ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ
ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತರಿಗೆ ಆತಂಕ ಎದುರಾಗಿದೆ. ಸಾಲ ಮರು ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದ ದಾರಿ ಕಾಣದೆ ಕಂಗಾಲಾಗಿದ್ದಾರೆ.
ಬಸವರಾಜ ಹಿರೇಮಠ
ಧಾರವಾಡ [ಸೆ.02]: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆ ಹುಟ್ಟುಹಾಕಿರುವ ಗೊಂದಲ ಇನ್ನೂ ಬಗೆಹರಿಯುವಂತೆ ಕಾಣುತ್ತಿಲ್ಲ. ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ಬಂದರೂ ಕೃಷಿಗಾಗಿ ಸಾಲ ಮನ್ನಾ ಮಾಡಿದ ಫಲಾನುಭವಿ ರೈತರಿಗೆ ಬ್ಯಾಂಕ್ಗಳಿಂದ ನೋಟಿಸ್ ಬರುವುದು ನಿಂತಿಲ್ಲ. ಸಾಲ ಮನ್ನಾ ಆಗಲಿದೆ ಎನ್ನುವುದಕ್ಕೆ ಪೂರಕವಾಗಿ ಸರ್ಕಾರದಿಂದ ಋುಣಮುಕ್ತ ಪತ್ರ ಬಂದ ಬಳಿಕವೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಹತ್ತಾರು ರೈತರಿಗೆ ಬ್ಯಾಂಕ್ ನೋಟಿಸ್ ಬಂದಿದೆ. ಇದರಿಂದ ಸಾಲ ಮನ್ನಾ ಆಗೋ ಖುಷಿಯಲ್ಲಿದ್ದ ರೈತರೀಗ ಬ್ಯಾಂಕ್ ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ಒಂದು ಕಡೆ ಸಾಲವೂ ಮನ್ನವೂ ಆಗದೆ ಬಡ್ಡಿ ಕೈಮೀರಿ ಹೋಗಿದೆ, ಇನ್ನೊಂದು ಕಡೆ ಈ ಬಾರಿ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಈ ರೈತರೆಲ್ಲ ಪ್ರತಿ ವರ್ಷ ತಾವು ಪಡೆದ ಬೆಳೆಸಾಲದ ಬಡ್ಡಿ ತುಂಬಿ ನವೀಕರಣ ಮಾಡಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಲಮನ್ನಾ ಘೋಷಣೆ ನಂಬಿ ಕಳೆದ ವರ್ಷದಿಂದ ಸಾಲ ನವೀಕರಣ ಮಾಡಿಕೊಂಡಿರಲಿಲ್ಲ. ಇದೀಗ ಅಂತಹ ರೈತರು ಪಡೆದ ಸಾಲದಲ್ಲಿ ಬರೀ 25 ಸಾವಿರ ರು. ಮಾತ್ರ ಮನ್ನಾ ಆಗಿದ್ದು, ಉಳಿದ ಬೆಳೆಸಾಲಕ್ಕೆ ಬ್ಯಾಂಕ್ಗಳು ಶೇ.14ರಷ್ಟುಬಡ್ಡಿ ವಿಧಿಸಿ ನೋಟಿಸ್ ನೀಡಿದ್ದಾರೆ. ಯಾರು ನಿರಂತರ ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ರು. ಮನ್ನಾ ಮಾಡಲಾಗಿದೆ. ಇದು ಸರ್ಕಾರದ ನಿಯಮ. ಅದರಂತೆಯೇ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಕುರಿತು ಬಹುತೇಕ ರೈತರಿಗೆ ಸರಿಯಾದ ಮಾಹಿತಿಯೇ ಇಲ್ಲ, ಜತೆಗೆ ಆ ರೀತಿಯ ನಿಯಮಾವಳಿ ಇದ್ದರೆ ಋುಣಮುಕ್ತ ಪತ್ರ ಮನೆಗೆ ಕಳುಹಿಸಿ ಯಾಕೆ ಮೋಸ ಮಾಡಬೇಕಿತ್ತು ಎಂದು ಆಕ್ರೋಶದಿಂದ ರೈತರು ಪ್ರಶ್ನಿಸುತ್ತಿದ್ದಾರೆ.
ಬಡ್ಡಿ ಶೇ.4 ರಿಂದ 14ಕ್ಕೇರಿಕೆ: ಪ್ರತಿ ವರ್ಷದಂತೆ ಬೆಳೆಸಾಲ ನವೀಕರಣ ಮಾಡಿಕೊಂಡಿದ್ದರೆ ರೈತರು ಶೇ.4ರ ಪ್ರಮಾಣದಲ್ಲಿ ಬಡ್ಡಿ ತುಂಬಬೇಕಾಗಿತ್ತು. ಆದರೆ, ಇದೀಗ ನಿಯಮಾವಳಿ ಪ್ರಕಾರ ಶೇ.11 ರಿಂದ ಶೇ.14 ರಷ್ಟುಬಡ್ಡಿ ತುಂಬಬೇಕು. ನೆರೆಗೆ ಸಿಲುಕಿ ಬೆಳೆ ಕಳೆದುಕೊಂಡ ರೈತರು ಈಗ ಬೆಳೆಯೂ ಕೈಸೇರದೆ, ಆ ಕಡೆ ಸಾಲದ ಮೊತ್ತವೂ ಜಾಸ್ತಿಯಾಗಿ ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಯಡಿಯೂರಪ್ಪ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೋಟಿಸ್ನಲ್ಲೇನಿದೆ?: ಸರ್ಕಾರದ ಬೆಳೆ ಸಾಲಮನ್ನಾ ಯೋಜನೆ 2018ರ ಅನ್ವಯ ತಮ್ಮ ಖಾತೆಗೆ 25000 ರು. ಜಮೆ ಆಗಿದೆ. ಈಗ 2019ರ ಮಾರ್ಚ್ 31ಕ್ಕೆ ಉಳಿದ ಬೆಳೆಸಾಲಕ್ಕೆ ಬಡ್ಡಿ ಸೇರಿ ತುಂಬಬೇಕಿದೆ. ತಾವೂ ಈ ಕೂಡಲೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಬಾಕಿ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಬೆಳೆ ಸಾಲ ಪಡೆಯಬಹುದು ಎಂದು ತಿಳಿಸಲಾಗಿದೆ.
ಸಾಲಮನ್ನಾ ಆಯ್ತು ಎನ್ನುವಷ್ಟರಲ್ಲೇ ಮನೆಗೆ ಬ್ಯಾಂಕ್ನಿಂದ ಬೆಳೆಸಾಲ ತುಂಬುವ ನೋಟಿಸ್ ಬಂದಾಗ ಶಾಕ್ ಆದೆವು. ಬರೀ 25 ಸಾವಿರ ರು. ಮಾತ್ರ ಮನ್ನಾ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದರೆ ಸರ್ಕಾರವನ್ನೇ ಕೇಳಿ ಎನ್ನುತ್ತಾರೆ. 5 ಲಕ್ಷ ರು. ಸಾಲ ಪಡೆದಿದ್ದು ಅದೀಗ 6,08,642 ರು. ಆಗಿದೆ. 1.80 ಲಕ್ಷ ರು. ಬಡ್ಡಿ ರೂಪದಲ್ಲಿದ್ದು ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.
-ಪ್ರವೀಣ ಭೂಸನೂರಮಠ, ನೋಟಿಸ್ ಪಡೆದಿರುವ ಕುಂದಗೋಳದ ರೈತ
2 ಲಕ್ಷ ರುಪಾಯಿ ಬೆಳೆಸಾಲ ಮನ್ನಾ ಮಾಡ್ತೇವಿ ಎಂದು ಹೇಳಿ ಬರೀ 25 ಸಾವಿರ ಮಾತ್ರ ಮನ್ನಾ ಮಾಡಿ ಸರ್ಕಾರ ಮೋಸ ಮಾಡಿದೆ. ಬ್ಯಾಂಕ್ನವರು ಈಗ ಏನೇನೋ ರೂಲ್ಸ್ ಹೇಳುತ್ತಿದ್ದಾರೆ. ಮನೆಗೆ ನೋಟಿಸ್ ಕಳುಹಿಸಿದ್ದು ಏನು ಮಾಡಬೇಕೆಂಬ ಗೊಂದಲದಲ್ಲಿದ್ದೇವೆ. ಇಷ್ಟುವರ್ಷ ಬರಗಾಲದಿಂದ ಬೆಳೆ ಬಂದಿಲ್ಲ. ಈ ಬಾರಿ ವಿಪರೀತ ಮಳೆಯಾಗಿ ದಿಕ್ಕೇ ತೋಚದಂತಾಗಿದೆ. ಯಡಿಯೂರಪ್ಪ ಸರ್ಕಾರವಾದರೂ ನಮ್ಮಂತ ರೈತರ ಸಂಕಷ್ಟಆಲಿಸಬೇಕು.
- ಆನಂದಪ್ಪ ಬಸಪ್ಪ ಸುಣಗಾರ, ನೋಟಿಸ್ ಪಡೆದಿರುವ ಕುಂದಗೋಳ ರೈತರು
ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹ ರೈತರ ಲಕ್ಷ ಸಾಲ ಮನ್ನಾ ಮಾಡಲಾಗಿದೆ, ಯಾರು ನಿರಂತರ ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ಮನ್ನಾ ಮಾಡಲಾಗಿದೆ. ಸರ್ಕಾರದ ನಿಯಮಾವಳಿ ತಿಳಿದು ಬೆಳೆಸಾಲ ನವೀಕರಣ ಮಾಡಿಕೊಂಡಿದ್ದರೆ ಈಗ ಬಡ್ಡಿ ಜಾಸ್ತಿ ಆಗುತ್ತಿರಲಿಲ್ಲ. ಈ ಗೊಂದಲ ಮೂಡುತ್ತಿರಲಿಲ್ಲ.
- ಈಶ್ವರನಾಥ್, ಲೀಡ್ ಬ್ಯಾಂಕ್ ಮ್ಯಾನೇಜರ್, ಧಾರವಾಡ
(ಸಾಂದರ್ಭಿಕ ಚಿತ್ರ )