ಈ ಮಾರ್ಗ ಆಗಸ್ಟ್‌ ಅಂತ್ಯದಿಂದ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಬುಧವಾರ ಸಂಜೆ ಕೆ.ಆರ್‌.ಪುರದಿಂದ ಹೊರಟ ರೈಲು 15 ಕಿಮೀ ವೇಗದಲ್ಲಿ ನಿಧಾನ ಗತಿಯಲ್ಲಿ ಸಂಚರಿಸಿ ಪುನಃ ವಾಪಸ್ಸಾಯಿತು. ಈ ವೇಳೆ ಬಿಎಂಆರ್‌ಸಿಎಲ್‌ ರೈಲಿನ ಕಾರ್ಯಾಚರಣೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ರೈಲು ಹಾಗೂ ಪ್ಲಾಟ್‌ಫಾರ್ಮ್‌ ನಡುವಿನ ಅಂತರ, ವಯಡಕ್ಟ್, ರೈಲಿನ ಸಾಗುವಿಕೆ ಸೇರಿ ಹಲವು ಬಗೆಯ ಮಾಹಿತಿಯನ್ನು ಪರಿಶೀಲಿಸಿದರು.

ಬೆಂಗಳೂರು(ಜು.27): ನಮ್ಮ ಮೆಟ್ರೋ ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ (2.1ಕಿಮೀ) ನಡುವೆ ಬುಧವಾರದಿಂದ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಮುಂದಿನ ಹದಿನೈದು ದಿನಗಳ ಕಾಲ ನಡೆಯಲಿದೆ.

ಈ ಮಾರ್ಗ ಆಗಸ್ಟ್‌ ಅಂತ್ಯದಿಂದ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಬುಧವಾರ ಸಂಜೆ ಕೆ.ಆರ್‌.ಪುರದಿಂದ ಹೊರಟ ರೈಲು 15 ಕಿಮೀ ವೇಗದಲ್ಲಿ ನಿಧಾನ ಗತಿಯಲ್ಲಿ ಸಂಚರಿಸಿ ಪುನಃ ವಾಪಸ್ಸಾಯಿತು. ಈ ವೇಳೆ ಬಿಎಂಆರ್‌ಸಿಎಲ್‌ ರೈಲಿನ ಕಾರ್ಯಾಚರಣೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ರೈಲು ಹಾಗೂ ಪ್ಲಾಟ್‌ಫಾರ್ಮ್‌ ನಡುವಿನ ಅಂತರ, ವಯಡಕ್ಟ್, ರೈಲಿನ ಸಾಗುವಿಕೆ ಸೇರಿ ಹಲವು ಬಗೆಯ ಮಾಹಿತಿಯನ್ನು ಪರಿಶೀಲಿಸಿದರು.

ಸಿಬ್ಬಂದಿಗಳ ನಿರ್ಲಕ್ಷಕ್ಕೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸಾವು, ಎಫ್‌ಐಆರ್‌ ದಾಖಲು

ಪ್ರಾಯೋಗಿಕ ಚಾಲನೆ ವೇಳೆ ಸಿಗ್ನಲಿಂಗ್‌ ವ್ಯವಸ್ಥೆ, ಟ್ರ್ಯಾಕ್‌ ಸಾಮರ್ಥ್ಯ, ವೇಗ ಹಾಗೂ ನಿಧಾನ ಚಾಲನೆ, ದ್ವಿಮುಖ ಚಾಲನೆ ಹಾಗೂ ಎರಡೂ ಟ್ರ್ಯಾಕ್‌ಗಳಲ್ಲಿನ ಸಂಚಾರ, ನಿಲುಗಡೆ ಸೇರಿದಂತೆ ಇತರೆ ತಾಂತ್ರಿಕ ವಿಚಾರ ಗಳನ್ನು ಪರಿಗಣಿಸಲಾಗುವುದು. ನ್ಯೂನತೆ ಕಂಡುಬಂದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಕಳೆದ ಮಾ.25ರಂದು ವೈಟ್‌ಫೀಲ್ಡ್‌-ಕೆ.ಆರ್‌.ಪುರ 13 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆದರೆ, ಕೆ.ಆರ್‌.ಪುರ-ಬೈಯ್ಯಪ್ಪನಹಳ್ಳಿ ಮೆಟ್ರೋ ಇನ್ನೂ ಸಿದ್ಧವಾಗದ ಕಾರಣ ಎರಡೂ ಮೆಟ್ರೋ ಮಾರ್ಗದ ನಡುವೆ ಸಂಚಾರ ಆರಂಭವಾಗಿರಲಿಲ್ಲ. ಹೀಗಾಗಿ ಈಗಲೂ ಪ್ರಯಾಣಿಕರು 2.1ಕಿಮೀ ಫೀಡರ್‌ ಬಸ್‌ನಲ್ಲಿ ಅಥವಾ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾರೆ.

ಶೀಘ್ರ ಕೆಂಗೇರಿ-ಚಲ್ಲಘಟ್ಟ ಪ್ರಾಯೋಗಿಕ ಚಾಲನೆ

ಇನ್ನು, ನೇರಳೆ ಮಾರ್ಗದ ಇನ್ನೊಂದು ತುದಿ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿಮೀ ಮಾರ್ಗದಲ್ಲಿ ಸಹ ಮೂರ್ನಾಲ್ಕು ದಿನಗಳಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಅಂಜುಮ್‌ ಪರ್ವೇಜ್‌ ತಿಳಿಸಿದ್ದಾರೆ. ಈಗಾಗಲೇ ಎರಡೂ ಕಡೆಯ ತಪಾಸಣೆಗೆ ಆಗಮಿಸುವ ಸಂಬಂಧ ಮೆಟ್ರೋ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ತಪಾಸಣೆಗೆ ಆಗಮಿಸಲು ಆಗಸ್ಟ್‌ 20ರ ಬಳಿಕದ ದಿನಾಂಕದ ಕುರಿತು ಕೇಳಿದ್ದೇವೆ. ಸಿಎಂಆರ್‌ಎಸ್‌ ತಪಾಸಣೆಯ ವಾರದ ಬಳಿಕ ವಾಣಿಜ್ಯ ಸಂಚಾರ ಆರಂಭಿಸುವ ಬಗ್ಗೆ ಯೋಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

ಇವೆರಡೂ ಮಾರ್ಗ ಜನಸಂಚಾರಕ್ಕೆ ಮುಕ್ತವಾದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಈಗಿನದಕ್ಕಿಂತ 75 ಸಾವಿರ ಹೆಚ್ಚುವ ನಿರೀಕ್ಷೆಯಿದ್ದು, ಸರಾಸರಿ 6.2 ಲಕ್ಷದಿಂದ 7 ಲಕ್ಷದವರೆಗೆ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಮೆಟ್ರೊ 2.1 ಕಿ.ಮೀ. ಹಾಗೂ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿ.ಮೀ. ಮೆಟ್ರೊ ಜನಸಂಚಾರಕ್ಕೆ ಮುಕ್ತವಾದರೆ ಚಲ್ಲಘಟ್ಟ-ವೈಟ್‌ಫೀಲ್ಡ್‌ವರೆಗಿನ 43.5 ಕಿ.ಮೀ. ನೇರಳೆ ಮಾರ್ಗ ಪೂರ್ಣವಾದಂತಾಗಲಿದೆ.