಕು​ಮಾ​ರ​ಸ್ವಾಮಿ ಅವರು ಜೆಡಿ​ಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತ​ನ​ಗೊ​ಳ್ಳುವ ಆತಂಕ​ದ​ಲ್ಲಿದ್ದ ಕಾರಣ ಅಶೋಕ್‌ ಅವ​ರನ್ನು ಸಂಪ​ರ್ಕಿಸಿ ಮನ​ವೊ​ಲಿ​ಸುವ ಪ್ರಯ​ತ್ನ​ವನ್ನು ಮಾಡಲಿ​ಲ್ಲ.

ಈಗ ಅಶೋಕ್‌ ರಾಜಿ​ನಾ​ಮೆ​ಯಿಂದ ತೆರ​ವಾ​ಗಿ​ರುವ ಸ್ಥಾನ​ದಲ್ಲಿ ತೆನೆ ಹೊರುವ ಆಕಾಂಕ್ಷಿ​ತ​ರಲ್ಲಿ ಕನ​ಕ​ಪು​ರದ ದುಂತೂರು ವಿಶ್ವ​ನಾಥ್‌, ಚನ್ನ​ಪಟ್ಟಣ ಸಿಂ.ಲಿಂ.​ ನಾ​ಗ​ರಾಜು, ರಾಮ​ನ​ಗ​ರದ ಕೆ.ಎಸ್‌. ಸಿದ್ದಲಿಂಗೇಗೌಡ (ಪ್ರಾ​ಣೇಶ್‌ ) ಹಾಗೂ ತಾಲೂಕು ಅಧ್ಯಕ್ಷ ರಾಜ​ಶೇ​ಖರ್‌ ಹೆಸರು ಚಾಲ್ತಿ​ಯ​ಲ್ಲಿ​ದೆ.

ಜಿಲ್ಲೆಗಳ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಚ್‌.ಡಿ. ​ಕು​ಮಾ​ರ​ಸ್ವಾಮಿ ನೇತೃ​ತ್ವದ ಮೈತ್ರಿ ಸರ್ಕಾರ ಅಸ್ತಿ​ತ್ವ​ದ​ಲ್ಲಿ​ದ್ದಾಗ ಜೆಡಿ​ಎಸ್‌ ಜಿಲ್ಲಾ​ಧ್ಯಕ್ಷ ಸ್ಥಾನ ದೊರೆ​ತಿ​ದ್ದರೆ ಪಕ್ಷ ಸಂಘ​ಟನೆಯನ್ನು ಸುಲ​ಭ​ವಾಗಿ ನಿಭಾ​ಯಿ​ಸ​ಬ​ಹು​ದಾ​ಗಿತ್ತು. ನಿಗಮ ಮಂಡ​ಳಿ​ಗ​ಳಲ್ಲೂ ಅವ​ಕಾಶ ಸಿಗ​ಲಿಲ್ಲ. ಈಗ ಎಲ್ಲಾ​ದಕ್ಕೂ ಜೇಬಿ​ನಿಂದಲೇ ಖರ್ಚು ಮಾಡ​ಬೇ​ಕು ಎಂಬ ಕಾರ​ಣಕ್ಕೆ ಕೆಲ​ ನಾಯ​ಕರು ಅಧ್ಯಕ್ಷ ಸ್ಥಾನ​ದಿಂದ ಹಿಂದೆ ಸರಿ​ಯು​ತ್ತಿ​ದ್ದಾರೆ.

ಪಕ್ಷ ಲಾಭ ಮುಖ್ಯ:

ಆದರೆ, ವರಿಷ್ಠ ದೇವೇ​ಗೌಡ ಮತ್ತು ಕುಮಾ​ರ​ಸ್ವಾಮಿ ಅವರು ಜಿಲ್ಲೆ​ಯಲ್ಲಿ ಒಕ್ಕ​ಲಿ​ಗ ಸಮು​ದಾ​ಯದ ಪ್ರಾಬಲ್ಯ ಇರುವ ಕಾರಣ ಆ ಸಮು​ದಾ​ಯಕ್ಕೆ ಸೇರಿ​ದ​ವ​ರನ್ನೇ ಜಿಲ್ಲಾ​ಧ್ಯ​ಕ್ಷ​ರ​ನ್ನಾಗಿ ನೇಮಕ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಲಾಭ​ವಾ​ಗ​ಲಿದೆ. ಅಲ್ಲದೆ, ಮುಂಬ​ರುವ ಸ್ಥಳೀಯ ಸಂಸ್ಥೆ ಚುನಾ​ವ​ಣೆ​ಗ​ಳನ್ನು ಸಮ​ರ್ಥ​ವಾಗಿ ಎದು​ರಿ​ಸ​ಬ​ಹುದು ಎಂಬ ಲೆಕ್ಕಾ​ಚಾ​ರ​ದ​ಲ್ಲಿ​ರಬಹುದು.

ಕನ​ಕ​ಪು​ರ​ದಲ್ಲಿ ಡಿಕೆಶಿ ಸಹೋ​ದ​ರರ ಪ್ರಾಬ​ಲ್ಯದ ನಡು​ವೆಯೂ ಹೋರಾ​ಟದ ಮೂಲಕ ಜೆಡಿ​ಎಸ್‌ ಅಸ್ತಿತ್ವ ಉಳಿ​ಸಿ​ಕೊ​ಳ್ಳು​ವಲ್ಲಿ ಪ್ರಮುಖ ಪಾತ್ರ ವಹಿ​ಸಿ​ರುವ ದುಂತೂರು ವಿಶ್ವ​ನಾಥ್‌ ಹಾಗೂ ಪಕ್ಷಕ್ಕೆ ನಿಷ್ಠೆ​ಯಿಂದ ನಡೆ​ದು​ಕೊ​ಳ್ಳು​ತ್ತಿ​ರುವ ಸಿಂ.ಲಿಂ.​ನಾ​ಗ​ರಾಜು, ಕೆ.ಎಸ್‌.ಸಿದ್ದಲಿಂಗೇಗೌಡ (ಪ್ರಾ​ಣೇಶ್‌ ) ಅವರ ಹೆಸರುಗಳು ಪಕ್ಷ​ದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಲ​ವಾಗಿ ಕೇಳಿ ಬರು​ತ್ತಿದೆ.

ಆಯ್ಕೆ ಪರಿಗಣನೆ:

ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಎರಡು ಬಾರಿ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ದುಂತೂರು ವಿಶ್ವ​ನಾಥ್‌ ಕಡಿಮೆ ಮತ​ಗಳ ಅಂತ​ರ​ದಲ್ಲಿ ಸೋಲು ಕಂಡ​ವರು. ಕನ್ನಡ ಸಾಹಿತ್ಯ ಪರಿ​ಷತ್‌ ಜಿಲ್ಲಾ​ಧ್ಯ​ಕ್ಷ​ರಾ​ಗಿ​ರುವ ಸಿಂ.ಲಿಂ.​ನಾ​ಗ​ರಾಜು 2011ರ ಚನ್ನ​ಪ​ಟ್ಟಣ ಕ್ಷೇತ್ರ ಉಪ​ಚು​ನಾ​ವ​ಣೆ​ಯಲ್ಲಿ ಯೋಗೇ​ಶ್ವರ್‌ ಎದುರು ಪರಾ​ಭ​ವ​ಗೊಂಡ​ವರು. ಪ್ರಾಣೇಶ್‌ ಅವ​ರು ಕೆಎಂಎಫ್‌ ನ ಅಧಿಕಾರೇತರ ಸದಸ್ಯರಾಗಿ ನೇಮ​ಕ​ಗೊಂಡ ವೇಗ​ದ​ಲ್ಲಿಯೇ ಅಧಿ​ಕಾರ ಕಳೆ​ದು​ಕೊಂಡ​ವರು. ಈ ಮೂವರು ನಾಯ​ಕರು ಯಾವುದೇ ಅಧಿ​ಕಾರ ಅನು​ಭ​ವಿ​ಸಿ​ದ​ವ​ರಲ್ಲ. ಆದರೆ, ಪಕ್ಷದ ಮುಖಂಡರು ಮತ್ತು ಕಾರ್ಯ​ಕ​ರ್ತ​ರೊಂದಿಗೆ ಉತ್ತಮ ಬಾಂಧವ್ಯ ಹೊಂದಿ​ದ್ದಾರೆ.

ಇನ್ನು ಹಳೇ ಮೈಸೂರು ಭಾಗ​ದಲ್ಲಿ ಬಿಜೆಪಿಯನ್ನು ಬಲಿ​ಷ್ಠ​ವಾಗಿ ಸಂಘ​ಟಿ​ಸಲು ಪಕ್ಷದ ನೂತನ ರಾಜ್ಯಾ​ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಿದ್ಧತೆ ಆರಂಭಿ​ಸಿ​ದ್ದಾರೆ. ಅದ​ರಂತೆ ರಾಮ​ನ​ಗರ ಜಿಲ್ಲೆ​ಯ ಅಧ್ಯಕ್ಷ ಸ್ಥಾನವನ್ನು ಸಮ​ರ್ಥ​ರಿಗೆ ನೀಡಿ ಆ ಕೆಲ​ಸ​ವನ್ನು ಕಾರ್ಯ​ಗ​ತ​ಗೊ​ಳಿ​ಸಲು ತೀರ್ಮಾ​ನಿ​ಸಿ​ದ್ದಾರೆ ಎನ್ನ​ಲಾ​ಗಿ​ದೆ.

ಸೋಲಿನ ಆಘಾತ:

ಕಳೆದ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರ​ಗ​ಳಲ್ಲಿ ಬಿಜೆಪಿಗೆ ನಿರೀ​ಕ್ಷಿತ ಫಲಿ​ತಾಂಶ ಬರ​ಲಿಲ್ಲ. ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಪಕ್ಷದ ಪ್ರಭಾವಿ ನಾಯಕ ಸಿ.ಪಿ.​ಯೋ​ಗೇ​ಶ್ವರ್‌ ಸೋಲು ಕೂಡ ವರಿ​ಷ್ಠ​ರಿ​ಗೆ ಆಘಾತ ತಂದಿತು. ಈ ಕಾರ​ಣ​ದಿಂದಾಗಿಯೇ ಆಗಿನ ಜಿಲ್ಲಾ​ಧ್ಯ​ಕ್ಷ​ರಾ​ಗಿದ್ದ ದೇವ​ರಾಜು ಅವ​ರನ್ನು ಸ್ಲಂ ಮೋರ್ಚಾ ಸಮಿತಿ ರಾಜ್ಯ ಕಾರ್ಯ​ದರ್ಶಿ ಸ್ಥಾನ ನೀಡಿ ಹುದ್ದೆ ತೆರ​ವು​ಗೊ​ಳಿಸುವಂತೆ ಮಾಡಿ​ದರು.

ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ ಗೆಲವು ಸಾಧಿ​ಸಿದ್ದ ಕುಮಾ​ರ​ಸ್ವಾಮಿ ರಾಮ​ನ​ಗರ ಕ್ಷೇತ್ರ ತೊರೆ​ದಿ​ದ್ದರು. ಉಪ​ಚು​ನಾ​ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಹಿಂದಿನ ರಾಜ್ಯಾ​ಧ್ಯಕ್ಷ ಬಿ.ಎಸ್‌. ಯ​ಡಿ​ಯೂ​ರಪ್ಪ ಅವರು ತನ್ನ ಆಪ್ತ ಎಂ.ರು​ದ್ರೇಶ್‌ ಅವ​ರನ್ನು ರಾತ್ರೋ​ರಾತ್ರಿ ರಾಮ​ನ​ಗರ ಜಿಲ್ಲಾ​ಧ್ಯ​ಕ್ಷ​ರ​ನ್ನಾಗಿ ನೇಮಕ ಮಾಡಿ ಕಳು​ಹಿ​ಸಿ​ದರು.

ಪಕ್ಷ​ದೊ​ಳಗೆ ಭಿನ್ನ​ಮತ ಸ್ಫೋಟ​ಗೊಂಡಿದ್ದು ಹಾಗೂ ಉಪ​ಚು​ನಾ​ವಣೆಯಲ್ಲಿ ಪಕ್ಷದ ಅಭ್ಯ​ರ್ಥಿ ಕೊನೆ ಗಳಿ​ಗೆ​ಯಲ್ಲಿ ಕಣ​ದಿಂದ ಹಿಂದೆ ಸರಿ​ದಿದ್ದು ಬಿಜೆಪಿ ನಾಯ​ಕ​ರನ್ನು ಮುಜು​ಗ​ರ​ಗೊ​ಳ್ಳು​ವಂತೆ ಮಾಡಿತು. ಅಲ್ಲದೆ, ಸಂಸತ್‌ ಚುನಾ​ವ​ಣೆಯಲ್ಲಿ ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ​ದ​ಲ್ಲಿನ ಸೋಲು ವರಿ​ಷ್ಠ​ರಿಗೆ ಪಕ್ಷ ಸಂಘ​ಟ​ನೆಯ ಕೊರ​ತೆ​ಯನ್ನು ಬಿಂಬಿ​ಸು​ವಂತಿತ್ತು.

ಮನ್ನಣೆಗೆ ಚಿಂತನೆ:

ಬಿಜೆ​ಪಿ​ಯಲ್ಲಿ ಪದಾ​ಧಿ​ಕಾರಿ ಹುದ್ದೆ ಮೂರು ವರ್ಷ​ಗಳ ಅವ​ಧಿ​ಗೆ ಸೀಮಿ​ತ. ದೇವ​ರಾಜು ಅವರು ಒಂದೂಮುಕ್ಕಾಲು ವರ್ಷ ಅಧ್ಯ​ಕ್ಷ​ರಾ​ಗಿ​ದ್ದರು. ಆನಂತರ ಎಂ.ರು​ದ್ರೇಶ್‌ ಅವ​ರನ್ನು ಒಂದು ಕಾಲು ವರ್ಷದ ಅವ​ಧಿ​ಗಾಗಿ ಅಧ್ಯ​ಕ್ಷ​ರ​ನ್ನಾಗಿ ನಿಯೋ​ಜನೆ ಮಾಡ​ಲಾ​ಗಿತ್ತು. ಈಗ ಆ ಅವಧಿ ಮುಗಿ​ಯುವ ಹಂತಕ್ಕೆ ಬಂದಿ​ರು​ವು​ದ​ರಿಂದ ಹೊಸ ಅಧ್ಯ​ಕ್ಷ​ರ ನೇಮ​ಕದ ಚರ್ಚೆಗಳು ಪಕ್ಷ​ದೊ​ಳಗೆ ಶುರು​ವಾ​ಗಿದೆ.

ಒಕ್ಕಲಿ​ಗರ ಪ್ರಾಬಲ್ಯ ಉಳ್ಳ ಜಿಲ್ಲೆ​ಯಾ​ಗಿ​ರುವ ಕಾರಣ ಜೆಡಿ​ಎಸ್‌ ಮತ್ತು ಬಿಜೆಪಿ ಪಕ್ಷ​ಗಳು ಸಂಘ​ಟ​ನೆಯ ಚಾಕ​ಚ​ಕ್ಯ​ತೆಯ ಜತೆಗೆ ಎಲ್ಲಾ​ದ​ರಲ್ಲೂ ಸಬ​ಲ​ರಾ​ಗಿ​ರುವ ವ್ಯಕ್ತಿ​ಯನ್ನೇ ಜಿಲ್ಲಾ​ಧ್ಯಕ್ಷ ಸ್ಥಾನಕ್ಕೆ ಮನ್ನಣೆ ನೀಡು​ತ್ತಾ​ರೆ ಎಂಬು​ದ​ರಲ್ಲಿ ಅನು​ಮಾ​ನ​ವಿಲ್ಲ ಎನ್ನು​ತ್ತಾರೆ ಉಭ​ಯ ಪಕ್ಷ​ಗಳ ಮುಖಂಡ​ರು.

Follow Us:
Download App:
  • android
  • ios