Bagalkot: ಮದುವೆಯಾಗಿ ದೇಗುಲಕ್ಕೆ ಬಂದವನ ಬಂಧನ
* ಮದುವೆಯಾಗಿ ದೇವಿ ದರ್ಶನಕ್ಕೆ ಬಂದಿದ್ದ ಮದುಮಗ ಸಿಐಡಿ ಬಲೆಗೆ
* ಪಿಎಸ್ಐ ಅಕ್ರಮ ಪ್ರಕರಣ: ಕೋಚಿಂಗ್ ಸೆಂಟರ್ನ ಮುಖ್ಯಸ್ಥ ಶ್ರೀಕಾಂತನ ಬಂಧಿಸಿದ ಸಿಐಡಿ
* ಮೇ.14ರಂದು ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದ ಶ್ರೀಕಾಂತ ಚೌರಿ
ರಬಕವಿ-ಬನಹಟ್ಟಿ(ಮೇ.19): ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುವೆಯಾಗಿ ಐದು ದಿನಗಳ ನಂತರ ಮೊದಲ ರಾತ್ರಿಯ ಪೂರ್ವದಲ್ಲಿ ದೇವಿಯ ದರ್ಶನಕ್ಕೆಂದು ದೇವಾಲಯಕ್ಕೆ ಬಂದಿದ್ದ ಮದುಮಗನನ್ನು ಸಿಐಡಿ ಪೊಲೀಸರು ಅಲ್ಲಿಯೇ ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿತಾಲೂಕಿನ ಯರಗಟ್ಟಿಗ್ರಾಮದಲ್ಲಿ ಮಂಗಳವಾರ ನಡೆದಿದೆ. ಈ ಮೂಲಕ ಪಿಎಸ್ಐ ಹುದ್ದೆ ಅಕ್ರಮದ ಘಾಟು ಈಗ ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿಯ ಕೋಚಿಂಗ್ ಸೆಂಟರ್ವೊಂದರ ಮುಖ್ಯಸ್ಥ ಶ್ರೀಕಾಂತ ದುಂಡಪ್ಪ ಚೌರಿ ಬಂಧಿತ ವ್ಯಕ್ತಿ. ಈತ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿಗ್ರಾಮದ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಬಂದಾಗ ಸಿಐಡಿ ಪೊಲೀಸರು ಅಲ್ಲಿಯೇ ಬಂಧಿಸಿದ್ದಾರೆ. ನಂತರ ಆತನನ್ನು ಬನಹಟ್ಟಿಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
Bagalkot: ಇಲಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ..!
ಪಿಎಸ್ಐ ಹುದ್ದೆ ಅಕ್ರಮದಲ್ಲಿ ಶ್ರೀಕಾಂತ್ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಹೊಂದಿದ್ದ ಅನಾಮಧೇಯ ಅರ್ಜಿಯ ಆಧಾರದಡಿ ಸಿಐಡಿ ಪೊಲೀಸರು ಬಾಗಲಕೋಟೆ ಜಿಲ್ಲೆಗೆ ಬಂದಿದ್ದರು. ನಂತರ ಜಮಖಂಡಿ ತಾಲೂಕಿನ ಕೋಚಿಂಗ್ ಸೆಂಟರ್ವೊಂದರ ಮುಖ್ಯಸ್ಥ ಶ್ರೀಕಾಂತ ದುಂಡಪ್ಪ ಚೌರಿ ಕುರಿತು ಮಾಹಿತಿ ಕಲೆಹಾಕಿ ನಂತರ ಬಂಧಿಸಿದ್ದಾರೆ.
14ರಂದು ಮದುವೆಯಾಗಿದ್ದ:
ಮೇ 14ರಂದು ಜಮಖಂಡಿಯಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದ ಶ್ರೀಕಾಂತ ಚೌರಿ, ಕೇವಲ ಐದು ದಿನಗಳ ಅಂತರದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಧಾರವಾಡದಲ್ಲಿನ ಇನ್ಸ್ಫೈರ್ ಇಂಡಿಯಾ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಕೇಂದ್ರದ ಮಾಜಿ ನಿರ್ದೇಶಕನಾಗಿದ್ದ. ಪಿಎಸ್ಐ ಅಭ್ಯರ್ಥಿಗಳಿಂದ ಲಕ್ಷಗಟ್ಟಲೇ ಹಣ ಪಡೆದು ಹುದ್ದೆ ಡೀಲ್ ಮಾಡಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ 6 ದಿನಗಳ ಹಿಂದೆ ಜಮಖಂಡಿಗೆ ಬಂದಿದ್ದ ಸಿಐಡಿ ತಂಡ ಶ್ರೀಕಾಂತನ ಕುರಿತಾಗಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತ್ತು ಎಂದು ಮೂಲಗಳು ತಿಳಿಸಿವೆ.
ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾಳ
ವಿವಾಹದ ಸಂಭ್ರಮದಲ್ಲಿದ್ದ ಶ್ರೀಕಾಂತ್ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿಗ್ರಾಮದ ಯಲ್ಲಮ್ಮ ದೇಗುಲಕ್ಕೆ ಬಂದಾಗ ದೇವಸ್ಥಾನದಲ್ಲೇ ಪೊಲೀಸರು ವಶಕ್ಕೆ ಪಡೆದರು. ನಂತರ ಬನಹಟ್ಟಿ ಠಾಣೆಯಲ್ಲಿ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ವಿಚಾರಣೆಗಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ವಿಸಿಟಿಂಗ್ ಕಾರ್ಡ್ ಕೂಡ ಆತನಿಂದ ಪತ್ತೆಯಾಗಿದೆ ಎನ್ನಲಾಗಿದೆ. ಮಾತ್ರವಲ್ಲ, ಈತ ಪ್ರಭಾವಿ ರಾಜಕೀಯ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಬನಹಟ್ಟಿ ಸಿಪಿಐ ಜಿ.ಕರುಣೇಶಗೌಡ ಮಾತನಾಡಿ, ಸಿಐಡಿ ಪೊಲೀಸರು ಶ್ರೀಕಾಂತ ಎಂಬಾತನನ್ನು ತನಿಖೆಗೆ ಬನಹಟ್ಟಿಠಾಣೆಗೆ ಕರೆತಂದಿದ್ದು ನಂತರದ ಬೆಳವಣಿಗೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂಂದಿದ್ದಾರೆ.