ನನಗೆ ಅಧಿಕಾರ ಮುಖ್ಯವಲ್ಲ, ನನ್ನ ಬಳಿ ಬಂದ ಬಿಜೆಪಿ ಶಾಸಕರನ್ನು ವಾಪಸ್‌ ಕಳಿಸಿದ್ದೀನಿ. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕಾಗಿ ಬೇರೆ ಪಕ್ಷದವರನ್ನು ಸೆಳೆಯುವ ರೋಗದಿಂದ ಈ ಉಪಚುನಾವಣೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಮೈಸೂರು(ನ.29): ನನಗೆ ಅಧಿಕಾರ ಮುಖ್ಯವಲ್ಲ, ನನ್ನ ಬಳಿ ಬಂದ ಬಿಜೆಪಿ ಶಾಸಕರನ್ನು ವಾಪಸ್‌ ಕಳಿಸಿದ್ದೀನಿ. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕಾಗಿ ಬೇರೆ ಪಕ್ಷದವರನ್ನು ಸೆಳೆಯುವ ರೋಗದಿಂದ ಈ ಉಪಚುನಾವಣೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ಧರ್ಮಾಪುರ, ಕರಿಮುದ್ದನಹಳ್ಳಿ, ಸಿಂಗರಮಾರನಹಳ್ಳಿ, ಅಸ್ವಾಳು, ಮಾರಗೌಡನಹಳ್ಳಿ ಮುಂತಾದ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಸೋಮಶೇಖರ್‌ ಪರ ಗುರುವಾರ ರೋಡ್‌ ಶೋ ನಡೆಸುವ ಮೂಲಕ ಮತಯಾಚಿಸಿದರು. ಸರ್ಕಾರ ಉಳಿಸಿಕೊಳ್ಳಲು ನಾನು 15 ಬಿಜೆಪಿ ಶಾಸಕರನ್ನು ಸೆಳೆಯುವುದು ದೊಡ್ಡ ವಿಷಯವೆನಿರಲಿಲ್ಲ. ಆದರೆ ಬಿಜೆಪಿಯವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಅಪರೇಷನ್‌ ಕಮಲ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ನೊಂದಿಗಲ್ಲ:

ನನ್ನ ಒಪ್ಪಂದ, ಒಳ ಒಪ್ಪಂದ ಏನಿದ್ದರೂ ನನ್ನ ಮತದಾರರೊಂದಿಗೇ ಹೊರತು ಕಾಂಗ್ರೆಸ್‌ ಪಕ್ಷದೊಂದಿಗೆ ಅಲ್ಲ. ತಮ್ಮ 14 ತಿಂಗಳ ಅಧಿಕಾರಾವಧಿಯಲ್ಲಿ 25 ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಯೋಜನೆ ಸೌಲಭ್ಯ ದೊರೆತಿದೆ. ಹುಣಸೂರು ತಾಲೂಕಿನಲ್ಲಿ 13,000 ರೈತ ಕುಟುಂಬಗಳು ಸಾಲದಿಂದ ಮುಕ್ತರಾಗಿದ್ದಾರೆ. ವೃದ್ಧಾಪ್ಯ ಮಾಸಾಶನ ಏರಿಕೆ, ಫುಟ್‌ಪಾತ್‌ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಇವೇ ಮುಂತಾದ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ ಎಂದಿದ್ದಾರೆ.

ನೈತಿಕತೆ ಪ್ರಶ್ನೆಯನ್ನೊಳಗೊಂಡ ಚುನಾವಣೆ: ಉಮಾಶ್ರೀ

ಪಕ್ಷದ ಅಭ್ಯರ್ಥಿ ಸೋಮಶೇಖರ್‌, ಶಾಸಕ ಅಶ್ವಿನ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಬೋಜೇಗೌಡ, ಜಿಪಂ ಸದಸ್ಯ ಎಂ.ಬಿ. ಸುರೇಂದ್ರ, ಮುಖಂಡರಾದ ಗಣೇಶ್‌, ಪಾಪಣ್ಣ, ವೆಂಕಟೇಶ್‌, ಧಣಿಕುಮಾರ್‌ ಇದ್ದರು.

ಪ್ರಜಾತಂತ್ರದ ಕಗ್ಗೊಲೆ

ಬಿಜೆಪಿ ಅನರ್ಹರನ್ನು ಪಕ್ಷದ ಅಭ್ಯರ್ಥಿಗಳನ್ನಾಗಿಸಿಕೊಂಡು ಮತಯಾಚನೆ ನಡೆಸಿದೆ. ಪ್ರಜಾತಂತ್ರದ ಕಗ್ಗೊಲೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕೆನ್ನುವುದೇ ನನ್ನ ಗುರಿ. ಕಾಂಗ್ರೆಸ್‌ ಪಕ್ಷದ ಉದ್ದೇಶ ಅವರಿಗೆ ಬಿಟ್ಟಿದ್ದು. ಈ ನಡುವೆ ಜೆಡಿಎಸ್‌- ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಲು ಹೊರಟಿವೆ ಎಂಬ ಗುಲ್ಲನ್ನು ಹರಡಲಾಗುತ್ತಿದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಮೊರೆ ಹೋಗಬೇಕಿಲ್ಲ. ಪಕ್ಷದ ಶಕ್ತಿ ನನಗೆ ಗೊತ್ತಿದೆ. ನನ್ನ ಒಪ್ಪಂದವೇನಿದ್ದರೂ ಈ ನನ್ನ ಮತದಾರರೊಂದಿಗೆ ಮಾತ್ರ. ಅವರು ನನ್ನ ಕೈಹಿಡಿಯಲಿದ್ದಾರಂದು ವಿಶ್ವಾಸ ವ್ಯಕ್ತಪಡಿಸಿ, ಪಕ್ಷದ ಅಭ್ಯರ್ಥಿ ಸೋಮಶೇಖರ್‌ಯನ್ನು ಬೆಂಬಲಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿರಿ ಎಂದಿದ್ದಾರೆ.