Asianet Suvarna News Asianet Suvarna News

Chikkamagaluru: ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಂದ್ ಮಾಡುವ ನಿರ್ಧಾರ

ಕಸ್ತೂರಿ ರಂಗನ್ ವರದಿ ಜಾರಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸದ ಪರಿಣಾಮ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿ ಜಾರಿ ಮುಂದಾಗಿದೆ.

bandh decision by various organizations against kasturi rangan report gvd
Author
Bangalore, First Published Jul 19, 2022, 12:33 AM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜು.19): ಕಸ್ತೂರಿ ರಂಗನ್ ವರದಿ ಜಾರಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸದ ಪರಿಣಾಮ ಪರಿಸರ ಇಲಾಖೆ ಕಸ್ತೂರಿ ರಂಗನ್ ವರದಿ ಜಾರಿ ಮುಂದಾಗಿದ್ದು, ಆಕ್ಷೇಪಣೆಗಳ ಸಲ್ಲಿಕೆಗೆ 2 ತಿಂಗಳುಗಳ ಕಾಲಾವಕಾಶ ನೀಡಿರುವುದರಿಂದ ರಾಜ್ಯದ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವರದಿ ಜಾರಿಯಿಂದಾಗಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಜನರ ಬದುಕಿನ ಮೇಲೆ ಉಂಟಾಗಲಿರುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ವಿವಿಧ ಕಾಫಿ ಬೆಳೆಗಾರರ ಸಂಘಗಳು ಹಾಗೂ ವಿವಿಧ ದಲಿತ, ಪ್ರಗತಿಪರ, ರೈತ ಸಂಘಟನೆಗಳ ಮುಖಂಡರು ನಿರ್ಣಯ ಕೈಗೊಂಡರು.

ಆಕ್ಷೇಪಣೆಗೆ 60 ದಿನ ಕಾಲಾವಕಾಶ: ರಾಷ್ಟ್ರೀಯ ಹಸಿರು ಪೀಠದ ಆದೇಶ ಮೇರೆಗೆ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಕೇಂದ್ರದ ಪರಿಸರ ಇಲಾಖೆ ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಸಂಘ ಸೇರಿದಂತೆ ದಲಿತ, ಕಾರ್ಮಿಕ, ರೈತ, ಕನ್ನಡ ಪರ ಸಂಘಟನೆಗಳ ಮುಖಂಡರ ಸಭೆ ನಡೆಸಿ ಕೊಡಗು, ಉಡುಪಿ,  ಚಿಕ್ಕಮಗಳೂರು  ಜಿಲ್ಲೆಗಳನ್ನು ಬಂದ್ ಮಾಡಿ ಜನಾಂದೋಲನ ಮೂಡಿಸುವ ನಿರ್ಣಯ ಕೈಗೊಳ್ಳಲಾಯಿತು.ವರದಿ ಜಾರಿ ವ್ಯಾಪ್ತಿಯ ಗ್ರಾಮಪಂಚಾಯತ್ಗಳು ನಿರ್ಣಯ ಕೈಗೊಂಡು ಜಿಲ್ಲಾಡಳಿತ ಸೇರಿದಂತೆ ಸರಕಾರಕ್ಕೆ ವರದಿ ಸಲ್ಲಿಸಿವೆ. 

Chikkamagaluru: ಮಲೆನಾಡಿನಲ್ಲಿ ಮಳೆಯಿಂದ ತರಕಾರಿ ಬೆಳೆಗಳು ಮಣ್ಣು ಪಾಲು!

ಆದರೆ ರಾಜ್ಯ ಸರಕಾರ ಈ ಸಂಬಂಧ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸಲು ವಿಫಲವಾಗಿರುವ ಪರಿಣಾಮ ಮತ್ತೆ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ವರದಿ ಜಾರಿಯಾಗುವ ಭೀತಿ ಎದುರಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳೂ ಈ ಸಂಬಂಧ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಈ ವರದಿ ಜಾರಿಯಾದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರು ರೈತರು, ಕಾಫಿ, ಅಡಿಕೆ ಬೆಳೆಗಾರರು ಸೇರಿದಂತೆ ಕಾರ್ಮಿಕರು, ವರ್ತಕರ ಬದುಕು ನಾಶವಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದರು.ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಆಕ್ಷೇಪಣೆಗಳ ಸಲ್ಲಿಕೆಗೆ ಕೇಂದ್ರದ ಪರಿಸರ ಇಲಾಖೆ 60 ದಿನಗಳ ಕಾಲಾವಕಾಶ ನೀಡಿದ್ದು, ಈಗಾಗಲೇ 15 ದಿನಗಳು ಕಳೆದಿವೆ. 

ಇನ್ನುಳಿದ 45 ದಿನಗಳಲ್ಲಿ ಈ ಸಂಬಂಧ ಅಗತ್ಯ ಜನಜಾಗೃತಿಯೊಂದಿಗೆ ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಬೇಕಿದೆ. ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಜಿಲ್ಲೆಗಳ ಶಾಸಕರು, ಲೋಕಸಭೆ ಸದಸ್ಯರ ನೇತೃತ್ವದಲ್ಲೇ ಹೋರಾಟ ಕೈಗೊಳ್ಳಬೇಕು. ಮೊದಲು ಈ ಜನಪ್ರತಿನಿಧಿಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 4 ಜಿಲ್ಲೆಗಳ ಶಾಸಕರು, ಸಂಸದರೊಂದಿಗೆ ಸಭೆ ನಡೆಸಿ ಅವರ ಮೂಲಕ ಸಿಎಂ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಬೇಕು. ಈ ಸಂಬಂಧ ಜನಪ್ರತಿನಿಧಿಗಳಿಗೆ ಪತ್ರ ಬರೆಯಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. 

ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ: ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಟಿ.ಮೋಹನ್ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ ಯೋಜನೆ ವ್ಯಾಪ್ತಿಯ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸಿ ಸ್ಥಳೀಯರಿಂದ ಗ್ರಾಮ ಪಂಚಾಯತ್‌ಗೆ ಆಕ್ಷೇಪಣೆ ಸಲ್ಲಿಸಲು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ವರದಿ ಜಾರಿಯ ವಿರುದ್ಧ ನಿರ್ಣಯ ಕೈಗೊಂಡು ಗ್ರಾಪಂ ಪಿಡಿಒ ಮೂಲಕ ಸರಕಾರಕ್ಕೆ ನಿರ್ಣಯ ಕಳುಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು. 4 ಜಿಲ್ಲೆಗಳ ವ್ಯಾಪ್ತಿಯ ಶಾಸಕರು ಹಾಗೂ ಎಂಪಿಗಳಿಗೆ ಪತ್ರ ಬರೆದು ತುರ್ತು ಸಭೆಗೆ ಕ್ರಮವಹಿಸಲಾಗುವುದು. 

Chikkamagaluru: 16 ದಿನಗಳಿಂದ ಆರ್ಭಟಿಸಿದ್ದ ಮಳೆಗೆ ಓರ್ವ ಮಹಿಳೆ ಬಲಿ, ಇಬ್ಬರು ನಾಪತ್ತೆ!

ಸಿಎಂ ಭೇಟಿ, ಕೇಂದ್ರ ಸಚಿವರ ಭೇಟಿ ಸಂಬಂಧ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಕಾಫಿ ಬೆಳೆಗಾರರ ಹೋರಾಟಕ್ಕೆ ಎಲ್ಲ ರಾಜಕೀಯ ಪಕ್ಷಗಳು, ದಲಿತ, ರೈತ, ಕಾರ್ಮಿಕ, ಪ್ರಗತಿಪರ ಸೇರಿದಂತೆ ಎಲ್ಲ ಸಂಘಟನೆಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಕಾಫಿ ಬೆಳೆಗಾರರ ಸಂಘದ ಮುಖಂಡರು ಸೇರಿದಂತೆ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಸಲಹೆ, ಸೂಚನೆಗಳನ್ನು ನೀಡಿದರು.

Follow Us:
Download App:
  • android
  • ios