ಆನೆಗಳ ಹಿಮಡಿನಿಂದ ಬೇರ್ಪಟ್ಟಿದ್ದ ಆನೆ ಮರಿಯೊಂದು ಆತಂಕದಿಂದ ಊರಿನಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದ ಜನರು ಅದನ್ನು ರಕ್ಷಿಸಿ ಕಾಡಿಗೆ ಸೇರಿದ್ದಾರೆ. 

ಆನೇಕಲ್‌ [ಜ. 13]: ಆನೆಗಳು ಹಿಂಡಿನಿಂದ ಬೇರ್ಪಟ್ಟಆನೆ ಮರಿಯೊಂದು ತಮಿಳುನಾಡಿನ ಹೊಸೂರು ತಾಲೂಕಿನ ಅರಗಂ ಗ್ರಾಮದ ಒಳಗೆ ಪ್ರವೇಶಿಸಿದ ಘಟನೆ ಭಾನುವಾರ ನಡೆದಿದೆ.

Add Asianetnews Kannada as a Preferred SourcegooglePreferred

ಸಮೀಪದಲ್ಲೆಲ್ಲೂ ತಾಯಿ ಆನೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಗ್ರಾಮಸ್ಥರು ಆನೆ ಮರಿಗೆ ಇಷ್ಟವಾದ ಕಬ್ಬು ಬೆಲ್ಲ, ಬಾಳೆ ಹಣ್ಣನ್ನು ದೂರದಿಂದ ಎಸೆದು ಸಂತಸ ಪಟ್ಟರು.

ಈ ಪರಿಯ ಉಪಚಾರವನ್ನು ಪಡೆದ ಆನೆ ಮರಿ ಸ್ವಲ್ಪ ಸ್ವಲ್ಪ ಸಹಕರಿಸುವಂತೆ ಕಂಡಿತು. ವಿಷಯ ತಿಳಿದ ನೆರೆ ಹೊರೆಯ ನೂರಾರು ಗ್ರಾಮಸ್ಥರು ಜಮಾಯಿಸಿ ಆನೆ ಮರಿಯ ತುಂಟಾಟ ನೋಡುವುದರಲ್ಲಿ ತಲ್ಲೀನರಾದರು.

ಯುವಕ ತಂಡ ಬೆಳಕಿರುವಾಗಲೇ ಆನೆ ಮರಿಯನ್ನು ಸ್ವಸ್ಥಾನ ಸೇರಿಸಲು ಸಂಕಲ್ಪ ಮಾಡಿ ಹರಸಾಹಸ ಪಟ್ಟು ಕಾಡಿನೆಡೆಗೆ ತಲುಪಿಸುವಲ್ಲಿ ಯಶಸ್ವಿಯಾದರು. ಶನಿವಾರ ಸಂಜೆ ಆನೆಗಳ ಗುಂಪೊಂದು ಅರಗ ಗ್ರಾಮದ ಹೊರ ವಲಯದಲ್ಲಿ ಬೀಡುಬಿಟ್ಟಿದ್ದು ಬೆಳಗಾದಂತೆ ಕಾಡಿನತ್ತ ಹೊರಟವು. ಗುಂಪಿನಿಂದ ಬೇರ್ಪಟ್ಟಮರಿ ಆನೆ ದಾರಿ ತಪ್ಪಿ ಗ್ರಾಮದೊಳಗಿನ ಓಣಿಗಳಲ್ಲಿ ಯಾವುದೇ ಭಯ ಅಂಜಿಕೆ ಇಲ್ಲದೇ ನಡೆದಾಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳ್ಳಂಬೆಳಗ್ಗೆ ನಾಯಿಗಳ ಬೊಗಳುತ್ತಿದ್ದವು. ಇದರಿಂದ ಎಚ್ಚೆತ್ತ ಗ್ರಾಮಸ್ಥರಿಗೆ ಹೊಸ ಅತಿಥಿಯನ್ನು ಕಂಡು ಸಂತಸಪಡುವ ಜೊತೆಗೆ ಉಪಚಾರ ನಡೆಸಿ ಕಾಡಿನತ್ತ ಬಿಟ್ಟು ಬಂದದ್ದು ಇನ್ನಷ್ಟುಖುಷಿ ತಂದಿತು ಎಂದು ಯುವಕ ತಂಡದ ಮಂಜುನಾಥ್‌ ಹೇಳೀದರು.

ವಿಷಯ ತಿಳಿದ ಅರಣ್ಯ ಸಿಬ್ಬಂದಿ ಗ್ರಾಮಸ್ಥರ ಸಮಯೋಚಿತ ನಿರ್ಧಾರವನ್ನು ಶ್ಲಾಘಿಸಿದ್ದಾರೆ.