ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಾವೆಲ್ಲ ದುಡಿಯಬೇಕೆಂದು ಬೆಳ್ಳಾವಿಯ ಕಾರದೇಶ್ವರ ಮಠದ ಅಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ ತಿಳಿಸಿದರು.

 ತುಮಕೂರು: ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧರಾಗಿ ನಾವೆಲ್ಲ ದುಡಿಯಬೇಕೆಂದು ಬೆಳ್ಳಾವಿಯ ಕಾರದೇಶ್ವರ ಮಠದ ಅಧ್ಯಕ್ಷ ಕಾರದ ವೀರಬಸವ ಮಹಾಸ್ವಾಮಿ ತಿಳಿಸಿದರು.

Add Asianetnews Kannada as a Preferred SourcegooglePreferred

ತಾಲೂಕಿನ ಹೆಬ್ಬೂರು ವಲಯದ ಸಿರಿವಾರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ವತಿಯಿಂದ ನಡೆದ ಸಾಮೂಹಿಕ ಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮುಖಾಂತರ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ಹಲವಾರು ರೀತಿಯ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಮ್ಮ ಸಂಸ್ಥೆಯ ಕಾರ್ಯಕರ್ತರ ಮೂಲಕ ತಮ್ಮ ಟ್ರಸ್ಟ್ ಮುಖಾಂತರ ಪ್ರತಿಯೊಂದು ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ಅಬಲರಿಗೆ ಸಬಲರಾಗಲು ಆರ್ಥಿಕ ಚೇತನ ತುಂಬಿ ಬದುಕು ಕಟ್ಟಿಕೊಡುವ ಕೆಲಸವನ್ನು ಮಾಡುತ್ತಿದೆ ಎಂದರು.

ರಾಮೋನಹಳ್ಳಿಯ ಸಿದ್ದಲಿಂಗೇಶ್ವರ ಮಠದ ಶಿವಪಂಚಾಕ್ಷರಿ ಮಹಾಸ್ವಾಮಿ ಆಶೀರ್ವಚನ ನೀಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಎಲ್ಲರೂ ಮೆಚ್ಚುವಂತದ್ದು, ದೇವರ ಕಾರ್ಯಕ್ರಮ ನಿರಂತರ ನಡೆಯುತ್ತಿದ್ದರೆ ಊರಿಗೆ, ನಾಡಿಗೆ, ಜನಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಮಾಜ ಸೇವಕ ಚಿದಾನಂದ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ನಾಡಿಗೆ ಹಲವಾರು ಅಭಿವೃದ್ಧಿ ಕಾಯಕ್ರಮಗಳು ಆಗುತ್ತಿವೆ. ಉಚಿತ ಶುದ್ಧ ಕುಡಿವ ನೀರು, ದೇಗುಲ ಜೀರ್ಣೋದ್ಧಾರ, ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ ಆರ್ಥಿಕ ಸಹಾಯ, ಅಬಲರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಪ್ರತಿ ತಿಂಗಳು ಮಾಸಾಶನ ಕಾರ್ಯಗಳು ನಡೆಯುತ್ತಿರುವುದು ಇಡೀ ಸಮಾಜಕ್ಕೆ ಸಹಾಯವಾಗಿದೆ. ಅತ್ಯಂತ ಶಿಸ್ತುಬದ್ಧವಾಗಿ ನೂರಕ್ಕೆ ನೂರರಷ್ಟು ಸಾಲದ ಮರುಪಾವತಿಗೆ ಇಡೀ ದೇಶದಲ್ಲಿಯೇ ಧರ್ಮಸ್ಥಳ ಸಂಘ ಮಾದರಿಯಾಗಿದೆ. ಇಚ್ಛಾಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಧರ್ಮಸ್ಥಳ ಸಂಘ ತೋರಿಸಿಕೊಟ್ಟಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.

ತಾಲೂಕು ಯೋಜನಾಧಿಕಾರಿ ಸುನಿತಾಪ್ರಭು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಆರ್ಥಿಕ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮ ನಡೆಲಾಗುತ್ತಿದೆ. ಎಲ್ಲರೂ ಸಮಾಜದ ಏಳ್ಗೆಗಾಗಿ, ಸಮಾಜದ ಉದ್ಧಾರಕ್ಕಾಗಿ ದುಡಿಯಬೇಕು, ಸಾಲ ಪಡೆಯುವುದು ಮುಖ್ಯವಲ್ಲ. ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮುಖ್ಯ. ಪೂಜ್ಯರ ಆಶೀರ್ವಾದದಿಂದ ಇಂದು ಇಷ್ಟು ಸಾಧಿಸಿದ್ದೇವೆ, ಈ ಸಾಧನೆಗೆ ಸಂಘದ ಎಲ್ಲಾ ಸದಸ್ಯರು ಸಹಕಾರ ಎಂದು ಹೇಳಿದರು.

ವೇದಿಕೆಯಲ್ಲಿ ಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ಶ್ರೀ ಸತ್ತಿಗಪ್ಪ, ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಮ್ಮ, ಪಿ.ಎಸ್.ಐ.ಬೈರೇಗೌಡ, ಗಂಗಾಧರಶಾಸ್ತ್ರಿ, ಮಾಸ್ತಿಗೌಡ್ರು, ಸಿದ್ದೇಗೌಡ, ನಾಗೇಶ್, ಶ್ರೀ ಮಲ್ಲಮ್ಮ, ಕೆಂಪಣ್ಣ, ವಲಯ ಮೇಲ್ವಿಚಾರಕ ಅರುಣ್ ಕುಮಾರ್, ಊರ್ಡಿಗೆರೆ ವಲಯದ ಮೇಲ್ವಿಚಾರಕರಾದ ಲೋಕೇಶ್.ಹೆಚ್.ಎಸ್, ಹೊನ್ನುಡಿಕೆ ವಲಯದ ಮೇಲ್ವಿಚಾರಕ ಮಹಾಂತೇಶ್ .ಬಿ. ಹಾಗೂ ಹೆಬ್ಬೂರು ವಲಯದ ಸೇವಾ ಪ್ರತಿನಿಧಿಗಳು ಸ್ವಸಹಾಯ ಸಂಘದ ಸದಸ್ಯರು ಪೂಜಾ ಸಮಿತಿಯ ಎಲ್ಲಾ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.