ಸಾರ್ವಜನಿಕರಿಗೆ ಉಚಿತ ಆಟೋ ಸೇವೆ| ಆಟೊ ಚಾಲಕನಿಗೆ ಅರಸಿ ಬಂದ ಬುಕ್ ಆಫ್ ರೇಕಾರ್ಡ್ಸ್ ಪ್ರಶಸ್ತಿ| ಬಡವರಿಗಾಗಿಯೇ  ಅಂಬ್ಯುಲೆನ್ಸ್ ಮಾಡುವ ಆಸೆ ಹೊತ್ತ ಸಮಾಜ ಸೇವಕ ಮಂಜುನಾಥ|

ಬೆಳಗಾವಿ(ಜ.13): ಸಾರ್ವಜನಿಕರಿಗೆ ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಕಾರ್ಯ ಮಾಡಿದ ಹಿನ್ನೆಲೆಯಲ್ಲಿ ಓರ್ವ ಆಟೊ ಚಾಲಕನಿಗೆ ಬುಕ್ ಆಫ್ ರೇಕಾರ್ಡ್ಸ್ ಕೊಡಮಾಡುವ ರಾತ್ರಿಯ ಆಂಬ್ಯುಲೆನ್ಸ್ ಮನುಷ್ಯ (Nocturnal ambulance Man) ಎಂಬ ಪ್ರಶಸ್ತಿ ಲಭಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಪೂಜಾರಿ ಅವರು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ತುರ್ತು ಪರಿಸ್ಥಿತಿಯಲ್ಲಿ ತಡರಾತ್ರಿ ಈವರೆಗೆ 150 ಕ್ಕೂ ಹೆಚ್ಚು ಜನರನ್ನು ಉಚಿತವಾಗಿ ಆಟೋ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರಿಂದ ಇಂಡಿಯಾ ಬುಕ್ ಆಫ್ ರೇಕಾರ್ಡ್ಸ್ ತಮ್ಮ ಸಾಮಾಜಿಕ ಸೇವೆಯನ್ನು ಗಮನಿಸಿ ಮೆಡಲ್ ಹಾಗೂ ಗೌರವ ಪ್ರಮಾಣ ಪತ್ರವನ್ನು ನೀಡಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಆಟೋ ಚಲಾಯಿಸುತ್ತಿರುವದರಿಂದ ಆಟೋ ನಿರ್ವಹಣೆಗಾಗಿ ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ ಸ್ಥಳೀಯವಾಗಿ ಕೇಬಲ್ ಆಪರೇಟರಾಗಿ ಕೆಲಸ ಮಾಡಿ ಬಂದಂತ ಹಣದಲ್ಲಿಯೇ ಆಟೋ ನಿರ್ವಹಣೆ ಮಾಡುತ್ತಿದ್ದೇನೆ. ಬರುವ ದಿನಗಳಲ್ಲಿ ಆಂಬ್ಯುಲೆನ್ಸ್ ಖರೀದಿಸಿ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದಾಗಿ ತಿಳಿಸಿದರು. 

ಸಮಾಜ ಸೇವಕ ವೀರೇಶ ಕಿವಡಸಣ್ಣವರ ಮಾತನಾಡಿ, ಮಲ್ಟಿ ಟಾಸ್ಕ್ ಸೇವೆ ಮೂಲಕ ಸಮಾಜ ಸೇವೆ ಮಾಡುವ ಮಂಜುನಾಥ ಅವರಿಗೆ ಬಡವರಿಗಾಗಿಯೇ ಒಂದು ಅಂಬ್ಯುಲೆನ್ಸ್ ಮಾಡುವ ಆಸೆ ಹೊತ್ತಿದ್ದಾರೆ. ರಕ್ತದಾನ, ದೇಹದಾನ, ಅಂಗಾಂಗ ದಾನದ ಬಗ್ಗೆ ಅವರು ಅಪಾರ ಕಾಳಜಿ ಹೊಂದಿದ್ದಾರೆ. ಅವರ ಸೇವೆ ನಗರದ ಇತರ ಎಲ್ಲರಿಗೂ ಮಾದರಿ ಆಗಬೇಕು ಎಂದರು. 

ಸುದ್ದಿಗೋಷ್ಠಿಯಲ್ಲಿ ನಾಗರತ್ನ ರಾಮಗೌಡರ, ನಿಂಗಪ್ಪ ಪೂಜಾರಿ, ಶಾಂತಕ್ಕ ಪೂಜಾರಿ, ರಾಜಶ್ರೀ ಪೂಜಾರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.