ಜ್ವರ ಚಿಕಿತ್ಸೆಗೆ ಬೆಂಗಳೂರಿನ ಕೋಣನಕುಂಟೆ ಖಾಸಗಿ ಆಸ್ಪತ್ರೆಗೆ ಹೋದ ಬಾಲಕನಿಗೆ ವೈದ್ಯರು ನೀಡಿದ ಇಂಜೆಕ್ಷನ್‌ನಿಂದ ಪ್ರಾಣಪಕ್ಷಿಯೇ ಹಾರಿಹೋಗಿದೆ. 

ಬೆಂಗಳೂರು (ಅ.10): ನಗರದ ಕೋಣನಕುಂಟೆಯ ಖಾಸಗಿ ಆಸ್ಪತ್ರೆಗೆ ಜ್ವರ ಬಂದಿದೆ ಎಂದು ಚಿಕಿತ್ಸೆ ಪಡೆಯಲು ಹೋದ ಬಾಲಕನಿಗೆ ವೈದ್ಯರು ಇಂಜೆಕ್ಷನ್‌ ಮಾಡಿದ್ದು, ಅದು ರಿಯಾಕ್ಷನ್‌ ಆಗಿದೆ. ಇದಾದ ನಂತರ ಮತ್ತೊಮ್ಮೆ ವೈದ್ಯರು ತಮ್ಮ ತಪ್ಪನ್ನು ಮುಂದುವರೆಸಿದ್ದು, ಬಾಲಕನ ಜೀವವೇ ಹೊರಟು ಹೋಗಿದೆ. 

ವೈದ್ಯರ ಎಡವಟ್ಟಿನಿಂದ ಹತ್ತು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಮೃತ ಬಾಲಕನನ್ನು ಪ್ರೀತಮ್ ನಾಯ್ಕ್ (10) ಎಂದು ಗುರುತಿಸಲಾಗಿದೆ. ಬಾಲಕನಿಗೆ ಜ್ವರ ಬಂದಿದೆ ಎಂದು ಪೋಷಕರು ಕೋಣನಕುಂಟೆ ಬಳಿಯ ಖಾಸಗಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ಒಂದು ಇಂಜೆಕ್ಷನ್‌ ನೀಡಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಇಂಜೆಕ್ಷನ್‌ ಕೊಟ್ಟ ಜಾಗದಲ್ಲಿ ನೋವು ಕಾಣಿಸಿಕೊಂಡಿದೆ. ಬಳಿಕ ಮರುದಿನವೇ ಮತ್ತದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಬೆಂಗಳೂರು ಹಿಂದೂಗಳಿಗೆ ಶಾಕಿಂಗ್‌ ನ್ಯೂಸ್‌: ಗಣೇಶ ಮೆರವಣಿಗೆ ನಿಷೇಧಿಸಿದ ಪೊಲೀಸ್‌ ಇಲಾಖೆ

ಇಂಜೆಕ್ಷನ್‌ ಮಾಡಿದ ಜಾಗದಲ್ಲಿ ಊದಿಕೊಂಡಿದ್ದ ಹಿನ್ನೆಲೆಯಲ್ಲಿ ಜ್ವರವೂ ಕೂಡ ಹೆಚ್ಚಾಇತ್ತು. ಪುನಃ ಅದೇ ಆಸ್ಪತ್ರೆಗೆ ತೆರಳಿದ್ದರಿಂದ ವೈದ್ಯರು ಕೆಲವು ಟಾನಿಕ್ ಮತ್ತು ಮೆಡಿಸಿನ್ ನೀಡಿ ವಾಪಸ್‌ ಕಳುಹಿಸಿದ್ದಾರೆ. ಆದರೂ ಇಂಜೆಕ್ಷನ್‌ ಮಾಡಿದ ಜಾಗದಲ್ಲಿ ನೋವು ಕಡಿಮೆಯಾಗದೆ ಕಾಲು ಊತ ಬಂದಿದೆ. ಪುನಃ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಇಲ್ಲಿ ಏನು ಮಾಡಲು ಆಗಲ್ಲ. ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಅಲ್ಲಿಂದ ಬಾಲಕನನ್ನು ಸಾಗಹಾಕಿದ್ದಾರೆ. ಪೋಷಕರು ಬಾಲಕನನ್ನು ಮತ್ತೊಂದು ಖಾಸಗಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಆಗುವುದಿಲ್ಲಾ ಎಂದಾಗ ರಾಜಾಜಿನಗರ ಇಎಸ್‌ಐ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. 

ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಮಾಡಿದ್ದ ಜಾಗವನ್ನು ಸರ್ಜರಿ ಮಾಡಿದ್ದಾರೆ. ಇದಾದ ಬಳಿಕ ದೇಹದಲ್ಲಿ ಕೆಲ ಸಂಗಾಗಳು ಕೆಲಸ ಮಾಡದ ಬಗ್ಗೆ ತಿಳಿದು ಬಂದಿದ್ದು, ಕಿಡ್ನಿ ಕಾರ್ಯದ ಬಗ್ಗೆ ಪರೀಕ್ಷೆ ಮಾಡಿದಾಗ ಎರಡೂ ಕಿಡ್ನಿಗಳು ಫೇಲ್‌ ಆಗಿರುವುದು ಕಂಡುಬಂದಿದೆ. ಬಳಿಕ ನಾರಾಯಣ ಹೃದಯಾಲಯಕ್ಕೆ ಬಾಲಕನನ್ನು ದಾಖಲು ಮಾಡಲು ಪಾಲಕರು ಮುಂದಾಗಿದ್ದಾರೆ. ಆದರೆ, ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಿಂದ ನಾರಾಯಣ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಬಾಲಕ ಮೃತಪಟ್ಟಿದ್ದಾರೆ. 

ಹೊಸಕೋಟೆ ಬಿರಿಯಾನಿ ಹೋಟೆಲ್‌ ಮಾಲೀಕರಿಂದ ಜಿಎಸ್‌ಟಿ ವಂಚನೆ: ಕೋಟಿ ಕೋಟಿ ಹಣ ವಶಕ್ಕೆ!

ಇನ್ನು ಬಾಲಕನ ಸಾವಿನ ಬಳಿಕ ಕೋಣನಕುಂಟೆ ಪೊಲೀಸ್ ಠಾಣೆಗೆ ಹೋಗಿ ಬಾಲಕನ ಪೋಷಕರು ರಾಜನಂದಿನಿ ಅಸ್ಪತ್ರೆ ವೈದ್ಯರ ವಿರುದ್ದ ದೂರು ನೀಡಿದ್ದಾರೆ. ದೂರಿನ ಅನ್ವಯ CRPC 174C ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

ಘಟನೆಯ ವಿವರ ಇಲ್ಲಿದೆ ನೋಡಿ:

  • ಅ.06 ರಂದು ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದಾರೆ.
  • ಅ.07ರಂದು ಇಂಜೆಕ್ಷನ್‌ ನೀಡಿದ್ದ ಜಾಗದಲ್ಲಿ ಊತ ಕಾಣಿಸಿಕೊಂಡಿದ್ದು, ಪುನಃ ಅದೇ ಖಾಸಗಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
  • ಅ.08ರಂದು ಖಾಸಗಿ ಆಸ್ಪತ್ರೆಯಿಂದ ಸ್ಥಳೀಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
  • ಅ.08ರಂದು ಅದೇ ದಿನ ಸ್ಥಳೀಯ ಖಾಸಗಿ ಆಸ್ಪತ್ರೆ ವೈದ್ಯರ ಸೂಚನೆ ಮೇರೆಗೆ ರಾಜಾಜಿನಗರ ಇಎಸ್‌ಐ ಆಸ್ಪತ್ರೆಗೆ ದಾಖಲು
  • ಅ.08ರ ರಾತ್ರಿ 10 ಗಂಟೆಗೆ ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದೆ
  • ಅ.09ರಂದು ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಿಂದ ನಾರಾಯಣ ಹೃದಯಾಲಕ್ಕೆ ದಾಖಲು ಮಾಡಲು ಯತ್ನ, ಮಾರ್ಗ ಮಧ್ಯದಲ್ಲಿ ಬಾಲಕ ಪ್ರೀತಮ್ ನಾಯ್ಕ್ ಸಾವು