ಮದ್ದೂರು: ಎಕ್ಸ್ಪ್ರೆಸ್ ವೇನಿಂದ ಆರ್ಥಿಕ ಅಭಿವೃದ್ಧಿಗೂ ವೇಗ, ಪ್ರಧಾನಿ ಮೋದಿ
ಬಹು ವರ್ಷಗಳಿಂದ ಎರಡು ನಗರಗಳಲ್ಲಿ ಪ್ರಯಾಣಿಕರಿಗೆ ವಾಹನಗಳ ದಟ್ಟಣೆ ಕಾರಣಕ್ಕೆ ದೂರುತ್ತಿದ್ದರು. ಆದರೀಗ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಕಾರಣದಿಂದ ಪ್ರಯಾಣದ ದೂರವನ್ನು ಒಂದೂವರೆ ಗಂಟೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯೂ ವೇಗ ಪಡೆಯಲು ಸಹಕಾರಿಯಾಗಲಿದೆ ಎಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ.
ಎಂ. ಅಪ್ರೋಜ್ಖಾನ್
ಮದ್ದೂರು/ಮಂಡ್ಯ(ಮಾ.13): ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರು ಮಹತ್ವ ಪೂರ್ಣ ನಗರ ಪ್ರದೇಶಗಳಾಗಿವೆ. ಬೆಂಗಳೂರು ಟೆಕ್ನಾಲಜಿಗೆ ಪ್ರಸಿದ್ಧಿಯಾದರೆ, ಮೈಸೂರು ಸಾಂಸ್ಕೃತಿಕ ಪರಂಪರೆಗೆ ಹೆಸರು ವಾಸಿಯಾಗಿದೆ. ಎರಡು ನಗರಗಳು ಎಕ್ಸ್ಪ್ರೇಸ್ ವೇ ಆಧುನಿಕ ಸಂಪರ್ಕದಿಂದಾಗಿ ಈ ಭಾಗದ ಸುತ್ತಮುತ್ತಲ ಪ್ರದೇಶದ ಆರ್ಥಿಕ ಅಭಿವೃದ್ಧಿಯೂ ವೇಗ ಪಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿಯಲ್ಲಿ 8480 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 117 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ- 275ರ ಪ್ಯಾಕೇಜ್ ಸಮರ್ಪಣೆ ಹಾಗೂ 4130 ಕೋಟಿ ವೆಚ್ಚದಲ್ಲಿ 93 ಕಿ.ಮೀ ಉದ್ದದ ಮೈಸೂರು - ಕುಶಾಲನಗರ ವಿಭಾಗ ರಾಷ್ಟ್ರೀಯ ಹೆದ್ದಾರಿ -275ರ 4 ಪ್ಯಾಕೇಜ್ಗಳು ಸೇರಿ ಒಟ್ಟು 12 ಸಾವಿರ ಕೊಟಿಗೂ ಅಧಿಕ ಮೌಲ್ಯದ 210 ಕಿ.ಮೀ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ ಮೋದಿ, ಬೆಂಗಳೂರು - ಮೈಸೂರು ನಗರಗಳು ಆಧುನಿಕವಾಗಿ ಸಂಪರ್ಕ ಸಾಧಿಸುವಂತೆ ಮಾಡುವುದು ಬೇರೆ ಬೇರೆ ದೃಷ್ಟಿಕೋನಗಳಿಂದ ಮಹತ್ವ ಪೂರ್ಣವಾಗಿತ್ತು. ಆ ಕನಸು ನನಸಾಗಿದೆ ಎಂದರು.
ಬಹು ವರ್ಷಗಳಿಂದ ಎರಡು ನಗರಗಳಲ್ಲಿ ಪ್ರಯಾಣಿಕರಿಗೆ ವಾಹನಗಳ ದಟ್ಟಣೆ ಕಾರಣಕ್ಕೆ ದೂರುತ್ತಿದ್ದರು. ಆದರೀಗ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಕಾರಣದಿಂದ ಪ್ರಯಾಣದ ದೂರವನ್ನು ಒಂದೂವರೆ ಗಂಟೆಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯೂ ವೇಗ ಪಡೆಯಲು ಸಹಕಾರಿಯಾಗಲಿದೆ ಎಂದರು.
ದಳಪತಿಗಳ ಕೋಟೆಯಲ್ಲಿ ಮೋದಿ ರೋಡ್ ಶೋ... ಪ್ರಧಾನಿ ಕೊಂಡಾಡಿದ ಸಿಎಂ
ಎಕ್ಸ್ ಪ್ರೆಸ್ ವೇ ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಮೂಲಕ ಹಾದು ಹೋಗುತ್ತಿದೆ. ಇವುಗಳೂ ಐತಿಹಾಸಿಕ ಕಾರಣಕ್ಕೆ ಹೆಚ್ಚು ಪ್ರಸಿದ್ಧಿಯಾಗಿವೆ. ಇಲ್ಲಿನ ಪ್ರವಾಸೋದ್ಯಮವೂ ಬೆಳವಣಿಗೆ ಹೊಂದಲಿವೆ. ಮೈಸೂರುವರೆಗೆ ತೆರಳವುದು ಎಕ್ಸ್ ಪ್ರೆಸ್ ವೇನಿಂದ ಸುಲಭವಾಗಲಿದೆ. ಜೊತೆಗೆ ಕಾವೇರಿ ಮಾತೆಯ ಉಗಮ ಸ್ಥಾನಕ್ಕೆ ಹೋಗುವ ವ್ಯವಸ್ಥೆಯೂ ಸರಳವಾಗಲಿದೆ ಎಂದರು.
ಕೆಲ ದಿನಗಳಿಂದ ದೇಶದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಎಕ್ಸ್ ಪ್ರೆಸ್ ವೇಯ ಫೋಟೋಗಳು ಹೆಚ್ಚು ವೈರಲ್ ಆಗಿ ಚರ್ಚೆಗಳು ಆಗುತ್ತಿವೆ. ಈ ಹೆದ್ದಾರಿ ನೋಡಿ ದೇಶದ ನಿವಾಸಿಗಳು ಹಾಗೂ ಯುವಜನರಲ್ಲಿ ಹೆಮ್ಮೆ ಮತ್ತು ಗರ್ವ ಮೂಡಿ ಬಂದಿದೆ. ಇಂತಹ ಉತ್ತಮ ಮತ್ತು ಆಧುನಿಕ ಎಕ್ಸ್ ಪ್ರೆಸ್ ವೇಗಳು ಎಲ್ಲೆಡೆ ಆಗಬೇಕೆಂದು ಇಚ್ಛೇ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಈಗಷ್ಟೇ ಮೈಸೂರು- ಕುಶಾಲನಗರ ಚತುಷ್ಪಥ ಹೆದ್ದಾರಿಗೂ ಶಿಲಾನ್ಯಾಸ ನೆರವೇರಿಸಿದ್ದೇನೆ. ಈ ಯೋಜನೆಯೂ ಕ್ಷೇತ್ರದ ವಿಕಾಸಕ್ಕೆ ವೇಗದ ಗತಿ ನೀಡುವ ಜೊತೆಗೆ ಸಮೃದ್ಧಿಯ ರಹದಾರಿ ತೆರೆಯಲಿದೆ. ಚತುಷ್ಪಥ ಹಾಗೂ ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟುಅನುಕೂಲಗಳಾಗಲಿವೆ ಎಂದರು.
ಪಶ್ಚಿಮ ಘಟ್ಟಗಳಲ್ಲಿ ಮಳೆಗಾಲದ ವೇಳೆ ಭೂ ಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ಹೆದ್ದಾರಿ ಆಗಾಗ ಬಂದ್ ಆಗುತ್ತದೆ. ಈ ಕಾರಣಕ್ಕೆ ಬಂದರಿನ ಸಂಪರ್ಕ ಪ್ರಭಾವಕ್ಕೆ ಒಳಗಾಗುತ್ತದೆ. ಆದರೀಗ ಮೈಸೂರು ಕುಶಾಲನಗರ ಹೆದ್ದಾರಿಯ ಅಗಲೀಕರಣ ಈ ಸಮಸ್ಯೆಯನ್ನು ಬಗೆಹರಿಸಲಿದೆ. ಉತ್ತಮ ರಸ್ತೆ ಸಂಪರ್ಕದಿಂದ ಆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶದ ವಿಸ್ತಾರವೂ ವೇಗ ಪಡೆಯಲಿದೆ ಎಂದು ಮೋದಿ ತಿಳಿಸಿದರು.
ದೇಶದಲ್ಲಿ ದಶಕಗಳಿಂದಲೂ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿದ್ದವು. ಇದಕ್ಕೆ ವೇಗ ನೀಡಲು ಈ ಬಾರಿಯ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ಭದ್ರ ಮೇಲ್ದಂಡ ಯೋಜನೆಗಾಗಿ 5300 ಕೋಟಿ ನೀಡುವ ಘೋಷಣೆ ಮಾಡಲಾಗಿದೆ. ಇದರಿಂದ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಕೊಡುಗೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ನಾಲ್ವಡಿ- ವಿಶ್ವೇಶ್ವರಯ್ಯ ಅವರಿಗೆ ನಿತ್ಯವೂ ಗೌರವ ಸಲ್ಲಬೇಕು:
ದೇಶದಲ್ಲಿ ಮೂಲ ಸೌಲಭ್ಯ ಕುರಿತು ಚರ್ಚೆಗಳಾದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯರವರು ಹೆಸರು ಅಗ್ರಗಣ್ಯದಲ್ಲಿ ಇರುತ್ತದೆ. ಇದೇ ಪುಣ್ಯಭೂಮಿಯ ಸುಪುತ್ರರಾದ ಈ ಮಹಾನ್ ಪುರುಷರು ದೇಶಕ್ಕೆ ಹೊಸ ದೃಷ್ಟಿಮತ್ತು ಶಕ್ತಿ ನೀಡಿದವರು. ಇಂತಹ ಪೂರ್ವಜರ ತಪಸ್ಸಿನ ಫಲದ ಲಾಭವನ್ನು ಇಂದಿನ ಪೀಳಿಗೆ ಪಡೆಯುತ್ತಿದೆ. ಇಂತಹ ಮಹಾನ್ ವೀರರಿಗೆ ನಿತ್ಯವೂ ನಮನ ಸಲ್ಲಿಸಬೇಕು ಎಂದು ಬಣ್ಣಿಸಿದರು.
ಇಂತಹ ಮಹಾನ್ ವ್ಯಕ್ತಿಗಳ ಪ್ರೇರಣೆಯಿಂದಾಗಿ ಆಧುನಿಕ ಮೂಲ ಸೌಕರ್ಯಗಳ ಮೇಲೆ ಕೆಲಸಗಳು ನಡೆಯುತ್ತಿವೆ. ಭಾರತ್ ಮಾಲಾ ಮತ್ತು ಸಾಗರ್ ಮಾಲಾ ಯೋಜನೆಯಿಂದ ಕರ್ನಾಟಕ ಜೊತೆಗೆ ದೇಶವೂ ಬದಲಾಗುತ್ತಿದೆ. ಪ್ರಪಂಚ ಕೊರೋನಾ ಸಂಕಷ್ಟಕಾಲದಲ್ಲಿ ಹೋರಾಡುವಾಗಲೂ ಭಾರತದಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೇವು. ಈ ಬಾರಿ ಬಜೆಟ್ನಲ್ಲಿ 10 ಲಕ್ಷ ಕೋಟಿಯನ್ನು ಮೂಲಸೌಕರ್ಯಕ್ಕಾಗಿ ಮೀಸಲಿಟ್ಟಿದ್ದೇವೆ.
ಮೂಲ ಸೌಲಭ್ಯಗಳು ತನ್ನೊಂದಿಗೆ ಸೌಕರ್ಯ ಮಾತ್ರ ತರುವುದಿಲ್ಲ. ಉದ್ಯೋಗ, ಆದಾಯ, ಹೂಡಿಕೆಯ ಸಾಧನಗಳನ್ನು ತರುತ್ತದೆ. ಕರ್ನಾಟಕದಲ್ಲಿ ಕೆಲ ವರ್ಷಗಳಲ್ಲಿ 1 ಲಕ್ಷ ಕೋಟಿಗೂ ಅಧಿಕ ಹಣವನ್ನು ಹೆದ್ದಾರಿ ಸಂಬಂಧಿತ ಯೋಜನೆಗಳಿಗಾಗಿ ವಿನಿಯೋಗ ಮಾಡಲಾಗಿದೆ ಎಂದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ನಿರಂತರ ಪ್ರಯತ್ನ ನಿಮ್ಮ ಪ್ರೀತಿಯ ಋುಣವನ್ನು ಹಿಂದಿರುಗಿಸುವುದಾಗಿದೆ. ವೇಗದ ಅಭಿವೃದ್ಧಿ ಮೂಲಕ ಅದನ್ನು ಈಡೇರಿಸುತ್ತೇವೆ. ಸಾವಿರಾರು ಕೋಟಿಯ ಅಭಿವೃದ್ಧಿಗೆ ಶಂಕುಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸುತ್ತಿರುವುದು ಅದರ ಭಾಗವಾಗಿದೆ. ತಾಯಿ ಭುವನೇಶ್ವರಿ, ಮೇಲುಕೋಟೆ ಚಲುವನಾರಾಯಣ ಸ್ವಾಮಿ ಹಾಗೂ ಆದಿ ಚುಂಚನಗಿರಿ ವಂದನೆ ಸಲ್ಲಿಸಿ ಆಶೀರ್ವಾದ ಬೇಡುತ್ತೇನೆ. ಕೆಲ ದಿನಗಳಿಂದ ಕರ್ನಾಟಕದ ಬೇರೆ ಪ್ರದೇಶಗಳ ಜನರ ದರ್ಶನದ ಅವಕಾಶ ಸಿಗುತ್ತಿದೆ. ಎಲ್ಲೆಡೆ ನಾಡಿನ ಜನರು ಅಭೂತಪೂರ್ವ ಆಶೀರ್ವಾದ ಮಾಡುತ್ತಿದ್ದಾರೆ. ಮಂಡ್ಯ ಜನರ ಪ್ರೀತಿಯೂ ಸಿಹಿ ಮಾಧುರ್ಯದಿಂದ ಕೂಡಿದೆ. ಸಕ್ಕರೆ ನಗರ ಮಧುರ ಮಂಡ್ಯಕ್ಕೆ ಶಿರ ಭಾಗಿ ನಮಸ್ಕಾರ ಮಾಡುತ್ತೇನೆ ಅಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.