ಬೆಳಗಾವಿ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಭಿನ್ನಮತ! ಲಕ್ಷ್ಮೀ ಹೆಬ್ಬಾಳಕರ್, ಸತೀಶ್ ಜಾರಕಿಹೊಳಿ ಮುಸುಕಿನ ಗುದ್ದಾಟ! ನಾಯಕರ ಕಿತ್ತಾಟಕ್ಕೆ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಂದೂಡಿಕೆ! ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ಪಿಎಲ್ ಡಿ ಬ್ಯಾಂಕ್! ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ! ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಹೈಡ್ರಾಮಾ

ಬೆಳಗಾವಿ(ಆ.28): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಎಲ್ಲಾ ಎಂಬುದು ಸಾಬೀತಾಗಿದೆ. ಮತ್ತೊಮ್ಮೆ ಕೈ ಭಿನ್ನಮತ ಭುಗಿಲೆದಿದ್ದು, ಇಂದು ನಡೆಯಬೇಕಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಶಾಸಕ ಸತೀಶ್ ಜಾರಕಿಹೊಳಿ ನಡುವಿನ ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ. ಚುನಾವಣೆ ಮುಂದೂಡಲು ಬೆಳಗಾವಿ ತಹಸೀಲ್ದಾರ ಮಂಜುಳಾ ಕಾನೂನು ಸುವ್ಯವಸ್ಥೆ ಕಾರಣವನ್ನ ನೀಡಿದ್ದಾರೆ. 14 ಸದಸ್ಯರ ಬಲವುಳ್ಳ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ನಲ್ಲಿ, 9 ಜನರು ಲಕ್ಷ್ಮಿ ಹೆಬ್ಬಾಳಕರ ಜೊತೆಗೆ ಇದ್ದಾರೆ.

ಆದರೂ ಪರಶುರಾಮ ಪಾಟೀಲ್ ಸೇರಿ ನಾಲ್ವರು ನಿರ್ದೇಶಕರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆರೋಪಿಸಿ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೇ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ ತಹಸೀಲ್ದಾರ ಕಚೇರಿ ಎದುರು 9 ಜನ ನಿರ್ದೇಶಕರು ಸೇರಿ ನೂರಾರು ಜನ ಬೆಂಬಲಿಗರೊಂದಿಗೆ ಪ್ರತಿಭಟನೆ ಆರಂಭಿಸಿದರು. 

ಹೆಬ್ಬಾಳಕರ ಅಹೋರಾತ್ರಿ ಪ್ರತಿಭಟನೆ ಆರಂಭಿಸುತ್ತಿದ್ದಂತೇ, ಇತ್ತ ಸತೀಶ್ ಜಾರಕಿಹೊಳಿ ಬೆಂಬಲಿಗರೂ ಸಹ ಬೆಳಗಾವಿ ತಹಸೀಲ್ದಾರ ಕಚೇರಿಯ ಗೇಟ್ ಹೊರಗೆ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಎರಡು ಬಣದ ಮುಖಂಡರು, ಕಾರ್ಯಕರ್ತರು ಪರಸ್ಪರರ ವಿರುದ್ಧ ಘೋಷಣೆ ಕೂಡ ಕೂಗಿದರು.

ಜಾರಕಿಹೊಳಿ ಬೆಂಬಲಿಗರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ಕೂಡ ನಡೆಯಿತು. ನಿಗದಿಯಂತೆ ಇವತ್ತೆ ಚುನಾವಣೆ ನಡೆಸಲು ಹೆಬ್ಬಾಳಕರ್ ಪಟ್ಟು ಹಿಡಿದರು. ಆದರೆ ಅಧಿಕಾರಿಗಳಿಂದ ಸೂಕ್ತ ಭರವಸೆ ಸಿಕ್ಕ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಕಾಣದ ಕೈಗಳು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದು, ತಮ್ಮನ್ನು ಲಿಂಗಾಯತ ನಾಯಕಿಯನ್ನಾಗಿ ಬೆಳೆಯಲು ಬಿಡುತ್ತಿಲ್ಲ ಎಂದು ಈ ವೇಳೆ ಲಕ್ಷ್ಮೀ ಹೆಬ್ಬಾಳಕರ್ ಗಂಭೀರ ಆರೋಪ ಮಾಡಿದರು.