ಮುಖ್ಯ ಶಿಕ್ಷಕನಿಂದ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ತಾಲೂಕಿನ ಹೊಸವಾರಂಚಿ ಗ್ರಾಮದ ಶಾಲೆಯ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಮುಖ್ಯಶಿಕ್ಷಕನನ್ನು ಸ್ಥಳಕ್ಕೆ ಕರೆಸಬೇಕು. ಆತನ ವಿರುದ್ದ ಕಠಿಣ ಕ್ರಮವಾಗಬೇಕೆಂದು ಗ್ರಾಮಸ್ಥರು, ಪೋಷಕರು ಆಗ್ರಹಿಸಿದ ಘಟನೆ ಮಂಗಳವಾರ ನಡೆದಿದೆ.
![Allegation of sexual abuse of school children by head teacher snr Allegation of sexual abuse of school children by head teacher snr](https://static-ai.asianetnews.com/images/01hhkbeq3xgam9xp9b5eca9x1q/03_363x203xt.jpg)
ಹುಣಸೂರು : ತಾಲೂಕಿನ ಹೊಸವಾರಂಚಿ ಗ್ರಾಮದ ಶಾಲೆಯ ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಮುಖ್ಯಶಿಕ್ಷಕನನ್ನು ಸ್ಥಳಕ್ಕೆ ಕರೆಸಬೇಕು. ಆತನ ವಿರುದ್ದ ಕಠಿಣ ಕ್ರಮವಾಗಬೇಕೆಂದು ಗ್ರಾಮಸ್ಥರು, ಪೋಷಕರು ಆಗ್ರಹಿಸಿದ ಘಟನೆ ಮಂಗಳವಾರ ನಡೆದಿದೆ.
ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎಸ್. ಕೃಷ್ಣಮೂರ್ತಿ ಆರೋಪಿಯಾಗಿದ್ದು. ತಲೆಮರೆಸಿಕೊಂಡಿದ್ದಾರೆ. ಆತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ಬಳಿ ಜಮಾಯಿಸಿ ಮುಖ್ಯಶಿಕ್ಷಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈತ ಹಲವಾರು ದಿನಗಳಿಂದ ಶಾಲೆಯ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅಲ್ಲದೆ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಕಳೆದ ಶನಿವಾರ ಶಾಲೆಗೆ ಗೈರುಹಾಜರಾಗಿದ್ದನ್ನು ಕಂಡ ಮಕ್ಕಳು ಸಹ ಶಿಕ್ಷಕರ ಮುಂದೆ ತಮ್ಮಗೋಳನ್ನು ಹೇಳಿಕೊಂಡಿದ್ದಾರೆ. ಪೋಷಕರಿಗೂ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಷಯ ತಿಳಿದ ಬಿಇಓ ರೇವಣ್ಣ ಮತ್ತಿತರ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಕ್ಕಳು ಮುಖ್ಯ ಶಿಕ್ಷಕ ಕೃಷ್ಣಮೂರ್ತಿಯಿಂದ ಆಗುತ್ತಿದ್ದ ಕಿರುಕುಳವನ್ನು ಅಧಿಕಾರಿಗಳೊಂದಿಗೆ ತಿಳಿಸಿದ್ದಾರೆ.
ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿರುವ ಮುಖ್ಯ ಶಿಕ್ಷಕನನ್ನು ಕೆಲಸದಿಂದಲೇ ವಜಾ ಮಾಡಬೇಕೆಂದು ಪೋಷಕರು, ಗ್ರಾಮದ ಮುಖಂಡರು ಆಗ್ರಹಿಸಿದರು.
ಈ ಬಗ್ಗೆ ಬಿಇಒ ರೇವಣ್ಣ ಅವರಿಗೆ ಗ್ರಾಮದ ಯಜಮಾನರಾದ ಮಹೇಶ್, ಶಿವಕುಮಾರ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ರಜನಿ, ಮುಖಂಡರಾದ ಮಹೇಶ್, ಎಚ್.ಕೆ. ರಮೇಶ್, ಚಂದ್ರೇಗೌಡ ದೂರು ನೀಡಿದರು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಆರೋಪಿ ವಿರುದ್ದ ಕ್ರಮವಹಿಸುವಂತೆ ಡಿಡಿಪಿಐಯವರಿಗೆ ವರದಿ ನೀಡಿದ್ದೇನೆ. ಅಲ್ಲದೇ ಗ್ರಾಮಾಂತರ ಪೊಲೀಸ್ ಠಾಣೆಗೂ ಸಹ ಕ್ರಮಕ್ಕೆ ದೂರು ನೀಡಲಾಗಿದೆ ಎಂದು ಬಿಇಒ ರೇವಣ್ಣ ತಿಳಿಸಿದ್ದಾರೆ.