Asianet Suvarna News Asianet Suvarna News

ಚಿತ್ರದುರ್ಗದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ

* ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮ
* ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಬಗ್ಗೆ ಸ್ಮರಿಸುವುದು ಅಗತ್ಯ
* ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ

Amratha Bharathi for Kannada held At Chitradurga rbj
Author
Bengaluru, First Published May 28, 2022, 9:27 PM IST

ಚಿತ್ರದುರ್ಗ, (ಮೇ.28):   ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಸಾವರ್ಕರ್, ಝಾನ್ಸಿಲಕ್ಷ್ಮಿಬಾಯಿ ಸೇರಿದಂತೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನದ ಮೂಲಕ ಭಾರತದ ಸ್ವಾತಂತ್ರ‍್ಯಕ್ಕೆ ಅಡಿಪಾಯ ಹಾಕಲಾಗಿದೆ. ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸುವುದು ಅಗತ್ಯ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ದೇಶ ಸ್ವಾತಂತ್ರ ಪಡೆಯುವಲ್ಲಿ ಸಾವಿರಾರು ದೇಶಭಕ್ತರು ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದೇಶದ ಸ್ವಾತಂತ್ರ ಹೋರಾಟಕ್ಕೆ ಅನೇಕ ಹೋರಾಟಗಾರರನ್ನು ಪ್ರೇರೇಪಿಸಿತ್ತು. ಭಗತ್ ಸಿಂಗ್ ರವರ ಸ್ವಾತಂತ್ರ‍್ಯ ಹೋರಾಟ ಅತ್ಯಂತ ಪ್ರಮುಖವಾಗಿದೆ. ಭಾರತದಲ್ಲಿ ಗಾಂಧೀಜಿ ಅವರು ಅಹಿಂಸೆ ಹಾಗೂ ಉಪವಾಸ ತಂತ್ರದ ಮೂಲಕ ಸ್ವಾತಂತ್ರ‍್ಯ ಪಡೆಯುವುದಕ್ಕೆ ಕಾರಣವಾದರು ಎಂದರು.

ಕರ್ನಾಟಕದ 75 ಸ್ಥಳಗಳಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

ಭಾರತದ ಸ್ವಾತಂತ್ರ‍್ಯದಲ್ಲಿ ಮತ್ತೊಬ್ಬ ಅಪ್ರತಿಮ ದೇಶಭಕ್ತ ಅಂದರೆ ವೀರ ಸಾವರ್ಕರ್. ಭಾರತದ ಸ್ವಾತಂತ್ರಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ನಡೆಸಿದ್ದಾರೆ. ಇವತ್ತಿನ ಯುವ ಸಮುದಾಯ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ದೇಶ ನಡೆದು ಬಂದ ದಾರಿಯ ಇತಿಹಾಸ ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.

ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಮಾತನಾಡಿ, ಭಾರತ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಚಳುವಳಿಗಾರರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆರೆಮನೆಗಳಲ್ಲಿ ಬಂಧಿಸಿ ಇಡಲಾಗುತ್ತಿತ್ತು. ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸಿದ ಮಹಾನ್ ವ್ಯಕ್ತಿಗಳ ಸ್ಮಾರಕಗಳು ಹಾಗೂ ಬಂಧಿಸಿದ ಸ್ಥಳಗಳ ಇತಿಹಾಸದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ತಿಳಿಸುವಂತಹ ಕಾರ್ಯ ಸರ್ಕಾರ ಮಾಡಬೇಕಾಗಿದೆ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಪಠ್ಯಪುಸ್ತಕಗಳಲ್ಲಿ ಸ್ವಾತಂತ್ರ ಹೋರಾಟಗಾರರ ವಿಷಯಗಳನ್ನು ಸೇರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾರತಾಂಭೆಯ ಭಾವಚಿತ್ರ ಪುಷ್ಪ ನಮನ ಸಲ್ಲಿಸಲಾಯಿತು. 75 ಸ್ವಾತಂತ್ರೋತ್ಸವ ಅಂಗವಾಗಿ ವಿಶೇಷ ಶಿಲಾ ಫಲಕವನ್ನು ಅನಾವರಣ ಮಾಡಲಾಯಿತು. ಇತಿಹಾಸ ತಜ್ಞ ಪ್ರೊ. ರಾಜಶೇಖರಪ್ಪ ಬರೆದಿರುವ “ಸ್ವಾತಂತ್ರ ಹೋರಾಟದಲ್ಲಿ ಕರ್ನಾಟಕದ ಚಿತ್ರದುರ್ಗ” ಎಂಬ ಕಿರು ಪುಸ್ತಕವನ್ನು ಬಿಡುಗಡೆ ಮಾಡಿ ಸನ್ಮಾನಿಸಲಾಯಿತು. ಸ್ವಾತಂತ್ರ್ಯ ಹೋರಾಟದ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

ಜಿಲ್ಲಾಧಿಕಾರಿ ಕವಿತಾ. ಎಸ್ ಮನ್ನೀಕೇರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ ಸುರೇಶ್, ನಗರಸಭೆಯ ಸದಸ್ಯರಾದ ತಾರಕೇಶ್ವರಿ, ಅನುರಾಧ, ಮಂಜುನಾಥ್, ಜಯಣ್ಣ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಂಗಸ್ವಾಮಿ, ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು..

Follow Us:
Download App:
  • android
  • ios