ಕೆಇಎ ನಡೆಸಿದ ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಬಂಧಿತ ಆರೋಪಿ.

ಬೆಳಗಾವಿ (ಆ.10):  ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣದ ನಡುವೆಯೇ ಮತ್ತೊಂದು ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಈಗ ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿನ ನೇಮಕಾತಿಗಳ ಅಕ್ರಮಗಳು ಸಾಲು ಸಾಲಾಗಿ ನಡೆಯುತ್ತಿವೆಯೇ ಎಂಬ ಅನುಮಾನ ಕೂಡ ದಟ್ಟವಾಗಿದೆ. ಆ.7, 2022ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಮದಿಹಳ್ಳಿ (20) ಬಂಧಿತ ಆರೋಪಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ನಡೆಸಿತು. ಈ ವೇಳೆ ಪರೀಕ್ಷೆಯಲ್ಲಿ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಚ್‌ವಾಚ್‌ ಬಳಸಿ ಪರೀಕ್ಷಾ ಅಕ್ರಮ ಎಸಗುತ್ತಿದ್ದನು. ಈ ವೇಳೆ ಬಂಧಿತ ಆರೋಪಿ ಗೋಕಾಕ ನಗರದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿ ಸ್ಮಾರ್ಚ್‌ವಾಚ್‌ನಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಕಳುಹಿಸುತ್ತಿದ್ದ. ಬಳಿಕ ಅದೇ ಸ್ಮಾರ್ಚ್‌ವಾಚ್‌ಗೆ ಬರುವ ಉತ್ತರವನ್ನು ನೋಡಿ ಪರೀಕ್ಷೆ ಬರೆಯುತ್ತಿದ್ದನು. ಇದನ್ನು ಸಿಸಿ ಕ್ಯಾಮರಾದಲ್ಲಿ ಗಮನಿಸಿದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ಗೊತ್ತಾಗುತ್ತಿದ್ದಂತೆ ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಕೆಪಿಟಿಸಿಎಲ… ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದ ಸಂದೇಹಗಳ ಹಿನ್ನೆಲೆಯಲ್ಲಿ ಬೆಳಗಾವಿ ಎಸ್ಪಿ ಡಾ.ಸಂಜೀವ್‌ ಪಾಟೀಲ ಈಗಾಗಲೇ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯಿಂದ ಮತ್ತಷ್ಟುಅಕ್ರಮಗಳು ಹೊರಬರುವ ಸಾಧ್ಯತೆಗಳಿದೆ. ಈ ಕುರಿತು ಗೋಕಾಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ; ಬೆಳಗಾವಿ ಜಿಲ್ಲೆಯ ಗೋಕಾಕ ಮೂಲದ ವ್ಯಕ್ತಿಯೊಬ್ಬ ಕೆಪಿಟಿಸಿಎಲ್‌ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯೋಜನೆ ರೂಪಿಸಿದ್ದಾನೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮಕ್ಕೆ ವೇದಿಕೆ ಸಜ್ಜಾಗಿದೆ ಎಂಬ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಸಿಐಡಿ ಮರುಕ್ಷಣವೇ ತಮಗೆ ಸಿಕ್ಕಂತಹ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ, ಜಿಲ್ಲಾ ಎಸ್ಪಿಗೆ ರವಾನಿಸಿತ್ತು.

ಶಕ್ತಿಶಾಲಿ ಜಾಮರ್‌ ಅಳವಡಿಕೆ: ಅಕ್ರಮದ ಸುಳಿವು ದೊರಕಿದ್ದರಿಂದ ಎಚ್ಚೆತ್ತ ಜಿಲ್ಲಾಡಳಿತ ಚಿಂಚೋಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ 2 ಕೋಣೆಗೆ ಒಂದರಂತೆ ಶಕ್ತಿಶಾಲಿ ಜಾಮರ್‌ ಅಳವಡಿಸಿದ್ದಲ್ಲದೆ ಲೋಹ ಶೋಧಕಗಳನ್ನು ಬಳಸಿ ಪರೀಕ್ಷಾರ್ಥಿಗಳನ್ನೆಲ್ಲ ತಪಾಸಣೆಗೊಳಪಡಿಸಿ ಪರೀಕ್ಷೆಯನ್ನು ಬಿಗಿಯಾಗಿ ನಡೆಸಿದೆ.

ಕಿಂಗ್‌ಪಿನ್‌ ಪರಾರಿ: ಸಿಐಡಿ ಅಧಿಕಾರಿಗಳ ತಂಡ ಹಾಗೂ ಜಿಲ್ಲಾ ಪೊಲೀಸ್‌ ತಂಡ ಎಚ್ಚೆತ್ತು ಪರೀಕ್ಷೆಯ ದಿನ ಖಚಿತ ಮಾಹಿತಿಯಂತೆ ಅಕ್ರಮ ಎಸಗಲು ಸಜ್ಜಾಗಿದ್ದ ಕಿಂಗ್‌ಪಿನ್‌ ಬಂಧನಕ್ಕೆ ಸಿದ್ಧರಾಗುತ್ತಿದ್ದಂತೆಯೇ ಆತ ಜೇವರ್ಗಿ ಬಳಿಯೇ ತನ್ನ ಮೋಬೈಲ್‌ ಬಂದ್‌ ಮಾಡಿಕೊಂಡು ಪರಾರಿಯಾಗಿದ್ದ.

Teachers Recruitment; ಮಾಸಾಂತ್ಯಕ್ಕೆ 15000 ಶಿಕ್ಷಕರ ಪರೀಕ್ಷೆ ರಿಸಲ್ಟ್‌

ಆತನ ಅಭ್ಯರ್ಥಿಗಳು ಯಾರು?: ಈ ವ್ಯಕ್ತಿ ನಿಜವಾಗಿಯೂ ಬ್ಲೂಟೂತ್‌ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಜ್ಜಾಗಿದ್ದಾನೆಯೇ? ಹಾಗಾದರೆ ಆತನ ಅಭ್ಯರ್ಥಿಗಳು ಯಾರು? ಯಾವ ಪರೀಕ್ಷಾ ಕೇಂದ್ರದಲ್ಲಿದ್ದರು? ಅದೆಷ್ಟು ಜನರಿದ್ದರು? ಇವೆಲ್ಲವೂ ತನಿಖೆ ನಂತರವೇ ಬಹಿರಂಗವಾಗಬೇಕಿದೆ. ಕಿಂಗ್‌ಪಿಎನ್‌ ಎಂದು ಹೇಳಲಾಗಿರುವ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

JOB ALERT: ಮದ್ರಾಸ್ ಐಐಟಿ ವಿದ್ಯಾರ್ಥಿಗಳಿಗೆ ಬಂಪರ್ ಜಾಬ್ ಆಫರ್ಸ್!

ಈ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿ ಯಶವಂತ ಗುರುಕರ್‌, ಚಿಂಚೋಳಿಯಲ್ಲಿ ಅಕ್ರಮ ನಡೆಯಬಹುದು ಎಂಬ ಗುಮಾನಿ ಇದೆ ಎಂದು ಸಿಐಡಿಯಿಂದ ತಮಗೆ ಸುಳಿವಿತ್ತು. ಹೀಗಾಗಿ ಎಂದಿಗಿಂತ ಪರೀಕ್ಷೆಯನ್ನು ಚಿಂಚೋಳಿ ಸೇರಿದಂತೆ ಎಲ್ಲಾ ಕೇಂದ್ರಗಳಲ್ಲಿಯೂ ಕಟ್ಟುನಿಟ್ಟಾಗಿ ನಡೆಸಿದ್ದೇವೆ. ಪ್ರತಿ 2 ಕೋಣೆಗೆ 1ರಂತೆ ಜಾಮರ್‌, ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ ಬಳಸಿದ್ದೇವೆ. ಜಾಮರ್‌ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದರ ಖಚಿತತೆಗಾಗಿಯೂ ತಾವು ತಹಸೀಲ್ದಾರ್‌ ನೇತೃತ್ವದಲ್ಲಿ ತಂಡ ರಚಿಸಿ ಪರಿಶೀಲಿಸಿದ್ದೇವೆ. ಚಿಂಚೋಳಿ ಸೇರಿದಂತೆ ಎಲ್ಲೆಡೆ ಜಾಮರ್‌ ಕೆಲಸ ಮಾಡಿವೆ. ಜಾಮರ್‌ ಇದ್ದ ಪ್ರದೇಶದಲ್ಲಿ 40 ಅಡಿ ದೂರದಲ್ಲಿ ಯಾವುದೇ ಮೊಬೈಲ್‌ ಸಿಗ್ನಲ್‌ ಪರೀಕ್ಷೆ ವೇಳೆ ಇರರಲಿಲ್ಲ ಎಂಬುದು ಖಿತಪಡಿಸಿದ್ದೇನೆ. ಇಷ್ಟೆಲ್ಲಾ ಕಣ್ಣಾಗವಲಿನಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ಡಿಸಿ ಯಶವಂತ ಗುರುಕರ್‌ ಹೇಳಿದ್ದಾರೆ.