ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ 7 ಕೋಟಿ ದರೋಡೆ ಪ್ರಕರಣದಲ್ಲಿ ವಶಪಡಿಸಿಕೊಂಡ 5 ಕೋಟಿ ರೂ. ನಗದನ್ನು ಭದ್ರವಾಗಿಡಲಾಗಿದೆ. ನ್ಯಾಯಾಲಯದ ಪ್ರಕ್ರಿಯೆ ವಿಳಂಬವಾದ ಕಾರಣ, ಕಳ್ಳರ ಭಯದಿಂದ ಪೊಲೀಸರು ರಾತ್ರಿ 2 ಗಂಟೆಗೆ ಠಾಣೆಯ ಗೇಟ್ ಮುಚ್ಚುವ ಮೂಲಕ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಬೆಂಗಳೂರು: ಸಾಮಾನ್ಯವಾಗಿ ಪೊಲೀಸ್ ಠಾಣೆಗಳು ಸಾರ್ವಜನಿಕರಿಗಾಗಿ 24 ಗಂಟೆಯೂ ತೆರೆದಿರುತ್ತವೆ. ಆದರೆ, ಸಿಲಿಕಾನ್ ಸಿಟಿಯ ಆ ಒಂದು ಪೊಲೀಸ್ ಠಾಣೆಯಲ್ಲಿ ಈಗ ವಿಚಿತ್ರ ಸಂಪ್ರದಾಯ ಶುರುವಾಗಿದೆ. ರಾತ್ರಿ 2 ಗಂಟೆಯಾಗುತ್ತಿದ್ದಂತೆ ಆ ಠಾಣೆಯ ಬೃಹತ್ ಕಬ್ಬಿಣದ ಗೇಟ್ ಕ್ಲೋಸ್ ಆಗುತ್ತದೆ! ಇಡೀ ನಗರಕ್ಕೆ ಭದ್ರತೆ ನೀಡುವ ಪೊಲೀಸರಿಗೇ ಈಗ 'ಕಳ್ಳರ ಭಯ' ಶುರುವಾಗಿದೆಯೇ? ಎಂಬ ಅನುಮಾನ ಮೂಡುವುದು ಸಹಜ. ಈ ಕುತೂಹಲಕಾರಿ ಬೆಳವಣಿಗೆಗೆ ಕಾರಣವಾಗಿರುವುದು ಸಿದ್ದಾಪುರ ಪೊಲೀಸ್ ಠಾಣೆಯೊಳಗೆ ಭದ್ರವಾಗಿ ಇರಿಸಲಾಗಿರುವ '5 ಕೋಟಿ ರೂಪಾಯಿ' ನಗದು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು 5 ಕೋಟಿ ರಹಸ್ಯ?

ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ 7 ಕೋಟಿ ರೂಪಾಯಿ ದರೋಡೆ (Robbery) ನಡೆದಿತ್ತು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ದಕ್ಷಿಣ ವಿಭಾಗದ ಪೊಲೀಸರು, ನಾಲ್ಕೈದು ತಂಡಗಳನ್ನು ರಚಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ಪರಿಣಾಮವಾಗಿ ದರೋಡೆಕೋರರನ್ನು ಬಂಧಿಸಿ, ಅವರಿಂದ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಹಣವನ್ನು ರಿಕವರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಠಾಣೆಯೊಳಗೆ ಹಣ: ನೈಟ್ ಬೀಟ್ ಸಿಬ್ಬಂದಿಗೆ ನಡುಕ!

ಯಾವುದೇ ಕ್ರೈಂ ಪ್ರಕರಣದಲ್ಲಿ ಸ್ವತ್ತು ಅಥವಾ ಹಣವನ್ನು ವಶಪಡಿಸಿಕೊಂಡ ನಂತರ ಅದನ್ನು 'ಪಿಎಫ್' (Property Form) ಹಾಕಿ ನ್ಯಾಯಾಲಯಕ್ಕೆ ಒಪ್ಪಿಸುವುದು ಕಾನೂನು ಪ್ರಕ್ರಿಯೆ. ಸಿದ್ದಾಪುರ ಪೊಲೀಸರು ಕೂಡ ರಿಕವರಿ ಮಾಡಿದ 5 ಕೋಟಿ ಹಣಕ್ಕೆ ಪಿಎಫ್ ಹಾಕಿ ಕೋರ್ಟ್‌ಗೆ ಅಪ್ಲಿಕೇಶನ್ ಸಲ್ಲಿಸಿದ್ದಾರೆ. ಆದರೆ, ದರೋಡೆಗೊಳಗಾದ ಸಿಎಂಎಸ್ (CMS) ಕಂಪನಿಯ ಅಧಿಕಾರಿಗಳು ಕೋರ್ಟ್‌ಗೆ ಬಂದು 'ಇದು ನಮ್ಮದೇ ಹಣ' ಎಂದು ದೃಢೀಕರಿಸಿ, ಅದನ್ನು ವಾಪಸ್ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಅಲ್ಲಿಯವರೆಗೆ ಈ ಬೃಹತ್ ಮೊತ್ತದ ಹಣ ಠಾಣೆಯಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.

ಇಷ್ಟು ದೊಡ್ಡ ಮೊತ್ತದ ಹಣ ಠಾಣೆಯಲ್ಲೇ ಇರುವುದರಿಂದ, ಮತ್ತೆ ಯಾರಾದರೂ ದರೋಡೆಕೋರರು ಠಾಣೆಯ ಮೇಲೆ ದಾಳಿ ಮಾಡಬಹುದೇ ಅಥವಾ ಹಣ ಕಳುವಾಗಬಹುದೇ ಎಂಬ ಭೀತಿ ಪೊಲೀಸರನ್ನು ಕಾಡುತ್ತಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ 2 ಗಂಟೆಯ ನಂತರ ಠಾಣೆಯ ಮುಖ್ಯ ಗೇಟ್ ಅನ್ನು ಬಂದ್ ಮಾಡಲಾಗುತ್ತಿದೆ.

ಪರಿಶೀಲನೆ ನಡೆಸಿಯೇ ಎಂಟ್ರಿ:

ಗೇಟ್ ಕ್ಲೋಸ್ ಮಾಡಿದ್ದರೂ ಸಹ, ಸಾರ್ವಜನಿಕರಿಗೆ ದೂರು ನೀಡಲು ಅವಕಾಶವಿದೆ. ಆದರೆ, ರಾತ್ರಿ ವೇಳೆ ಯಾರೇ ಬಂದರೂ ಪೊಲೀಸರು ಅವರನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಬಂದವರು ಯಾರು? ಯಾವ ಉದ್ದೇಶಕ್ಕೆ ಬಂದಿದ್ದಾರೆ? ಎಂಬ ಬಗ್ಗೆ ಪೂರ್ವಾಪರ ವಿಚಾರಿಸಿ, ದೂರು ನೀಡುವ ಅನಿವಾರ್ಯತೆ ಇದ್ದರೆ ಮಾತ್ರ ಗೇಟ್ ತೆರೆದು ಒಳಗೆ ಬಿಡಲಾಗುತ್ತಿದೆ.

ದಕ್ಷಿಣ ವಿಭಾಗದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಭದ್ರತೆ ವಹಿಸಲಾಗಿದ್ದು, ನ್ಯಾಯಾಲಯದಿಂದ ಆದೇಶ ಬಂದು ಹಣವನ್ನು ಸಂಬಂಧಪಟ್ಟ ಕಂಪನಿಗೆ ಹಸ್ತಾಂತರಿಸುವವರೆಗೂ ಸಿದ್ದಾಪುರ ಪೊಲೀಸರಿಗೆ ಈ 'ಕೋಟಿ ಕೋಟಿ' ಟೆನ್ಷನ್ ತಪ್ಪಿದ್ದಲ್ಲ. ಕಳ್ಳರನ್ನು ಹಿಡಿಯುವ ಪೊಲೀಸರೇ ಈಗ ಹಣದ ಭದ್ರತೆಗಾಗಿ ಗೇಟ್ ಹಾಕಿಕೊಂಡು ಕೂತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.