ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Add Asianetnews Kannada as a Preferred SourcegooglePreferred

ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆಯಿಂದ ಬಿಸಿಲು ಹಾಗೂ ಸೆಕೆ ವಾತಾವರಣ ಕಂಡು ಬಂತು. ಮಧ್ಯಾಹ್ನ ನಗರದ ವಿವಿಧ ಭಾಗದಲ್ಲಿ ಮಳೆ ಸುರಿಯಿತು.ರಾತ್ರಿ 9.30ರ ಸುಮಾರಿಗೆ ಮೆಜೆಸ್ಟಿಕ್‌, ಸದಾಶಿವನಗರ, ವಿಧಾನಸೌಧ, ಶಾಂತಿನಗರ, ಚಾಮರಾಜಪೇಟೆ ಸೇರಿದಂತೆ ಮೊದಲಾದ ಕಡೆ ಧಾರಾಕಾರ ಮಳೆ ಸುರಿಯಿತು.

ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ನಡು ರಸ್ತೆಯಲ್ಲಿ ಪರದಾಡಿದರು. ಮಳೆ ನೀರುಗಾಲುವೆಗಳಲ್ಲಿ ಕಸ ತುಂಬಿಕೊಂಡ ಪರಿಣಾಮ ನಗರದ ಬಹುತೇಕ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ಹರಿಯಿತು.

ಶೇಷಾದ್ರಿಪುರ, ಅರಮನೆ ರಸ್ತೆ, ಬಳ್ಳಾರಿ ರಸ್ತೆ, ಕಸ್ತೂರಿನಗರ, ಹೆಬ್ಬಾಳ, ವಿಂಡ್ಸರ್ ಮ್ಯಾನರ್‌, ಹೊಸೂರು ರಸ್ತೆ, ಮೆಜೆಸ್ಟಿಕ್‌, ವಿಧಾನಸೌಧ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಅಂಡರ್‌ ಪಾಸ್‌, ಫ್ಲೈಓವರ್‌ ಗಳ ಮೇಲೆ ಭಾರಿ ಪ್ರಮಾಣ ನೀರು ನಿಂತುಕೊಂಡಿತ್ತು.

ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ಮರ ಬಿದ್ದ ವರದಿಯಾಗಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆಯಲ್ಲಿ ಸುಮನಹಳ್ಳಿ ಕಡೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸಂಚಾರ ನಿಧಾನಗತಿಯ ಸಂಚಾರ ಕಂಡು ಬಂತು.

ಎಲ್ಲಿ ಎಷ್ಟು ಮಳೆ?

ಬುಧವಾರ ಬೆಂಗಳೂರಿನಲ್ಲಿ ಸರಾಸರಿ 1.1 ಸೆಂ.ಮೀ ಮಳೆಯಾದ ವರದಿಯಾಗಿದೆ. ಹಂಪಿನಗರದಲ್ಲಿ ಅತಿ ಹೆಚ್ಚು 3.7 ಸೆಂ.ಮೀ ಮಳೆಯಾಗಿದೆ. ಪುಲಕೇಶಿನಗರ 2.8, ಬಸವೇಶ್ವರ ನಗರ 2.4, ಸಂಪಂಗಿರಾಮನಗರ 2, ಮನೋರಾಯನಪಾಳ್ಯ ಹಾಗೂ ವಿದ್ಯಾಪೀಠದಲ್ಲಿ 1.9, ದೊರೆಸಾನಿಪಾಳ್ಯ,ವಿವಿ ಪುರದಲ್ಲಿ ತಲಾ 1.6, ವಿ.ನಾಗೇನಹಳ್ಳಿ 1.5, ವನ್ನಾರ್‌ಪೇಟೆ ಹಾಗೂ ರಾಜ್‌ ಮಹಲ್‌ ಗುಟ್ಟಹಳ್ಳಿಯಲ್ಲಿ ತಲಾ 1.3, ಬಾಣಸವಾಡಿ, ಮಾರತ್‌ಹಳ್ಳಿ, ರಾಜಾಜಿನಗರದಲ್ಲಿ ತಲಾ 1.1, ಬಸವನಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ. ಗುರುವಾರವೂ ನಗರದಲ್ಲಿ ಸಾಧಾರಣ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.