* ಇಳಿಕೆ ಕಂಡ ಕೊರೋನಾ ಪ್ರಕರಣಗಳು* ನಿರಾಳರಾಗುತ್ತಿರುವ ಜನ* ಲಾಕ್‌ಡೌನ್‌ ತೆರವಾಗುವ ನಿರೀಕ್ಷೆ  

ಬಳ್ಳಾರಿ(ಜೂ.21):  ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟೀವ್‌ ಪ್ರಕರಣಗಳು ದಿನದಿನಕ್ಕೆ ಇಳಿಮುಖಗೊಳ್ಳುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡಿದೆ. ಇದರಿಂದ ಲಾಕ್‌ಡೌನ್‌ ತೆರವಾಗುವ ನಿರೀಕ್ಷೆ ಮೂಡಿಸಿದೆ.

Add Asianetnews Kannada as a Preferred SourcegooglePreferred

ಲಾಕ್‌ಡೌನ್‌ ಜಾರಿ ಬಳಿಕ ತೀವ್ರ ಸಮಸ್ಯೆ ಎದುರಿಸುತ್ತಿರುವ ಅನೇಕ ಉದ್ಯಮಿಗಳು ಹಾಗೂ ವ್ಯಾಪಾರ ವಹಿವಾಟುಗಳು ಜನರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟೂ ಇಕ್ಕಟ್ಟಿಗೆ ಸಿಲುಕಿಸಿದ್ದು, ಲಾಕ್‌ಡೌನ್‌ ತೆರವುಗೊಂಡರೆ ಮತ್ತೆ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣುವ ಸಾಧ್ಯತೆ ಹೆಚ್ಚಿಸಿದೆ.

ಸದ್ಯ ದಿನಸಿ, ತರಕಾರಿ, ಮದ್ಯ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಗದಿತ ವ್ಯಾಪಾರಕ್ಕಷ್ಟೇ ಅನುಮತಿ ಇರುವುದರಿಂದ ಉಳಿದ ಉದ್ಯಮಗಳು ಮಕಾಡೆ ಮಲಗಿವೆ. ಇದರಿಂದ ಎರಡು ಜಿಲ್ಲೆಗಳ ಲಕ್ಷಾಂತರ ಜನರ ಆರ್ಥಿಕ ಸ್ಥಿತಿಗತಿ ಅಯೋಮಯವಾಗಿಸಿದ್ದು, ಕುಟುಂಬ ನಿರ್ವಹಣೆ ಸಮಸ್ಯೆಯಿಂದ ಒದ್ದಾಡುವಂತಾಗಿದೆ.

ಬಳ್ಳಾರಿ- ವಿಜಯನಗರ ಜಿಲ್ಲೆಗಳ ಪೈಕಿ ಭಾನುವಾರ 67 ಪಾಸಿಟಿವ್‌ ಪ್ರಕರಣಗಳು ಮಾತ್ರ ಕಂಡುಬಂದಿರುವುದು ಒಂದಷ್ಟುನೆಮ್ಮದಿ ಮೂಡಿಸಿದೆ. ಜಿಲ್ಲಾಡಳಿತ ನಿತ್ಯ ಸುಮಾರು 4 ಸಾವಿರ ಜನರಿಗೆ ವೈದ್ಯಕೀಯ ಪರೀಕ್ಷೆ ಮಾಡುತ್ತಿದ್ದು, ಪಾಸಿಟಿವ್‌ ಪ್ರಕರಣಗಳು ತೀವ್ರ ಇಳಿಮುಖವಾಗುತ್ತಿವೆ.

ಹೊಸಪೇಟೆ: ತುಂಗಭದ್ರೆ ಒಡಲಿಗೆ ಹರಿದು ಬಂದ ಅಪಾರ ನೀರು..!

ಸಾವಿನ ಪ್ರಮಾಣದಲ್ಲೂ ತೀವ್ರ ಕುಸಿತ ಕಂಡಿರುವುದು ಸೋಂಕಿನ ಭಯದಿಂದ ಮನೆಯಾಚೆ ಬರದವರು ನಿರಾಳಗೊಳ್ಳುವಂತಾಗಿದೆ. ಏತನ್ಮಧ್ಯೆ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ಮಾತ್ರ ಇಳಿಮುಖವಾಗದಿರುವುದು ಆತಂಕ ಮೂಡಿಸಿದೆ. ಕಳೆದ ಶುಕ್ರವಾರ 14 ಜನ ಸೋಂಕಿತರು, ಶನಿವಾರ 10 ಜನ ಸೋಂಕಿತರು ಹಾಗೂ ಭಾನುವಾರ 12 ಜನ ಸೋಂಕಿತರು ಸಾವಿಗೀಡಾಗಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸಾವಿನ ಸಂಖ್ಯೆಯಲ್ಲಿ ಸಹ ತೀವ್ರ ಕುಸಿತ ಕಂಡಿದೆ. ಆದರೆ, ಇದೀಗ ದೃಢಗೊಳ್ಳುತ್ತಿರುವ ಸಾವಿನ ಪ್ರಕರಣಗಳು ಕಳೆದ 12ರಿಂದ 15 ದಿನಗಳ ಹಿಂದೆ ದಾಖಲಾಗಿದ್ದ ಸೋಂಕಿತರ ಸಾವಿನ ಪ್ರಕರಣಗಳಾಗಿದ್ದು, ಇತ್ತೀಚೆಗೆ ದಾಖಲಾದ ಬಹುತೇಕರು ಗುಣಮುಖರಾಗುತ್ತಿದ್ದಾರೆ.

ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿನ ಒಟ್ಟು 1925 ಸಕ್ರೀಯ ಪಾಸಿಟಿವ್‌ ಪ್ರಕರಣಗಳ ಪೈಕಿ ಬಳ್ಳಾರಿ ತಾಲೂಕಿನಲ್ಲಿ 748, ಸಂಡೂರು 140, ಸಿರುಗುಪ್ಪ 154, ಕೂಡ್ಲಿಗಿ 102, ಹಡಗಲಿ 115, ಹೊಸಪೇಟೆ 315, ಹಗರಿಬೊಮ್ಮನಹಳ್ಳಿ 172 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 170 ರಷ್ಟಿವೆ.