Asianet Suvarna News Asianet Suvarna News

ಪಾಂಡವಪುರದಲ್ಲಿ ಬೃಹತ್ ಆರೋಗ್ಯ ಮೇಳ ಆಯೋಜಿಸಿ ಶಕ್ತಿ ಪ್ರದರ್ಶನ ತೋರಿದ ಬಿಜೆಪಿ

ಈ ಬಾರಿ   ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಸಿದ್ದತೆ ನಡೆಸಿದೆ. ಅದರಂತೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದೆ. ಅದಕ್ಕಾಗಿ ಬೃಹತ್ ಆರೋಗ್ಯ ಮೇಳ ನಡೆಸಿದೆ

BJP  health fair near Pandavapura in mandya gow
Author
Bengaluru, First Published Aug 22, 2022, 7:36 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಆ.22): ಈ ಬಾರಿ ಉತ್ತರ ಕರ್ನಾಟಕ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಸಿದ್ದತೆ ನಡೆಸಿದೆ. ಅದರಂತೆ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದೆ. ಜೆಡಿಎಸ್ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಮಲ ಪಾಳಯ ತಯಾರಿ ನಡೆಸಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಆರೋಗ್ಯ ಮೇಳ ನೆಪದಲ್ಲಿ ಶಕ್ತಿ ಪ್ರದರ್ಶನ ನಡೆಸಿತು. ಆರೋಗ್ಯ ತಪಾಸಣಾ ಶಿಬಿರಕ್ಕೆ ಆಗಮಿಸಿದ ಸಾವಿರಾರು ಜನರು ಮೇಲುಕೋಟೆ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಡಾ|| ಇಂದ್ರೇಶ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು.  ಪಾಂಡವಪುರದ ತಾಲೂಕು ಕ್ರೀಡಾಂಗಣದಲ್ಲಿ ಸುಮಾರು 25 ರಿಂದ 30 ಸಾವಿರ ಜನಕ್ಕೆ ಆರೋಗ್ಯ ತಪಾಸಣೆ ನಡೆಸಲಾಯಿತು. ವಿವಿಧ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿಗಳು ಸಂಘಟನೆಗಳ ಸ್ವಯಂ ಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬರೋಬರಿ 900 ಮಂದಿ ವೈದ್ಯರ ತಂಡ, ಆಗಮಿಸಿದ್ದ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತು.

ಕ್ಯಾನ್ಸರ್, ದಂತ, ಚರ್ಮ, ಗರ್ಭಕೋಶ ಸಮಸ್ಯೆ ಸೇರಿದಂತೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪ್ರತ್ಯೇಕ ಕೌಂಟರ್ ತೆರೆದು ತಪಾಸಣೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ಕ್ಷೇತ್ರದ ಬೇರೆ ಬೇರೆ ಊರಿಗಳಿಂದ ಆಗಮಿಸುವ ಜನರಿಗೆ ಬಸ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಕೇಸರಿ ಮಯವಾಗಿದ್ದ ಪಾಂಡವಪುರ: ಚುನಾವಣೆಗೆ 7-8 ತಿಂಗಳು ಬಾಕಿಯಿರುವಾಗಲೇ ಮೇಲುಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ|| ಇಂದ್ರೇಶ್ ಆಕ್ಟೀವ್ ಆಗಿದ್ದಾರೆ. ಆರೋಗ್ಯ ಮೇಳ ನೆಪದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಕಾರ್ಯಕ್ರಮ ಹಿನ್ನೆಲೆ ಪಾಂಡವಪುರ ಪಟ್ಟಣದಾದ್ಯಂತ ಕೇಸರಿ ಬಾವುಟಗಳನ್ನ ಕಟ್ಟಲಾಗಿತ್ತು. 

ರಾಜ್ಯ ಬಿಜೆಪಿ ನಾಯಕರ ಬ್ಯಾನರ್ಸ್ ಹಾಕುವ ಮೂಲಕ ಇಡೀ ಪಟ್ಟಣವನ್ನೇ ಕೇಸರಿಮಯವಾಗಿ ಕಾಣುವಂತೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ನಾರಾಯಣಗೌಡರಿಗೆ ಹೂವಿನ ಮಳೆಗೈದು ಅದ್ದೂರಿ ಸ್ವಾಗತ ನೀಡಿ ಕರೆತರಲಾಯಿತು. ವೇದಿಕೆ ಮೇಲೆ ಡಾ|| ಇಂದ್ರೇಶ್ ಹುಟ್ಟುಹಬ್ಬ ಆಚರಿಸಿದ ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಕೇಕ್ ಕತ್ತರಿಸಿ ಹೂಗೂಚ್ಛ ನೀಡಿ ಶುಭ ಹಾರೈಸಿದರು.

Follow Us:
Download App:
  • android
  • ios