ಬೆಂಗಳೂರು: ಬಂದ್ ಮಾಡದ ಹೋಟೆಲ್ಗೆ ನುಗ್ಗಿ ಬಿಜೆಪಿಗರಿಂದ ದಾಂಧಲೆ..?
ಜಯನಗರ 3ನೇ ಹಂತದಲ್ಲಿರುವ ಉಡುಪಿ ಹೋಟೆಲ್ ವಹಿವಾಟು ನಡೆಸಿತ್ತು. ಇದರಿಂದ ಕೆರಳಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ಹೋಟೆಲ್ಗೆ ನುಗ್ಗಿ ಕುರ್ಚಿಗಳನ್ನು ಒಡೆದು ಹಾಕಿದರು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಬೆಂಗಳೂರು(ಸೆ.27): ಬೆಂಗಳೂರು ಬಂದ್ ವೇಳೆ ವಹಿವಾಟು ನಡೆಸುತ್ತಿದ್ದರು ಎಂದು ಸಿಟ್ಟಿಗೆದ್ದು ಜಯನಗರ ಸಮೀಪ ಹೋಟೆಲ್ವೊಂದಕ್ಕೆ ನುಗ್ಗಿ ಕನ್ನಡಪರ ಸಂಘಟನೆಯ ಇಬ್ಬರು ಕಾರ್ಯಕರ್ತರು ದಾಂಧಲೆ ನಡೆಸಿರುವ ಘಟನೆ ಮಂಗಳವಾರ ನಡೆಯಿತು.
ಜಯನಗರದ 3ನೇ ಅಡ್ಡರಸ್ತೆಯ ಉಡುಪಿ ಹೋಟೆಲ್ನಲ್ಲಿ ಗಲಾಟೆ ನಡೆದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಡಿಎಂಕೆಯ ಬಿ ಟೀಂ: ಮಾಜಿ ಸಿಎಂ ಕುಮಾರಸ್ವಾಮಿ
ತಮಿಳುನಾಡಿಗೆ ಕಾವೇರ ನದಿ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರು ಬಂದ್ಗೆ ಕರ್ನಾಟಕ ಜಲಸಂರಕ್ಷಣಾ ಸಮಿತಿ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ಜಯನಗರ ವ್ಯಾಪ್ತಿ ಕೂಡ ಅಂಗಡಿ ಮುಗ್ಗಟ್ಟುಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಬೆಂಬಲಿಸಿದ್ದವು. ಆದರೆ ಜಯನಗರ 3ನೇ ಹಂತದಲ್ಲಿರುವ ಉಡುಪಿ ಹೋಟೆಲ್ ವಹಿವಾಟು ನಡೆಸಿತ್ತು. ಇದರಿಂದ ಕೆರಳಿದ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ಹೋಟೆಲ್ಗೆ ನುಗ್ಗಿ ಕುರ್ಚಿಗಳನ್ನು ಒಡೆದು ಹಾಕಿದರು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಕೂಡಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಹೋಟೆಲ್ ಮಾಲಿಕನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ದಾಂಧಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ?
ಉಡುಪಿ ಹೋಟೆಲ್ಗೆ ನುಗ್ಗಿ ದಾಂಧಲೆ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರಾದ ಶಿವು ಹಾಗೂ ವಿಶ್ವ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ನಿರಾಕರಿಸಿದ್ದಾರೆ.
ಶಾಸಕರ ಬಂಧನ, ಬಿಡುಗಡೆ
ಬೆಂಗಳೂರು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ್ದ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು. ಆದರೆ ಹೋಟೆಲ್ ಗಲಾಟೆ ಸಂಬಂಧ ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಠಾಣೆ ಮುಂದೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆಗಿಳಿದರು. ಆಗ ಪೊಲೀಸರು, ಶಾಸಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗ್ಳೂರಲ್ಲಿ ಜೋರಾದ ಕಾವೇರಿ ಕಿಚ್ಚು: ಪ್ರತಿಭಟನೆ ವೇಳೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಮುಂದಾದ ಅನ್ನದಾತ
ಉಡುಪಿ ಹೋಟೆಲ್ ಮೇಲೆ ದಾಳಿ ಮಾಡಿರುವ ಕಿಡಿಗೇಡಿಗಳಿಗೂ ನನಗೂ ಸಂಬಂಧವಿಲ್ಲ. ಸುಮ್ಮನೆ ಅಪಪ್ರಚಾರ ಮಾಡಬೇಡಿ. ಕೃತ್ಯ ನಡೆಸಿದವರು ಅವರು ಬಿಜೆಪಿ ಕಾರ್ಯಕರ್ತರಲ್ಲ. ಹೊಟೇಲ್ ಮಾಲಿಕ ಹಾಗೂ ಕೆಲಸಗಾರರನ್ನು ಕರೆದು ಮಾತನಾಡಿದ್ದು, ಮುಂಬರುವ ದಿನದಲ್ಲಿ ನಷ್ಟವಾಗಿದ್ದಕ್ಕೆ ಸಹಾಯ ಮಾಡುತ್ತೇನೆ. ಬಂದ್ ವೇಳೆ ರ್ಯಾಲಿ ಹಮ್ಮಿಕೊಂಡಿದ್ದ ಕಾರಣಕ್ಕೆ ನನ್ನನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಪೊಲೀಸರು ಕ್ಷಮೆ ಕೋರಿದ್ದಾರೆ ಎಂದು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ತಿಳಿಸಿದ್ದಾರೆ.
ಹೋಟೆಲ್ ಗಲಾಟೆ ಪ್ರಕರಣಕ್ಕೂ ಜಯನಗರ ಶಾಸಕರ ಬಂಧನಕ್ಕೂ ಸಂಬಂಧವಿಲ್ಲ. ಬಂದ್ ವೇಳೆ ಜಾರಿಗೊಂಡಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ಶಾಸಕರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಯಿತು ಎಂದು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಶಹಾಪುರವಾಡ್ ತಿಳಿಸಿದ್ದಾರೆ.