Asianet Suvarna News Asianet Suvarna News

ಸಂಭ್ರಮದಿಂದ ಜರುಗಿದ ಬನಶಂಕರಿ ದೇವಿ ರಥೋತ್ಸವ: ಸಹಸ್ರಾರು ಭಕ್ತರು ಭಾಗಿ

ಲಕ್ಷಾಂತರ ಭಕ್ತರು ಜಯ ಘೋಷಗಳ ಮಧ್ಯ ವಿಜೃಂಭಣೆಯಿಂದ ಜರುಗಿದ ಬಾದಾಮಿ ಬನಶಂಕರಿ ದೇವಿಯ ರಥೋತ್ಸವ| ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಸಿದ್ದರಾಮಯ್ಯ| ಬನಶಂಕರಿ ಜಾತ್ರೆಯಲ್ಲಿ ಸಿದ್ದರಾಮಯ್ಯ ತೆರಳುವ ವೇಳೆ ಮೋದಿ ಮೋದಿ ಎಂದು ಜೈಕಾರ ಕೂಗಿದ ಜನತೆ|

Banashankaridevi Fair Held on Jan. 10 in Badami in Bagalkot District
Author
Bengaluru, First Published Jan 11, 2020, 11:10 AM IST

ಬಾದಾಮಿ(ಜ.11): ಚಾಲುಕ್ಯರ ನಾಡಿನ ಆರಾಧ್ಯ ದೇವತೆ ಉತ್ತರ ಕರ್ನಾಟಕ ಭಾಗದಲ್ಲಿ ಅಧಿದೇವತೆ ಬಾದಾಮಿ ಬನಶಂಕರಿ ದೇವಿಯ ರಥೋತ್ಸವ ಶುಕ್ರವಾರ ಸಂಜೆ ಗೋಧೂಳಿ ಸಮಯದಲ್ಲಿ ಲಕ್ಷಾಂತರ ಭಕ್ತರು ಜಯ ಘೋಷಗಳ ಮಧ್ಯ ವಿಜೃಂಭಣೆಯಿಂದ ಜರುಗಿತು. 

ರಥೋತ್ಸವದಲ್ಲಿ ಜನ ಪಾಲ್ಗೊಂಡು ಉತ್ತತ್ತಿ, ಹಣ್ಣು ಹೂವು ಸಮರ್ಪಿಸುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು. ಬನಶಂಕರಿ ದೇವಿ ಗುಡಿಯ ಪೂಜಾರ ಮನೆತನದವರಿಂದ ಬೆಳಗ್ಗೆ ವಿಶೇಷ ಪೂಜೆ-ಪುನಸ್ಕಾರಗಳೊಂದಿಗೆ ವಿವಿಧ ಪೂಜಾ ವಿಧಿವಿಧಾನಗಳು ಮತ್ತು ರಥಾಂಗ ಹೋಮ ನಡೆದು, ಸಾಯಂಕಾಲ 5 ಗಂಟೆಯ ಹೊತ್ತಿಗೆ ಸಹಸ್ರಾರು ಭಕ್ತರು ದೇವಿಯ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಹೂವು, ಹಣ್ಣು ಕಾಯಿ ಸಮರ್ಪಿಸುವುದರ ಮೂಲಕ ರಥೋತ್ಸವವು ಸಾಂಗವಾಗಿ ನೆರವೇರಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದಕ್ಕಾಗಿ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಭಕ್ತ ವೃಂದವು ಪ್ರತಿವರ್ಷದಂತೆ ಈ ವರ್ಷವು ಧಾರ್ಮಿಕ ಪದ್ಧತಿಯಂತೆ ದೇವಿ ತೇರಿನ ಹಗ್ಗವನ್ನು ಶೃಂಗಾರಗೊಂಡಿದ್ದ ಹಳ್ಳಿ ಬಂಡಿಯಲ್ಲಿ ಕಾಲ್ನಡಿಗೆ ಮೂಲಕ ತೆಗೆದುಕೊಂಡು ಬಂದು ರಥೋತ್ಸವಕ್ಕೆ ಸಮರ್ಪಿಸಿದರು. 

ಬನಶಂಕರಿಯ ಸ್ಥಳದಲ್ಲಿ ಕಿಕ್ಕಿರಿದು ತುಂಬಿದ್ದ ಭಕ್ತರ ಕಂಠದಿಂದ ಹೊರಬಂದ ಜಯಘೋಷಗಳು ಮುಗಿಲು ಮುಟ್ಟುವಂತಿತ್ತು. ಹೂವು, ಹಣ್ಣು, ಕಾಯಿ, ಕರ್ಪೂರ ಅರ್ಪಿಸುವುದರ ಜೊತೆಗೆ ಬಾಳೆಹಣ್ಣು, ಉತ್ತತ್ತಿಗಳನ್ನು ರಥೋತ್ಸ ವಕ್ಕೆ ತೂರಿ ಭಕ್ತಿ-ಭಾವವನ್ನು ಮೆರೆದರು. ಬನದೇವಿ, ಶಾಖಾಂಬರಿ ಎಂತಲೂ ಕರೆಯಿಸಿಕೊಳ್ಳುವ ಬನಶಂಕರಿದೇವಿಯು ಬನಗಳ ಮಧ್ಯೆ ಇರುವ ದೇವತೆ. ತುಂಬಾ ನಯನ ಮನೋಹ ರವಾದ ಪರಿಸರದಲ್ಲಿರುವ ಜಾತ್ರಾ ನಿಮಿತ್ತ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ದೇವಾಲಯ ನೋಡುಗರ ಕಣ್ಮನ ಸೆಳೆಯಿತು. ಎಲ್ಲ ಜಾತಿ-ಜನಾಂಗದ ಆರಾಧ್ಯ ದೇವತೆ ಈ ಬನಶಂಕರಿ. ಕಳೆದ ಜ.2 ರಂದು ನವರಾತ್ರಿ ಘಟಸ್ಥಾಪನೆ ಹಾಕುವುದರ ಮೂಲಕ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರ ಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. 

ಶುಕ್ರವಾರ ರಥೋತ್ಸವ ನಡೆದು ದಿ.15 ರಂದು ಕಳಸ ಇಳಿಸುವುದು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ. ಬನಶಂಕರಿ ಜಾತ್ರೆಯಲ್ಲಿ ಸಿದ್ದರಾಮಯ್ಯ ತೆರಳುವೆ ವೇಳೆ ಅಕ್ಕಪಕ್ಕ ನಿಂತವರಿಂದ ಮೋದಿ ಮೋದಿ ಎಂದು ಜೈಕಾರ ಕೂಗಿದ ಘಟನೆಯೂ ನಡೆಯಿತು. 

ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯಗೆ ಡಿಸಿ ಡಾ. ರಾಜೇಂದ್ರ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಆರ್.ಬಿ. ತಿಮ್ಮಾಪುರ, ಸಿಇಒ ಗಂಗೂಬಾಯಿ ಮಾನಕರ ಸೇರಿದಂತೆ ಇತರರು ಸಾಥ್ ನೀಡಿದರು. 

ಬಿಗಿ ಪೊಲೀಸ್ ಬಂದೋಬಸ್ತ್: 

ಬಾದಾಮಿಯಿಂದ ಬನಶಂಕರಿವರೆಗೂ ರಸ್ತೆಯಲ್ಲಿ ರಥೋತ್ಸವ ಸಂದರ್ಭದಲ್ಲಿ ವಾಹನಗಳ ಸಂಚಾರವು ಸ್ವಲ್ಪಮಟ್ಟಿಗೆ ಅಸ್ತವ್ಯಸ್ತಗೊಂಡಿತ್ತಾದರೂ ಪೊಲೀಸರು ಅದನ್ನು ಸುಗಮಗೊಳಿಸುವಲ್ಲಿ ಯಶಸ್ವಿಯಾದರು. ರಥೋತ್ಸವದ ಸಂದರ್ಭ ದಲ್ಲಿ ಸಿಪಿಐ ಮತ್ತು ಪಿಎಸ್‌ಐ ಅವರ ನೇತೃತ್ವದಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಏರ್ಪಡಿಲಾಗಿತ್ತು. ರಥೋತ್ಸವ ಸಮಯದಂದು ರಸ್ತೆ ಉದ್ದಗಲಕ್ಕೂ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಆಟೋರಿಕ್ಷಾಗಳು, ಬೈ ಕ್‌ಗಳು ಭರಾಟೆ ಎದ್ದು ಕಾಣುತ್ತಿತ್ತು.

ಈ ವೇಳೆ ಮಾತನಾಡಿದ ಬಾದಾಮಿ ಶಾಸಕ ಸಿದ್ದರಾಮಯ್ಯ, ದೇವಿ ಎಲ್ಲರಿಗೂ ಒಳಿತು ಮಾಡಲಿ ತಾಯಿ ಬನಶಂಕರಿ ದೇವಿ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕರ್ನಾಟಕದ ಸಮಸ್ತ ಜನತೆ ಪರವಾಗಿ ದೇವಿಯಲ್ಲಿ ಕೇಳಿಕೊಳ್ಳುತ್ತೇನೆ. ಜಾತ್ರೆಗೆ ಆಗಮಿಸಿದ ಜನಸಾಗರಕ್ಕೆ ಕೈ ಮುಗಿದು ಸದಾ ನಿಮ್ಮ ಆಶಿರ್ವಾದ ನನ್ನ ಮೇಲೆ ಇರಲಿ. ಕ್ಷೇತ್ರದ ಅಭಿವೃದ್ಧಿಗೋಸ್ಕರ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ನಿಮ್ಮ ಮತ್ತು ಬನಶಂಕರಿ ದೇವಿಯ ಆಶೀರ್ವಾದ ಇರಲಿ. ಯಾರೂ ಜಾತ್ರೆಯಲ್ಲಿ ಗದ್ದಲವನ್ನು ಮಾಡದೆ ಚೆನ್ನಾಗಿ ಜಾತ್ರೆ ಮಾಡಿ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios