ಬೆಂಗಳೂರಲ್ಲಿ ಶವ ಅಂತ್ಯಕ್ರಿಯೆಗೂ ಚಿಂತೆ: ಕೆಂಗೇರಿ ವಿದ್ಯುತ್ ಚಿತಾಗಾರ ಮುಚ್ಚಿದ ಬಿಬಿಎಂಪಿ!
ಬೆಂಗಳೂರಿನ ಕೆಂಗೇರಿಯ ವಿದ್ಯುತ್ ಚಿತಾಗಾರವನ್ನು ಸೆ.23ರಿಂದ ಸೆ.30ರವರೆಗೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುತ್ತಿದ್ದು, ಬದಲಿ ಚಿತಾಗಾರ ಬಳಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ಬೆಂಗಳೂರು (ಸೆ.21): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 1.2 ಕೋಟಿಗೂ ಅಧಿಕ ಜನರು ವಾಸವಾಗಿದ್ದಾರೆ. ಇಲ್ಲಿ ಪ್ರತಿನಿತ್ಯ ಹತ್ತಾರು ಜನರು ಸಾವನ್ನಪ್ಪುತ್ತಿದ್ದಾರೆ. ಶವಗಳನ್ನು ಅಂತ್ಯಕ್ರಿಯೆ ಮಾಡಲು ವಿದ್ಯುತ್ ಚಿತಾಗಾರ ಹಾಗೂ ಸ್ಮಶಾನಗಳನ್ನು ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ವಹಣೆ ಮಾಡುತ್ತಿದೆ. ಆದರೆ, ಈಗ ಸೆ.23ರಿಂದ ಸೆ.30ರವರೆಗೆ ಕೆಂಗೇರಿಯ ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದ್ದು, ಬದಲಿ ಚಿತಾಗಾರಗಳನ್ನು ಬಳಕೆ ಮಾಡುವಂತೆ ಪಾಲಿಕೆ ಸೂಚನೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಸದರಿ ಚಿತಾಗಾರವನ್ನು ಸೆ.23ರಿಂದ ಸೆ.30ರವರೆಗೆ ಒಟ್ಟು 8 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಕೆಂಗೇರಿ ವಿದ್ಯುತ್ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಕಾರಣ ಮೃತ ದೇಹದ ದಹನ ಕ್ರಿಯೆಗಾಗಿ ಸಾರ್ವಜನಿಕರು ಸಮೀಪದಲ್ಲಿರುವ ಸುಮ್ಮನಹಳ್ಳಿ, ಮೇಡಿ ಅಗ್ರಹಾರ ಅಥವಾ ಪೀಣ್ಯ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಕಾರ್ಯಪಾಲಕ ಅಭಿಯಂತರರು (ವಿದ್ಯುತ್-ರಾಜರಾಜೇಶ್ವರಿ ನಗರ ವಲಯ) ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಬೆಂಗಳೂರು ಜನರಿಗೆ ಕುಡಿಯಲು ಕಾವೇರಿ ನೀರು ಉಳಿಸಿ: ನೀರಾವರಿ ನಿಗಮಕ್ಕೆ ಬಿಡಬ್ಲ್ಯೂಎಸ್ಎಸ್ಬಿ ಮನವಿ
ಬೆಂಗಳೂರಲ್ಲಿ ಕಟ್ಟಡ ತ್ಯಾಜ್ಯ ಸುರಿದರೆ 10 ಸಾವಿರ ರೂ. ದಂಡ: ಬೆಂಗಳೂರು ನಗರದ ಹೊರವಲಯದಲ್ಲಿ ಪಾಲಿಕೆಯ ವ್ಯಾಪ್ತಿಯ ಹೊರಗಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಬದಿಯಲ್ಲಿ/ಇಕ್ಕೆಲಗಳಲ್ಲಿ ಅನಧಿಕೃತ ಅನಾಮಧೇಯ ವ್ಯಕ್ತಿಗಳಿಂದ/ಏಜೆನ್ಸಿಗಳಿಂದ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಯು ಅತಿರೇಕವಾಗಿ ನಡೆಯುತ್ತಿರುವುದನ್ನು ಗಮನಿಸಲಾಗಿದ್ದು, ಈ ಪ್ರವೃತ್ತಿಯು ನಗರಕ್ಕೆ ಸಂಚರಿಸುವ ಸಾರ್ವಜನಿಕರಲ್ಲಿ ಬೆಂಗಳೂರು ನಗರದ ಸ್ವಚ್ಛತೆಯ ಕುರಿತು ಋಣಾತ್ಮಕ ಮನೋಭಾವನೆ ಉಂಟುಮಾಡುವ ಜೊತೆಗೆ ನಗರದ ಘನತೆ ಕುಂದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣೆಯ ಕುರಿತಂತೆ ಉತ್ಪಾದಕರು/ಸಂಗ್ರಹಣಾದಾರರು/ಸಾಗಾಣಾದಾರರು/ವಿಲೇವಾರಿದಾರರು ಬಿಬಿಎಂಪಿ ನಿಯಮ ಪಾಲನೆಗೆ ಸೂಚನೆ ನೀಡಿದೆ.
ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ವೈಜ್ಞಾನಿಕ ಅಧಿಕೃತ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯ ಪ್ರಾಥಮಿಕ ಜವಾಬ್ದಾರಿಯು ತ್ಯಾಜ್ಯ ಉತ್ಪಾದಕರದ್ದಾಗಿರುತ್ತದೆ. ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಅಧಿಕೃತವಾಗಿ ಗುರುತಿಸಿದ ಸಂಸ್ಕರಣ ಘಟಕಗಳಿಗೆ ಸಾಗಿಸಿ ವಿಲೇವಾರಿಯನ್ನು ಕೈಗೊಳ್ಳಬೇಕಾಗಿರುತ್ತದೆ. ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯವನ್ನು ಅನಧಿಕೃತವಾಗಿ ಎಲ್ಲೆಂದರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳ ಬದಿಯಲ್ಲಿ ಇಕ್ಕೆಲಗಳಲ್ಲಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಅಥವಾ ಕ್ವಾರಿಗಳಲ್ಲಿ ಸುರಿಯುವುದನ್ನು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಗಳು-2016ರನ್ವಯ ನಿಷೇಧಿಸಲಾಗಿದ್ದು, ದಂಡಾರ್ಹ ಮತ್ತು ಕಾನೂನಾತ್ಮಕವಾಗಿ ಅಪರಾಧವಾಗಿದೆ.
Bengaluru: ನೀನಿಲ್ಲದಿದ್ರೆ ಸಾಯ್ತೀನೆಂದ ಪ್ರೇಯಸಿಗೆ ವಿಷ ತಂದುಕೊಟ್ಟ ಸಾಯಿಸಿದ ಟಿಕ್ಟಾಕ್ ಪ್ರೇಮಿ
ಕಾನೂನು ಕ್ರಮದ ಜೊತೆಗೆ ವಾಹನಗಳ ಸೀಜ್: ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ತ್ಯಾಜ್ಯ ಉತ್ಪಾದಕರನ್ನೊಳಗೊಂಡಂತೆ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣೆ/ವಿಲೇವಾರಿದಾರರಿಗೂ ಸಹ ನಿಯಮಾವಳಿಗಳನ್ವಯ (ರೂ.10,000 ಪ್ರತಿ ಟನ್ಗೆ) ದಂಡವನ್ನು ವಿಧಿಸಲಾಗುವುದು ಮತ್ತು ಪರಿಸರ (ಸಂರಕ್ಷಣೆ) ಕಾಯ್ದೆ 1986ರನ್ವಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖೇನ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು. ನಗರದ ಹೊರವಲಯದಲ್ಲಿ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಅನಧಿಕೃತ ವಿಲೇವಾರಿಗಾಗಿ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ಎಲ್ಲಾ ಸೂಪರವೈಸರ್/ಕಿರಿಯ ಆರೋಗ್ಯ ಪರಿವೀಕ್ಷಕರು/ವಾರ್ಡ ಮಾರ್ಷಲ್ಸ್/ ಮಾರ್ಷಲ್ ಸೂಪರವೈಸರ್ ರವರುಗಳ ಮುಖೇನ ತಪಾಸಣೆಗೆ ಒಳಪಡಿಸಿ ನಿಯಮಾವಳಿಗಳನ್ವಯ ದಂಡವನ್ನು ವಿಧಿಸಿ ಸದರಿ ವಾಹನಗಳನ್ನು ವಶಪಡಿಸಿಕೊಂಡು ಹತ್ತಿರದ ಪೋಲಿಸ್ ಠಾಣೆಯ ಸುಪರ್ದಿಗೆ ಮುಂದಿನ ಕ್ರಮಕ್ಕಾಗಿ ನೀಡಲಾಗುವುದು.